Follow Us On

WhatsApp Group
Big News
Trending

ಭೀಕರ ರಸ್ತೆ ಅಪಘಾತ ನಟಿಯರ ದುರ್ಮರಣ| ವಿಶ್ವ ರಂಗ ಭೂಮಿ ದಿನದಂದೇ ನಟಿಮಣಿಗಳ ದುರಂತ| ವಿಧಿಯ ಕ್ರೂರ ನಾಟಕದಲ್ಲಿ ಕೊನೆಗೊಂಡ ಕಲಾವಿದೆಯರ ಪಾತ್ರ

ಅಂಕೋಲಾ: ನಾಟಕದಲ್ಲಿ ಅಭಿನಯಿಸಲು ಬರುತ್ತಿದ್ದ ನಟಿಮಣಿಗಳೀರ್ವರು , ವಿಧಿಯ ಕ್ರೂರ ನಾಟಕದೆದುರು ತಮ್ಮ ಪಾತ್ರ ಕೊನೆಗೊಳಿಸುವಂತಾದ ಘಟನೆ ವಿಶ್ವರಂಗಭೂಮಿ ದಿನದಂದೇ ನಡೆದು ,ರಂಗಭೂಮಿ ಕಲಾವಿದರನೇಕರ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಜಿಲ್ಲೆಯ ಕಾರವಾರ ಸಮೀಪದ ತೋಡುರಿನಲ್ಲಿ ಮಾ.27 ರ ಭಾನುವಾರ ನಡೆಯಲಿದ್ದ ನಾಟಕದಲ್ಲಿ ಅಭಿನಯಿಸಲು, ದಾವಣಗೆರೆಯಿಂದ ಕಾರವಾರ ಮಾರ್ಗವಾಗಿ ಆಗಮಿಸುತ್ತಿದ್ದ ಸಂದರ್ಭದಲ್ಲಿ ರಾಣಿಬೆನ್ನೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ರಂಗಭೂಮಿ ನಟಿಯರು ದುರಂತ ಸಾವು ಕಂಡಿದ್ದಾರೆ.

ಕಾರವಾರ ಅಂಕೋಲಾ ಭಾಗಗಳಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿ ಕಲಾಪ್ರೇಮಿಗಳ ಮನಸ್ಸು ಗೆದ್ದಿರುವ ಗೀತಾ ದಾವಣಗೆರೆ ಮತ್ತು ಮಂಜುಳಾ ದಾವಣಗೆರೆ ಮೃತ ದುರ್ದೈವಿಗಳಾಗಿದ್ದಾರೆ.

ಪ್ರತಿ ವರ್ಷ ಈ ಭಾಗಗಳಲ್ಲಿ ನೂರಾರು ನಾಟಕ ಪ್ರದರ್ಶನಗಳು ನಡೆಯುತ್ತಿದ್ದು,ಸ್ತ್ರೀ ಪಾತ್ರ ಅಭಿನಯಕ್ಕೆ ರಾಜ್ಯದ ನಾನಾ ಭಾಗಗಳ ಪ್ರಸಿದ್ಧ ನಟಿಯರನ್ನು ಆಹ್ವಾನಿಸಿ,ನಾಟಕ ರಂಗಕ್ಕೆ ಮತ್ತಷ್ಟು ಮೆರಗು ನೀಡುವ ಪ್ರಯತ್ನ ನಡೆಯುತ್ತಿತ್ತು.

ಕಳೆದ ಕೆಲ ವರ್ಷಗಳಿಂದ ಚುನಾವಣೆ ನೀತಿ ಸಂಹಿತೆ, ಕೋವಿಡ್ ಮೊದಲಾದ ಕಾರಣಗಳಿಂದ ರಂಗಭೂಮಿ ಚಟುವಟಿಕೆಗಳ ಮೇಲೆ ಭಾರೀ ಹೊಡೆತ ಬಿದ್ದಿದ್ದು, ನಾನಾ ಕಾರಣಗಳಿಂದ ತೀವ್ರ ಸಂಕಷ್ಟದಲ್ಲಿದ್ದ ರಂಗ ಭೂಮಿ ಕಲಾವಿದರು, ಈ ವರ್ಷ ಸ್ವಲ್ಪ ತಡವಾಗಿಯಾದರೂ ರಂಗಭೂಮಿ ಚಟುವಟಿಕೆಗಳು ಆರಂಭವಾಗಿದ್ದರಿಂದ ಆಶಾ ಭಾವನೆಯಿಂದ ಸಿಕ್ಕಿ ಅವಕಾಶಗಳನ್ನು ಬಿಡದೆ ತಮ್ಮ ಕಲಾ ಸೇವೆ ಸಲ್ಲಿಸುತ್ತ ಜೀವನ ನಿರ್ವಹಣೆ ಮಾಡಿಕೊಳ್ಳಲು ಮುಂದಾದಂತಿತ್ತು.

ಮೃತ ಗೀತಾ ಮತ್ತು ಮಂಜುಳಾ ಸಹ ಈ ವರ್ಷ ಕಾರವಾರ ಮತ್ತು ಅಂಕೋಲಾಗಳಲ್ಲಿ ನಡೆದ ಕೆಲವು ನಾಟಕಗಳಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿ, ನಾಟಕ ಪ್ರಿಯರ ಮನಗೆದ್ದಿದ್ದ ಇದೇ ನಟಿಯರು,ರವಿವಾರ ರಾತ್ರಿ ಕಾರವಾರ ತಾಲೂಕಿನ ತೋಡುರಿನಲ್ಲಿ ನಡೆಯಬೇಕಿದ್ದ ನಾಟಕದಲ್ಲಿ ಅಭಿನಯಿಸಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ಕಾರು ಅಪಘಾತವಾಗಿ, ವಿಧಿಯ ಕ್ರೂರ ನಾಟಕಕ್ಕೆ ಬಲಿಯಾಗುವಂತಾಗಿದೆ.

ವಿಶ್ವ ರಂಗಭೂಮಿ ದಿನದಂದು ಈ ಇಬ್ಬರು ರಂಗಭೂಮಿ ನಟಿಯರ ಧುರ್ಮರಣದ ಸುದ್ದಿಯಿಂದ ಕಾರವಾರ ಹಾಗೂ ಅಂಕೋಲಾ ಮತ್ತು ಸುತ್ತ ಮುತ್ತಲಿನ ನೂರಾರು ರಂಗಭೂಮಿ ಕಲಾವಿದರ ವೇದಿಕೆ ಮತ್ತು ಕಲಾವಿದರು, ಸಾವಿರಾರು ನಾಟಕ ಪ್ರೇಮಿಗಳು ಆಘಾತಗೊಂಡಿದ್ದು, ಸಾಮಾಜಿಕ ಜಾಲ ತಾಣಗಳು ಸೇರಿ ಇತರೆಡೆ ತಮ್ಮ ನೋವು – ಬೇಸರ ಹಂಚಿಕೊಂಡು ನಟಿ ಮಣಿಯರ ಸಾವಿಗೆ ಮರಗುತ್ತಿರುವುದು ಕಂಡು ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button