ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರ: ಶೈಕ್ಷಣಿಕ ಕಾರ್ಯಾಗಾರಗಳಿಂದ ವಿಷಯ ಕ್ಲಿಷ್ಟಾಂಶಗಳ ಪರಿಹಾರ: ಬಿ.ಇ.ಒ

ಕುಮಟಾ: ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ, ಕ್ಷೇತ್ರ ಶಿಕ್ಷಣಾಧಿಕಾರಗಳ ಕಾರ್ಯಾಲಯ ಕುಮಟಾ, ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿ ಹಾಗೂ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾ ತಾಲೂಕಾ ಪ್ರೌಢಶಾಲೆಗಳ ಕನ್ನಡ ಭಾಷಾ ಶಿಕ್ಷಕರ ಪ್ರಥಮ ಕಾರ್ಯಾಗಾರವನ್ನು ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಇ.ಒ ಕುಮಟಾ ಆರ್ ಎಲ್ ಭಟ್ಟ್ “ಶೈಕ್ಷಣಿಕ ಬದುಕು ಮನುಷ್ಯನ ಜೀವನದಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ ಎನ್ನುವುದನ್ನು ತಿಳಿಸುತ್ತಾ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಬಲೀಕರಿಸುವ ನಿಟ್ಟಿನಲ್ಲಿ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸುವ ಭಾಷೆಯು ವಿದ್ಯಾರ್ಥಿಗಳಲ್ಲಿ ಉತ್ಸಾಹ ಪ್ರೇರಣೆ ಹಾಗೂ ಅಭಿರುಚಿಗಳನ್ನು ಮೂಡಿಸುವಂತಿರಬೇಕು ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂಬ ಪೂರಕ ಮತ್ತು ಪ್ರೇರಕ ನುಡಿಗಳನ್ನಾಡಿದರು”.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ರೇಖಾ ನಾಯ್ಕ ಸಮನ್ವಯಾಧಿಕಾರಿ ಬಿ.ಆರ್.ಸಿ ಕುಮಟಾ ಮಾತನಾಡಿ “ಗುಣಾತ್ಮಕ ಶಿಕ್ಷಣ ನೀಡಬೇಕಾದರೆ ಇಂತಹ ವಿಷಯ ಕಾರ್ಯಗಾರ ಶಿಕ್ಷಕರಿಗೆ ಅತ್ಯಗತ್ಯ ಇಂದಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಮಯವನ್ನು ಮೊಬೈಲ್ ಬಳಕೆಯಲ್ಲಿ ತಲ್ಲೀನರಾಗಿರುವುದು ಅವರ ಭವಿಷ್ಯತ್ತಿಗೆ ಮಾರಕ” ಎಂದು ವಿಷಾದ ವ್ಯಕ್ತಪಡಿಸಿದರು.

ಶ್ರೀಮತಿ ಜಯಶ್ರೀ ಎಮ್ ಮಾತನಾಡಿ ಎಸ್.ಎಸ್.ಎಲ್ ಸಿ ಫಲಿತಾಂಶ ಉನ್ನತೀಕರಣ ಮಾಡುವ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಚಿತ್ರಿಗಿ ಹೈಸ್ಕೂಲ್ ಮುಖ್ಯಾಧ್ಯಾಪಕ ಹಾಗೂ ಕುಮಟಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರoಗ ವಾಗ್ರೇಕರ್‌ರವರು “ಕನ್ನಡ ಭಾಷೆಯ ಶಿಕ್ಷಕರು ಹೆಚ್ಚು ಸೃಜನಶೀಲರಾಗಿದ್ದಾರೆ, ಹೆಚ್ಚೆಚ್ಚು ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ ಉತ್ತಮ ಫಲಿತಾಂಶ ಬರಲು ಕಾರಣೀಭೂತರಾಗಿದ್ದಾರೆ” ಎಂದರು.

ರಾಮನಾಥ ಪ್ರೌಢಶಾಲೆ ಊರಕೇರಿ ಮುಖ್ಯಾಧ್ಯಾಪಕ ಎಸ್.ಜಿ.ಭಟ್ಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿ ಸಹಶಿಕ್ಷಕ ಶ್ರೀ ಸುರೇಶ ಪಿ ಪೈ ಇವರು ಸರ್ವರನ್ನು ಸ್ವಾಗತಿಸಿದರು. ಅಘನಾಶಿನಿ ಪ್ರೌಢಶಾಲೆಯ ಸಹಶಿಕ್ಷಕಿ ಗೀತಾ ಪಟಗಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಮಂಜುಳಾ ಕುಮಟಾಕರ ವಂದಿಸಿದರು.

ನಂತರ ಪಾಂಡುರoಗ ವಾಗ್ರೇಕರ್. ಎಸ್. ವಿ. ಭಟ್ಟರವರು. ರಾಘವೇಂದ್ರ ಭಟ್ಟ್ ಹಾಗೂ ಅಶೋಕ ಭಟ್ಟ್ ಕನ್ನಡ ವಿಷಯದಲ್ಲಿರುವ ಕ್ಲಿಷ್ಟಾಂಶಗಳನ್ನು ಶಿಕ್ಷಕರ ಜೊತೆ ಚರ್ಚಿಸಿ ವಿಷಯ ಮಂಡಿಸಿದರು. ಕಾರ್ಯಾಗಾರಕ್ಕೆ ಆಗಮಿಸಿದ ಶಿಕ್ಷಕರು ಚರ್ಚಿಸಿ ಮಾದರಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿದರು. ಕುಮಟಾ ತಾಲೂಕಿನ ಎಲ್ಲಾ ಪ್ರೌಢಶಾಲಾ ಕನ್ನಡ ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

Exit mobile version