
ಭಟ್ಕಳ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೊಶ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾರ್ಯಕ್ರಮ ಸಂಘಟನಾ ಕಾರ್ಯಗಾರವು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಸಂಘಟಕ, ನಿರೂಪಕ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಕಾಲೇಜು ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಕಾರ್ಯಕ್ರಮ ನಿರೂಪಣೆ, ಸಂಘಟನೆ, ನಾಯಕತ್ವ ಗುಣ, ಸಂವಹನ ಕೌಶಲ್ಯ ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮವೊಂದರ ಯೋಜನೆ, ಆಮಂತ್ರಣ ಪತ್ರಿಕೆ ತಯಾರಿ, ಕಾರ್ಯಕ್ರಮ ಅನುಷ್ಠಾನ ಗೊಳಿಸುವ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಇದೆ ಸಂದರ್ಭದಲ್ಲಿ ವಿಸ್ಮಯ ಟಿ.ವಿ ವರದಿಗಾರ ಈಶ್ವರ ನಾಯ್ಕ ಟಿವಿ ವಾಹಿನಿಗಳಿಗೆ ವರದಿ ಮಾಡುವಿಕೆ, ಫೋಟೋ, ಮತ್ತು ವಿಡಿಯೋ ಮಾಡುವಾಗ ಗಮನಿಸಬೇಕಾದ ಅಂಶಗಳು ಹಾಗೂ ಯುಟ್ಯೂಬ್ ಚಾನೆಲ್ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶುಪಾಲ ನಾಗೇಶ್ ಶೆಟ್ಟಿ ವಹಿಸಿ ಪುಸ್ತಕದಾಚೆಗೆ ವಿದ್ಯಾರ್ಥಿಗಳು ಒಂದಿಷ್ಟು ಬೇರೆ ಬೇರೆ ಕೌಶಲ ಗಳಿಸಿಕೊಳ್ಳಲು ಇಂಥ ಕಾರ್ಯಕ್ರಮ ಸಂಯೋಜಿಸಲಾಗಿದೆ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟದ ಭರವಸೆಯ ಕೊಶದ ಸಂಯೋಜಕ ಸಹಾಯಕ ಪ್ರಾದ್ಯಾಪಕರಾದ ಸುರೇಶ ಮೆಟಗಾರ್, ನೇತ್ರಾವತಿ ನಾಯ್ಕ, ಚಂದ್ರಾವತಿ ಮೊಗೇರ್ , ಹರೀಶ್ ಜೋಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ವಿಜೇತ ನಿರೂಪಿಸಿದರೆ ವೀಣಾ ಸ್ವಾಗತಿಸಿದರು, ದಿವ್ಯಾ ವಂದಿಸಿದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ