Important
Trending

ಭೀಕರ ರಸ್ತೆ ಅಪಘಾತ: ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು: ಮೂವರಿಗೆ ಗಂಭೀರ ಗಾಯ

ಅಂಕೋಲಾ: ರಾ.ಹೆ 63ರ ಯಲ್ಲಾಪುರ – ಅಂಕೋಲಾ ಮಾರ್ಗಮಧ್ಯೆ ಹೊನ್ನಳ್ಳಿ ಬಳಿ ಬೆಳಿಗ್ಗೆ ಓಮಿನಿ ಕಾರ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೋರ್ವಳು ಸ್ಥಳದಲ್ಲೇ ಮೃತಪಟ್ಟು,ಉಳಿದ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.  ಯಲ್ಲಾಪುರದ ಪ್ರಸಿದ್ಧ ಶ್ಯಾನಭಾಗ  ಹೊಟೇಲ್ ಮಾಲಕರಾದ ಅಚ್ಯುತ (ಮಂಜುನಾಥ ) ನಾಗೇಶ  ಶ್ಯಾನಭಾಗ ತಮ್ಮ ಕುಟುಂಬ ಸಮೇತ  ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಮಾದನಗೇರಿಯಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ,ದಾರಿ ಮಧ್ಯೆ ಇವರು ಪ್ರಯಾಣಿಸುತ್ತಿದ್ದ ಕಾರ್ ಮತ್ತು ಮಂಗಳೂರು ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಜಮಖಂಡಿ ಕಡೆಗೆ ಹೊರಟಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಓಮಿನಿ  ಮುಂಭಾಗ ನುಜ್ಜು ಗುಜ್ಜಾಗಿದ್ದು, ಕಾರನಲ್ಲಿದ್ದ ಸಹನಾ ಶ್ಯಾನಭಾಗ (43)  ಸ್ಥಳದಲ್ಲೇ ಮೃತ ಪಟ್ಟ ದುರ್ದೈವಿಯಾಗಿದ್ದಾರೆ. ಹೆಸರಿಗೆ ತಕ್ಕಂತೆ ಹೆಸರಾಂತ ಕುಟುಂಬದ ಜವಾಬ್ದಾರಿ ನಿರ್ವಹಣೆ ಮಾಡುತ್ತ ಉತ್ತಮ ಗೃಹಿಣಿಯಾಗಿ  ಎಲ್ಲರೊಂದಿಗೂ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು. ಸಹನಾ  ಇವರ ಹಣೆ – ಬಲಗಣ್ಣಿನ ಬಳಿ ತೀವ್ರ ಪೆಟ್ಟು ಬಿದ್ದು ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದು , ಮೃತದೇಹವನ್ನು ಅಂಕೋಲಾ ತಾಲೂಕಾ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವಾಯ್ ನಾಯ್ಕ ಮತ್ತಿತರರು ಸಹಕರಿಸಿದರು. 

ಕಾರ ಚಲಾಯಿಸುತ್ತಿದ್ದ ಅಚ್ಯುತ್ ಶ್ಯಾನಭಾಗ ಸ್ಟೇರಿಂಗ್ ಮಧ್ಯೆ ಸಿಲುಕಿಕೊಂಡು ಅವರನ್ನು ರಕ್ಷಿಸಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಡುವಂತಾಯಿತು.  ಕಾರನಲ್ಲಿದ್ದ ಶ್ಯಾನಭಾಗ ಅವರ ಹೆಣ್ಣುಮಕ್ಕಳಿಗೂ ಗಂಭೀರ ಗಾಯಗೊಂಡು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಪಿ ಎಸೈ ಮಹಾಂತೇಶ ಬಿ.ವಿ ಮತ್ತಿತರರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಸಭ್ಯ ಸುಸಂಸ್ಕೃತ ಜನಾನುರಾಗಿ ಶ್ಯಾನಭಾಗ  ಕುಟುಂಬದವರಿಗೆ ಆದ ಈ ಅಪಘಾತ , ಅವರ  ಕುಟುಂಬದ ಹಿತೈಷಿಗಳು, ಆಪ್ತರ ಬಳಗದಲ್ಲಿ ಶೋಕದ ವಾತಾವರಣ ಮೂಡಿಸಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಪ ನಾಯಕ ಅಂಕೋಲಾ

Back to top button