Big News
Trending

ನಿಲ್ಲಿಸಿಟ್ಟ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ: ತಪ್ಪಿದ ಅನಾಹುತ

ಭಟ್ಕಳ: ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬ್ಯಾಟರಿ ಸ್ಪೋಟಿಸಿ ಜೀವ ಹಾನಿಯೂ ಆಗಿದೆ. ಇಷ್ಟು ದಿವಸ ಮಹಾನಗರಗಳಲ್ಲಿ ಕಂಡು ಬರುತ್ತಿದ್ದ ಪ್ರಕರಣಗಳು ಈಗ ಭಟ್ಕಳದಲ್ಲೂ ಕಂಡು ಬರಲು ಆರಂಭವಾಗಿದ್ದು, ಪಟ್ಟಣದ ಅರ್ಬನ್ ಬ್ಯಾಂಕ್ ಎದುರಿನ ಖಾಸಗಿ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿಟ್ಟ ಎಲೆಕ್ಟ್ರಿಕ್ ಸ್ಕೂಟರ್ ಒಂದಕ್ಕೆ ಬೆಂಕಿ ತಗುಲಿದೆ.

ಮುಂಡಳ್ಳಿಯ ನಾಗರಾಜ ಮೊಗೇರ ಎನ್ನುವರಿಗೆ ಸೇರಿದ ಬೆನ್ಲಿಂಗ್ ಸಂಸ್ಥೆಯ ಸ್ಕೂಟರ್‌ಗೆ ಬೆಂಕಿ ತಗುಲಿದೆ. ನಿಲ್ಲಿಸಿಟ್ಟ ಸ್ಕೂಟರ್‌ಗೆ ಬೆಂಕಿ ತಗಲಿದ್ದರಿಂದ ಹೆಚ್ಚಿನ ಅವಘಡ ಸಂಭವಿಸಿಲ್ಲ. ಇವರು ಸ್ಕೂಟರಿನ ಡಿಕ್ಕಿಯಲ್ಲಿದ್ದ ದಾಖಲೆಯನ್ನು ತೆಗೆಯಲು ತೆರಳಿದ್ದರು. ಆ ಸಂದರ್ಭದಲ್ಲಿ ಹೊಗೆ ಆಡುವುದನ್ನು ನೋಡಿ ತಕ್ಷಣ ಪಕ್ಕದ ಅಂಗಡಿಯವರಿoದ ನೀರು ತಂದು ಹಾಕಿದ್ದಾರೆ. ಸ್ಥಳೀಯರು ಸಹಕರಿಸಿದ್ದಾರೆ.

ಹರಸಾಹಸ ಪಟ್ಟು ಬೆಂಕಿಯನ್ನು ಒಂದು ಹಂತಕ್ಕೆ ನಿಯಂತ್ರಿಸಿದ್ದಾರೆ. ಬಳಿಕ ಅಗ್ನಿಶ್ಯಾಮಕ ದಳ ಆಗಮಿಸಿ, ಸ್ಕೂಟರನಲ್ಲಿದ್ದ ಬ್ಯಾಟರಿಯನ್ನು ತೆಗೆದು ರಾಸಾಯನಿಕ ಸಿಂಪಡಿಸಿ ಬೆಂಕಿಯನ್ನು ನಂದಿಸಿದ್ದಾರೆ. ನಿಲ್ಲಿಸಿಟ್ಟ ಸ್ಕೂಟರ್‌ಗೆ ಬೆಂಕಿ ತಗುಲಿದ್ದರಿಂದ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲವಾದರೂ ಸ್ಕೂಟರ್ ಭಾಗಶಃ ಸುಟ್ಟು ಹೋಗಿದೆ.

ಈ ನಡುವೆ ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಎಲೆಕ್ಟ್ರಿಕ್ ವಾಹನ ಗ್ರಾಹಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ದೇಶಾದ್ಯಂತ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ದೋಷ, ಕಳಪೆ ಗುಣಮಟ್ಟದಂತಹ ಸಮಸ್ಯೆಗಳಿಂದ ಬೆಂಕಿ ಅವಘಡಗಳಿಗೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಆಗಮಿಸಿ ಪರೀಶೀಲನೆ ನಡೆಸಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button