ಜವರಾಯನಂತೆ ಬಂದ ರಿಕ್ಷಾ ಚಾಲಕ: ಸ್ಥಳದಲ್ಲಿಯೇ ಮೃತಪಟ್ಟ ಗರ್ಭಿಣಿ ಮಹಿಳೆ

ಅಂಕೋಲಾ : ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಬಡಿದು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಭಾವಿಕೇರಿಯಲ್ಲಿ ಸಂಭವಿಸಿದೆ. ಶೋಭಾ ಗೋಪಾಲ ನಾಯಕ (28) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಸುಮಾರು 3-4 ತಿಂಗಳ ಗರ್ಭಿಣಿಯಾಗಿದ್ದ ಈಕೆ ತನ್ನ ಮನೆ ಮುಂದಿನ ಟಾರ ರಸ್ತೆ ಪಕ್ಕದ ಕಚ್ಚಾ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡ ವೈಭವ ನಾಯಕ ಈತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಜವರಾಯನಂತೆ ಬಂದ ರಿಕ್ಷಾ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷದಿಂದ ತನ್ನ ವಾಹನವನ್ನು ಚಲಾಯಿಸಿ, ಮಹಿಳೆಗೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: BMRCL Recruitment: ಉದ್ಯೋಗಾವಕಾಶ: 236 ಹುದ್ದೆಗಳು ಖಾಲಿ: 25 ಸಾವಿರದಿಂದ 95 ಸಾವಿರದ ವರೆಗೆ ಮಾಸಿಕ ವೇತನ

ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ಚಾಲಕ ಗರ್ಭಿಣಿ ಮಹಿಳೆಗೆ ಅಪಘಾತಪಡಿಸಿ ತಾನು ಚಲಾಯಿಸುತ್ತಿದ್ದ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ..ಅಪಘಾತ ಪಡಿಸಿದ ರಿಕ್ಷಾಕ್ಕೆ ಆತನೇ ಮಾಲಕನೇ ಅಥವಾ ತನ್ನ ಸಂಬಂಧಿಗಳ ರಿಕ್ಷಾವನ್ನು ಈತ ಚಾಲನೆ ಮಾಡುತ್ತಿದ್ದನೇ ಎಂಬ ಅನುಮಾನದ ಮಾತುಗಳು ಕೇಳಿ ಬರುತ್ತಿದ್ದು ಈ ಕುರಿತು ಪೊಲೀಸ್ ತನಿಖೆ ಮುಂದುವರೆದಿದೆ.

ಅಂಕೋಲಾ – ಕೇಣಿ – ಬಡಿಗೇರಿ, ಬೆಲೇಕೇರಿ ಮಾರ್ಗವಾಗಿ ಈ ಭಾಗದಲ್ಲಿ ದಿನ ನಿತ್ಯ ಓಡಾಡುವ ಕೆಲ ವಾಹನಗಳು ಮಿತಿಮೀರಿ ಪ್ರಯಾಣಿಕನ್ನು ಸಾಗಿಸುವುದು ಮತ್ತು ಅತಿ ವೇಗ ಹಾಗೂ ನಿರ್ಲಕ್ಷದಿಂದ ಚಾಲನೆ ಮಾಡುತ್ತಾರೆ ಎನ್ನುವ ದೂರು ಸ್ಥಳೀಯರಿಂದ ಕೇಳಿ ಬಂದಿದ್ದು, ಪೊಲೀಸ್ ಇಲಾಖೆ ಅಂಥವರನ್ನು ತಡೆದು ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಜೋರಾಗಿದೆ. ಇಲ್ಲದಿದ್ದರೆ ರಸ್ತೆ ತಡೆಗೆ ಮುಂದಾಗಬೇಕಾದೀತು ಎಂದು ಕೆಲ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಭೀಕರ ರಸ್ತೆ ಅಪಘಾತದಿಂದ ಗರ್ಭಿಣಿ ಮಹಿಳೆ ಮತ್ತು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು ಉಸಿರು ಕಳೆದುಕೊಳ್ಳುವಂತಾಗಿರುವುದು ಎಂಥವರ ಮನವನ್ನು ಕಲಕುವಂತಿದ್ದು ಊರಲ್ಲಿ ಶೋಕದ ಛಾಯೆ ಆವರಿಸಿದೆ.ಸಿಪಿಐ ಜ್ಯಾಕ್ಸನ್ ಡಿಸೋಜ,ಪಿಎಸ್ಐ ಪ್ರೇಮನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳು ಹಾಗೂ 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ತಾಲೂಕಾಸ್ಪತ್ರೆ ಬಳಿ ಮೃತಳ ಕುಟುಂಬಸ್ಥರು, ಸಂಬಂಧಿಗಳು ಹಾಗೂ ಊರ ನಾಗರಿಕರು ನೂರಾರು ಸಂಖ್ಯೆಯಲ್ಲಿ ಸೇರಿ,ಶೋಭಾಳ ಅಕಾಲಿಕ ನಿಧನಕ್ಕೆ ತೀವೃ ಶೋಕ ವ್ಯಕ್ತಪಡುತ್ತಿರುವ ದೃಶ್ಯ ಕಂಡು ಬಂತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version