ಹಿರಿಯ ಯಕ್ಷಗಾನ ಕಲಾವಿದ, ಆದರ್ಶ ಶಿಕ್ಷಕ, ಮೂರ್ತಿ ತಯಾರಕ ಬಿ.ವಿ.ಭಂಡಾರಿ ಇನ್ನಿಲ್ಲ: ಮೆಡಿಕಲ್ ಕಾಲೇಜಿಗೆ ದೇಹ ದಾನ
![ಬಿ.ವಿ.ಭಂಡಾರಿ](http://i0.wp.com/vismaya24x7.com/wp-content/uploads/2023/09/b-v-bhandari-jpg.webp?fit=1280%2C720&ssl=1)
ಹೊನ್ನಾವರ: ಹೃದಯದ ಕಾಯಿಲೆಯಿಂದಾಗಿ ಬಳಲುತ್ತಿದ್ದ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಮೂರ್ತಿ ತಯಾರಿಕಾ ಕಲಾವಿದರೂ ಆದ ಬಿ.ವಿ ಭಂಡಾರಿ ಕೆರೆಕೋಣ (85 ವರ್ಷ) ಅವರು ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆದರ್ಶ ಶಿಕ್ಷಕರಾಗಿ, ಗುರುವಾಗಿ ಬಾಳಿದ ಅವರು ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಹೀಗಾಗಿ ಕುಟುಂಬದವರು ಮೆಡಿಕಲ್ ಕಾಲೇಜಿಗೆ ಶವವನ್ನು ಹಸ್ತಾಂತರಿಸಿದರು.
ಶ್ರೀಯುತರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲೀಷಿನಲ್ಲಿ ಬಿ ಎಡ್ ಪದವಿ ಪಡೆದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತಿಯ ಅಂಚಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿದ್ದು, ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು. ವಿಶೇಷ ಅಂದರೆ, ಕಾಡಿನಲ್ಲಿರುವ ಗಿರಿಜನ ಮರಾಠಿ ಸಮಾಜದ ಮಕ್ಕಳಿಗೆ ಪಾಠ ಹೇಳಲು ಹಲವು ವರ್ಷಗಳಿಂದ ತಪ್ಪದೇ ಪ್ರತಿನಿತ್ಯವೂ ಹತ್ತಾರು ಕಿಮೀ ನಡೆದುಕೊಂಡು ಹೋಗುತ್ತಿದ್ದರು.
ಬರೀ ಶಿಕ್ಷಕರಷ್ಟೆ ಅಲ್ಲ, ಮೃದಂಗ ವಾದಕರು , ಸಾಹಿತ್ಯಪ್ರೇಮಿಗಳು, ಉತ್ತಮ ಚಿತ್ರಕಾರರು, ಮೂರ್ತಿ ಶಿಲ್ಪಿಗಳು, ಆಗಿದ್ದು, ಯಕ್ಷಗಾನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಶ್ರೀಯುತರು ಅಪಾರ ಬಂಧು ಬಳಗ, ಹಿತೈಷಿಗಳು, ಸ್ನೇಹಿತರು, ಶಿಷ್ಯರನ್ನು ಅಗಲಿದ್ದು, ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ