ಗೋಕರ್ಣ ಪೊಲೀಸರ ಭರ್ಜರಿ ಬೇಟೆ| 10 ಲಕ್ಷ ರೂಪಾಯಿ ಮೌಲ್ಯದ ಚರಸ್ ವಶ

ಅಂಕೋಲಾ : ಮಾರಾಟ ಮಾಡುವ ಉದ್ದೇಶದಿಂದ ಮಾದಕ ದ್ರವ್ಯ ಚರಸ್ ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 10 ಲಕ್ಷ ರೂಪಾಯಿ ಭಾರೀ ಮೌಲ್ಯದ ಚರಸ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಗೋಕರ್ಣ ಬೇಲೆಹಿತ್ಲ ನಿವಾಸಿ ತುಳಸು ಹಮ್ಮು ಗೌಡ, ಮೂಲೇಕೆರಿ ನಿವಾಸಿ ಶ್ರೀಧರ ಗೌಡ ಮತ್ತು ಕುಡ್ಲೇ ಬೀಚ್ ನಿವಾಸಿ ನೇಪಾಳ ಮೂಲದ ಸಂತ ಬಹದ್ದೂರ್ ಥಮಂಗ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 1 ಕೆ.ಜಿ 648 ಗ್ರಾಂ ಚರಸ್ ದ್ವಿಚಕ್ರ ವಾಹನ, ಎರಡು ಮೊಬೈಲ್ ಪೋನ್ ಮತ್ತು ಡಿಜಿಟಲ್ ತಕ್ಕಡಿ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಗೋಕರ್ಣದ ಓಂ ಬೀಚ್ ರಸ್ತೆಯಲ್ಲಿ ದಾಳಿ ನಡೆಸಿದ ತಂಡ ಅಪಾರ ಪ್ರಮಾಣದ ಚರಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಡಿ.ವೈ ಎಸ್. ಪಿ ಶ್ರೀಕಾಂತ, ಗೋಕರ್ಣ ಪೊಲೀಸ್ ನಿರೀಕ್ಷಕ ಎಂ.ಮಂಜುನಾಥ, ಪಿ.ಎಸ್. ಐ ಗಳಾದ ಹರೀಶ, ಸಕ್ತಿವೇಲು ಎ. ಎಸ್. ಐ ಅರವಿಂದ ಶೆಟ್ಟಿ ಮತ್ತು ಸಿಬ್ಬಂದಿಗಳು ಕಂದಾಯ ಇಲಾಖೆ ಅಧಿಕಾರಿ ಸಂತೋಷ ಶೇಟ್, ಎಚ್. ಮಂಜಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಚರಸ್ ವಶಪಡಿಸಿಕೊಂಡ ಪ್ರಕರಣ ಇದಾಗಿದ್ದು ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಹಿರಿಯ ಅಧಿಕಾರಿಗಳ ಕಡಕ್ ಆದೇಶದ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ಕಳ್ಳಸಾಗಾಣಿಕೆ , ಮಾರಾಟ, ಸೇವನೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಇಲಾಖೆ ಗಾಂಜಾ ಮತ್ತಿತರ ಹಲವು ಪ್ರಕರಣ ದಾಖಲಿಸಿ ಮಾದಕ ಜಾಲದ ದಂದೆ ಕೋರರಿಗೆ ಬಿಸಿ ಮುಟ್ಟಿಸುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version