ಸಮುದ್ರ ಸೇರಬೇಕಾದ ಹಳ್ಳದ ನೀರಿಗೆ ಮರಳು ದಿಬ್ಬದ ದಿಗ್ಬಂಧನ: ಕೋಡಿ ಕಡಿದರಷ್ಟೇ ಹತ್ತಾರು ಹಳ್ಳಿಗಳ ಕೃಷಿಕರು ನಿರಾಳ: ಪಕೃತಿ ವಿಸ್ಮಯದ ನೈಜ ದರ್ಶನ

ಅಂಕೋಲಾ: ತಾಲೂಕಿನ ಬಬ್ರುವಾಡ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ನದಿಬಾಗ ಎಂಬ ಸುಂದರ ಪುಟ್ಟ ಗ್ರಾಮ ಒಂದಿದ್ದು. ಮಳೆಗಾಲ ಆರಂಭವಾದೊಡನೆ ಸಮುದ್ರ ಸಂಗಮ ಪ್ರದೇಶದಲ್ಲಿ ಕೋಡಿ ಕಡಿಯುವ ವಿಶಿಷ್ಟ ಪದ್ಧತಿ ಬಹು ಕಾಲದಿಂದ ನಡೆದುಕೊಂಡು ಬಂದಿದೆ. ಇದಾದ ನಂತರವೇ ಸುತ್ತಮುತ್ತಲಿನ ಹೆಚ್ಚಿನ ಪ್ರದೇಶಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡಬೇಕಾದ ಅನಿವಾರ್ಯತೆ ಇದೆ.

ಕಡಲತಡಿಯ ಸುಂದರ ಪ್ರದೇಶಗಳಲ್ಲಿ ಒಂದಾಗಿರುವ ನದಿ ಭಾಗವು ಇಲ್ಲಿಯ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿದೆ. ಒಂದೆಡೆ ಸಮುದ್ರ ಇನ್ನೊಂದೆಡೆ ಹಳ್ಳದ ತೊರೆ ಇದ್ದು ಇವೆರಡರ ಮಧ್ಯೆ ಬೇಸಿಗೆಯಲ್ಲಿ ನಾನಾ ಕಾರಣಗಳಿಂದ ನೈಸರ್ಗಿಕ ಮರಳು ದಿಬ್ಬ ಸೃಷ್ಟಿಯಾಗುತ್ತದೆ.ಮರಳು ದಿಬ್ಬ ಸೃಷ್ಟಿಯಿಂದ ಸಮುದ್ರ ಮತ್ತು ಹಳ್ಳದ ತೊರೆ ಒಂದಕ್ಕೊಂದು ಸಂಪರ್ಕ ಕಡಿದುಕೊಳ್ಳುತ್ತವೆ.

ಮಳೆಗಾಲ ಆರಂಭವಾದೊಡೊನೆ ಸಮುದ್ರ ಹಿನ್ನೀರಿನ ಪ್ರದೇಶವಾದ ಪೂಜಗೇರಿ ಹಳ್ಳಕ್ಕೆಅಕ್ಕಪಕ್ಕದ ಬೆಟ್ಟಗುಡ್ಡಗಳು ಹಾಗೂ,ಬಯಲು ಪ್ರದೇಶಗಳಿಂದ ನೀರು ಹರಿದು ಬಂದು ಸೇರಿಕೊಳ್ಳುತ್ತದೆ. ಎಲ್ಲೆಡೆಯಿಂದ ಹರಿದು ಬರುವ ಹೆಚ್ಚಿನ ಪ್ರಮಾಣದ ನೀರು ಹಳ್ಳದಲ್ಲಿ ಶೇಖರಗೊಂಡು ಹಳ್ಳ ತುಂಬಿ ಹರಿವಂತೆ ಆಗುತ್ತದೆ. ಸಮುದ್ರ ಸೇರಬೇಕಿದ್ದ ಹಳ್ಳದ ನೀರು ಮಧ್ಯೆ ಉಂಟಾದ ಮರಳು ದಿಬ್ಬದ ಸಮಸ್ಯೆಯಿಂದ ಸಮುದ್ರ ಸೇರಲಾರದೇ ಅಕ್ಕಪಕ್ಕದ ಜನವಸತಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನುಗ್ಗಲಾರಂಭಿಸುತ್ತದೆ.

ಈ ವೇಳೆಯಲ್ಲಿಬಬ್ರುವಾಡ, ಬೆಳಂಬರ,ಶೆಟಗೇರಿ, ಹಾಗೂ ವಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗದ್ದೆ ಪ್ರದೇಶಗಳು ಜಲಾವೃತವಾಗಿ ಕೃಷಿಕಾರ್ಯಕ್ಕೆ ಹಿನ್ನಡೆಯಾಗುತ್ತದೆ.

ನಾನಾ ಕಾರಣಗಳಿಂದ ಹಳ್ಳದ ಅಂಚಿನ ಹೊಲ ಮನೆಗಳಿಗೆ ನುಗ್ಗುವ ನೀರು ಹಲವು ಅವಾಂತರಗಳನ್ನು ಸೃಷ್ಟಿಸುತ್ತದೆ. ಹಳ್ಳ ಮತ್ತು ಸಮುದ್ರ ಸಂಗಮ ಪ್ರದೇಶದಲ್ಲಿ ಮರಳು ದಿಬ್ಬವನ್ನು ಕೊರೆದು ನೀರು ಹರಿದು ಹೋಗಲು ಅನುವು ಮಾಡುವ ಮೂಲಕ ಹಳ್ಳದ ನೀರು ಸಮುದ್ರ ಸೇರುವ ನೈಸರ್ಗಿಕ ಪ್ರಕ್ರಿಯೆಗೆ ಚಾಲನೆ ನೀಡಲೇ ಬೇಕಾಗುತ್ತದೆ.. ಸ್ಥಳೀಯ ಭಾಷೆಯಲ್ಲಿ ಇದನ್ನು ಕೋಡಿ ಕಡೆಯುವುದು ಎಂದು ಹೇಳಲಾಗುತ್ತಿದ್ದು ,ನದಿ ಭಾಗದ ಸ್ಥಳೀಯರೇ ವಿಶೇಷ ಪರಿಶ್ರಮ ವಹಿಸಿ ಈ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ನದಿಭಾಗ, ಖಾರ್ವಿವಾಡಾ ಭಾಗದ,ಹಿರಿಯರು – ಕಿರಿಯರು , ಯುವಕರನೇಕರು ಪ್ರತಿವರ್ಷ ಕೋಡಿ ಕಡಿಯುವ ಮೂಲಕ ಹಳ್ಳದ ನೀರು ಸರಾಗವಾಗಿ ಸಮುದ್ರ ಸೇರುವಂತೆ ಸಂಪರ್ಕವೇರ್ಪಡಿಸಿ ಸಮುದ್ರ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಒತ್ತಡ ಕಡಿಮೆಯಾಗುವಂತೆ ಮಾಡಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರು ಮತ್ತಿತರ ಜನತೆಯ ನೆಮ್ಮದಿಗೆ ದುಡಿಯುತ್ತಾರೆ. ಈ ವರ್ಷ ಬೆಳಂಬಾರದ ಕೆಲ ಶ್ರಮ ಜೀವಿಗಳೂ ಕೋಡಿ ಕಡಿಯುವ ಕೆಲಸಕ್ಕೆ ಕೈ ಜೋಡಿಸಿದ್ದು , ಮಂಗಳವಾರ ಚಾಲನೆ ನೀಡಿದ್ದರು. ಸಮುದ್ರದ ವಿಪರೀತ ಅಲೆಗಳಿಂದಾಗಿ ಮೊದಲ ದಿನ ನಿರೀಕ್ಷಿತ ಯಶಸ್ಸು ದೊರೆತಿರಲಿಲ್ಲ. ಬುಧವಾರ ಸ್ಥಳೀಯರು ಮತ್ತೆ ಪ್ರಯತ್ನಿಸಿ ಕೊಡಿ ಕಡಿದು ಹಳ್ಳದ ನೀರು ಸಮುದ್ರ ಸೇರುವಂತೆ ಮಾಡಲು ಯಶಸ್ವಿಯಾದರು.

ಈ ಹಿಂದೆ ಕೋಡಿ ಕಡಿಯುವುದೆಂದರೆ ಅತ್ಯಂತ ಅಪಾಯಕಾರಿ ಕೆಲಸವಾಗಿತ್ತು ಎಂದು ಸ್ಮರಿಸಿಕೊಳ್ಳುವ ಕೆಲ ಹಿರಿಯರು,ನೀರಿನ ರಭಸಕ್ಕೆ ಕೋಡಿ ಕಡಿಯುವರು. ಕೊಚ್ಚಿಹೋಗುವ ಅಪಾಯದ ಸಾಧ್ಯತೆ ಬಗ್ಗೆಯೂ ಹೇಳುತ್ತಾರೆ. ಕೋಡಿ ಕಡೆಯುವುದರಿಂದ ಹತ್ತಾರು ಹಳ್ಳಿಗಳಿಗೆ ನೀರು ನುಗ್ಗುವ ಅಪಾಯ ತಪ್ಪಿಸಿದಂತಾಗುತ್ತದೆ. ಈ ಕಾರ್ಯವನ್ನು ಸ್ವಯಂಪ್ರೇರಿತವಾಗಿ ಮಾಡುವ ಸ್ಥಳೀಯ ಕೆಲಸಗಾರರ ಶ್ರಮ ಹಾಗೂ ಸೇವೆಗೆ ಸ್ಥಳೀಯ ಆಡಳಿತದಿಂದಲೂ ನಿರೀಕ್ಷಿತ ಅನುದಾನ ಇಲ್ಲವೇ ಗೌರವ ಸರಿಯಾಗಿ ದೊರೆಯುತ್ತಿಲ್ಲ ಎನ್ನುವ ಅಸಮಾಧಾನದ ಭಾವನೆಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ಈ ವರ್ಷ ಕೊಡಿ ಕಡಿಯಲು ಬೆರಳೆಣಿಕೆ ಜನರಷ್ಟೇ ಭಾಗವಹಿಸಿದ್ದು ಹೆಚ್ಚಿನವರು ನಿರಾಸಕ್ತಿ ತಾಳಿದ್ದರು ಎನ್ನಲಾಗಿದೆ. ಈ ಹಿಂದೆ ಒಮ್ಮೆ ಕೋಡಿ ಕಡಿತದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾಕ್ಟರ್ ಹರೀಶ್ ಕುಮಾರ್ ಮತ್ತಿತರ ಅಧಿಕಾರಿಗಳು ಬಂದು ಖುದ್ದು ಸ್ಥಳ ಪರಿಶೀಲಿಸಿ ಹೋಗಿದ್ದು ಸಂಬಂಧಿತ ಪಂಚಾಯತಿಗಳಿಂದ ಅನುದಾನ ಒದಗಿಸಲು ಸೂಚಿಸಿದ್ದರು ಎನ್ನ ಲಾಗಿತ್ತು. ಆದರೆ ಕೇವಲ ಬಬ್ರುವಾಡ ಗ್ರಾಮ ಪಂಚಾಯತಿಯಿಂದ ಈ ಕಾರ್ಯಕ್ಕೆ ಈ ಹಿಂದೆ 5 ರಿಂದ 10 ಸಾವಿರ ರೂ ಸೀಮಿತ ಅನುದಾನ ನೀಡಲಾಗುತ್ತಿತ್ತು. ಕಳೆದ ವರ್ಷ ಅದನ್ನೂ ನೀಡಿಲ್ಲ .

ಈ ವರ್ಷ ಪಿಡಿಓ ಓರ್ವರು ಮಾತ್ರ ಬಂದು ಹೋಗಿದ್ದು ಬಿಟ್ಟರೆ ಜವಾಬ್ದಾರಿ ಸ್ಥಾನದಲ್ಲಿರುವ ಇತರರು,ತಾಲೂಕ ಮಟ್ಟದ ಅಧಿಕಾರಿಗಳು ಯಾರೋಬ್ಬರೂ ಬಂದಿಲ್ಲಾ ಎಂದು ಕೆಲ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಯಾವುದಾದರೂ ಸ್ಥಳೀಯರು ಪ್ರತಿ ವರ್ಷ ತಮ್ಮ ಕುಟಾರೆಗಳನ್ನು ಹಿಡಿದು,ಮರಳು ದಿಬ್ಬ ಅಗೆಯಲು ಹತ್ತಾರು ತಾಸುಗಳ ನಿರಂತರ ಶ್ರಮ ವಹಿಸುತ್ತಾರೆ.

ಸಮುದ್ರ ಅಲೆಗಳ ಪ್ರತಿಕೂಲ ಪರಿಣಾಮ ದಿಂದ ಒಮ್ಮೆಮ್ಮೆ ನಿರೀಕ್ಷಿತ ಯಶಸ್ಸು ಸಾಧ್ಯವಾಗದೆ ಮತ್ತೆ ಮತ್ತೆ ಪ್ರಯತ್ನಮುಂದುವರಿಸಬೇಕಾಗುತ್ತದೆ. ವರ್ಷದಲ್ಲಿ ಒಂದರಿಂದ ಎರಡು ಬಾರಿ ಮರಳು ದಿಬ್ಬ ಸಮಸ್ಯೆಯಿಂದ ಹಳ್ಳದ ನೀರು ಸಮುದ್ರ ಸೇರದಂತೆ ತಡೆಯಾಗುವ ಪ್ರದೇಶದಲ್ಲಿ ಕೋಡಿ ಕಡಿಯುವ ಶ್ರಮ ಮತ್ತು ಸಾಹಸದ ಕೆಲಸ ಶ್ಲಾಘಿಸಲೇಬೇಕಿದೆ.

ಸ್ಥಳೀಯ ಹಾಗೂ ಸಂಬಂಧಿಸಿದ ಇತರೆ ಗ್ರಾಮ ಪಂಚಾಯತ್ ನ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಕುರಿತು ಹೆಚ್ಚಿನ ಕಾಳಜಿ ತೋರಿಸಿ, ಪ್ರತಿವರ್ಷ ಕೋಡಿ ಕಡಿಯುವ ಕೆಲಸಕ್ಕೆ ಸ್ಥಳೀಯರ ಸಹಕಾರವನ್ನು ಗುರುತಿಸಿ ತಮ್ಮ ಜವಾಬ್ದಾರಿ ತೋರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version