Focus NewsImportant
Trending

ಸ್ಕೂಟಿ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು

ಸಮಯಕ್ಕೆ ಸರಿಯಾಗಿ ಸಿಗದ ಆಂಬುಲೆನ್ಸ್: ಮಾರ್ಗಮಧ್ಯೆ ಸಾವು

ಅಂಕೋಲಾ: ಸ್ಕೂಟಿ ಮತ್ತು ಮೋಟರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೋಟರ್ ಬೈಕ್ ಸವಾರ ಮೃತ ಪಟ್ಟ ಘಟನೆ ಪಟ್ಟಣದ ಹೊನ್ನಿಕೇರಿ ಕ್ರಾಸ್ ಬಳಿ ಸಂಭವಿಸಿದೆ. ತಾಲೂಕಿನ ಬಡಗೇರಿ ನಿವಾಸಿ ವಾಸುದೇವ ಡಿಂಗಾ ಗೌಡ (27) ಮೃತ ದುರ್ದೈವಿಯಾಗಿದ್ದು ಸ್ಕೂಟಿ ಸವಾರ ನಾಗರಾಜ ಶಾಂಬಾ ಶೆಟ್ಟಿ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಪಟ್ಟಣದಿಂದ ಬೆಲೇಕೇರಿ ಕಡೆ ಸವಾರಿ ಮಾಡಿಕೊಂಡು ಹೋಗುತ್ತಿದ್ದವ, ಹೊನ್ನಿಕೇರಿ ಕ್ರಾಸ್ ಬಳಿ ಒಮ್ಮೆಲೇ ಬಲಕ್ಕೆ ತಿರುಗಿಸಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.

KMF Recruitment 2022: 487 ಹುದ್ದೆಗಳು: ಮಾಸಿಕ ವೇತನ 17 ಸಾವಿರದಿಂದ 99 ಸಾವಿರ

ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ಬಲಕಾಲಿನ ಹೆಬ್ಬೆರಳಿಗೆ ಮತ್ತು ತಲೆಯ ಹಿಂಬದಿಗೆ ಗಂಭೀರ ಗಾಯಗೊಂಡು ಕಿವಿ ಮತ್ತು ಬಾಯಿಂದ ರಕ್ತಸ್ರಾವವಾಗಿದ್ದು,ಇದೇ ಮಾರ್ಗವಾಗಿ ಸಾಗುತ್ತಿದ್ದ ಬಾವಿಕೇರಿಯ ಯುವಕನೋರ್ವ ಗಾಯಾಳುವನ್ನು  ಸ್ಥಳೀಯರ ಸಹಕಾರದಲ್ಲಿ ತನ್ನ ಕಾರಿನಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಸಾಗಿಸಲು ಅಂಕೋಲಾದಲ್ಲಿ ಸರಿಯಾದ ಆಂಬುಲೆನ್ಸ್ ಸೌಲಭ್ಯ ದೊರೆಯದೆ,ಕುಮಟಾದಿಂದ ಆಂಬುಲೆನ್ಸ್ ಕರೆಸಿ ಗಾಯಳುವನ್ನು ಕರೆದೊಯ್ಯುತ್ತಿರುವಾಗ, ಮಾರ್ಗ ಮಧ್ಯದಲ್ಲಿ ಭಟ್ಕಳ ಸಮೀಪ   ವಾಸುದೇವ ಕೊನೆಯುಸಿರೆಳೆದ ಎಂದು ತಿಳಿದು ಬಂದಿದೆ. 

ಸ್ಕೂಟಿ ಸವಾರ ನಾಗರಾಜ ಶೆಟ್ಟಿ ಮೇಲೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ.ಮೃತ ವಾಸುದೇವ ಗೌಡ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಕಳೆದ ಒಂದುವರೆ ವರ್ಷದ ಹಿಂದೆ (20-05-2021 ) ರಂದು ಮದುವೆಯಾಗಿ  ಆತನಿಗೆ ಅಂದಾಜು 9 ತಿಂಗಳ ಪುಟ್ಟ ಹೆಣ್ಣು ಮಗುವಿದ್ದು, ಕುಟುಂಬದ ಸಂಸಾರ ನಿರ್ವಹಣೆ ಮಾಡಬೇಕಿದ್ದ ಯಜಮಾನನಿಲ್ಲದೇ, ಬಡ ಕುಟುಂಬ ಕಂಗಾಲಾಗುವಂತಾಗಿದೆ. ನೊಂದ ಈ ಕುಟುಂಬಕ್ಕೆ ಸೂಕ್ತ ಪರಿಹಾರ ದೊರೆಯಬೇಕಿದೆ.

ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯಿಂದಲೂ ಹೆಚ್ಚುತ್ತಿದೆ ಅಪಘಾತ ?

ಪಟ್ಟಣದ ಕೇಣಿ ರಸ್ತೆ ಸೇರಿದಂತೆ ಇತರೆ ಕೆಲ ರಸ್ತೆಗಳಲ್ಲಿನ  ಹೊಂಡ ಗುಂಡಿಗಳಿಂದಾಗಿ ಸಂಚಾರಕ್ಕೆ ತೀವ್ರ ತೊಡಕಾಗುತ್ತಿದ್ದು,ರಸ್ತೆ ಅಪಘಾತಗಳು ಹೆಚ್ಚಲು ಕಾರಣವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದು,ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತು ರಸ್ತೆ ದುರವಸ್ಥೆ ಸರಿಪಡಿಸಿ ಸಂಚಾರ ಯೋಗ್ಯವನ್ನಾಗಿ ಮಾಡಿ ತನ್ನ ಜವಾಬ್ದಾರಿ ನಿಭಾಯಿಸಬೇಕಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button