ಬಾಸಗೋಡದಲ್ಲಿ ಅರ್ಥಪೂರ್ಣವಾಗಿ ನಡೆದ 18ನೇ ವರ್ಷದ ಜ್ಞಾನ ಸತ್ರ: ಕಾಡಸಿದ್ದೇಶ್ವರ ಶ್ರೀಗಳ ಆಶೀರ್ವಚನ

ಅಂಕೋಲಾ: ನಾನಾ ಕಾರಣಗಳಿಂದ ಇಂದು ಭೂಮಿಯ ಮೇಲೆಯೂ ಅತ್ಯಾಚಾರವಾಗುತ್ತಿದೆ. ಭೂಮಿಯಲ್ಲಿ ಬೆಳೆಯುವ ತರಕಾರಿ, ಹಣ್ಣುಗಳು ಸಹ ವಿಷಯುಕ್ತವಾಗುತ್ತಿದೆ. ಮಣ್ಣು ಮತ್ತು ಮನುಜರ ಆರೋಗ್ಯ ರಕ್ಷಣೆಗಾಗಿ ದೇಸೀಯ ಹಸುಗಳನ್ನು ರಕ್ಷಿಸಿ ಪೋಷಿಸುವ ಕೆಲಸ ಅತ್ಯಗತ್ಯವಾಗಿದೆ ಎಂದು ಸಾವಿರಾರು ಗೋಸಾಕಾಣಿಕೆ ಹಾಗೂ ಕೃಷಿ , ಶಿಕ್ಷಣ , ಪರಿಸರ ಪೂರಕ ಸೇವಾ ಕಾರ್ಯದ ಮೂಲಕ ದೇಶ ವಿದೇಶಗಳಲ್ಲಿ ಮಾದರಿಯಾಗಿರುವ ಕೊಲ್ಲಾಪುರ ಸಿದ್ದಗಿರಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಸಗೋಡದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ವಕೀಲ ನಾಗರಾಜ ವಿ ನಾಯಕ ನೇತೃತ್ವದಲ್ಲಿ ಅವರ ಕುಟುಂಬದ ಹಿರಿಯರಾಗಿದ್ದ, ಸ್ವಾತಂತ್ರ್ಯ ಸೇನಾನಿ ಬಾಸಗೋಡ ಮಾಣಿ ನಾಯಕ ಸರಣಾರ್ಥ ಆಯೋಜಿಸಿದ್ದ 18 ನೇ ವರ್ಷದ ಜ್ಞಾನಸತ್ರ ಕಾರ್ಯಕ್ರಮಕ್ಕೆ ಗಂಟೆಯ ನಿನಾದದೊಂದಿಗೆ ಚಾಲನೆ ನೀಡಿ ಮಾತನಾಡಿದರು.
ಪೊಲೀಸ್ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ವಿನಯ ಗಾಂವಕರ ಮಾತನಾಡಿ ಕೃಷಿ ಚಟುವಟಿಕೆ ಮತ್ತು ಗೋವುಗಳನ್ನು ಸಾಕುವದರಲ್ಲಿ ಯಾವುದೇ ರೀತಿಯ ಸಂಕುಚಿತ ಮನೋಭಾವ ಇರಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಸನಾತನ ಧಾರ್ಮಿಕ ಟ್ರಸ್ಟ್ ಅಧ್ಯಕ್ಷರಾದ ಡಾ. ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ನಮ್ಮ ಕೃಷಿಯೇ ನಮ್ಮ ದೇಶದ ಬೆನ್ನೆಲುಬು, ಯಾವುದೇ ಹುದ್ದೆಯಲ್ಲಿದ್ದರೂ ಕೂಡ ಮೂಲ ಕಸುಬಾದ ಕೃಷಿ ಮತ್ತು ಗೋ ಸಾಕಣೆಯನ್ನು ಉಪೇಕ್ಷಿಸುವದು ಸರಿಯಲ್ಲ. ಇವು ನಮ್ಮ ಹೆಮ್ಮೆಯ ಉದ್ಯೋಗವಾಗುದರ ಜೊತೆ ಯುವಜನತೆ ಹಾಗೂ ಭವಿಷ್ಯದಲ್ಲಿ ಇದು ಮುಂದುವರಿದರೆ ಮಾತ್ರ ದೇಶ ಇನ್ನೂ ಬಲಿಷ್ಠವಾಗುತ್ತದೆ ಎಂದರು.
ನಾಗರಾಜ ನಾಯಕ ಅವರ ತಂದೆ ವೆಂಕಣ್ಣ ನಾಯಕ ಭಾಸಗೋಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟಕ ಪ್ರಮುಖ ನಾಗರಾಜ ವಿ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.. ಮಳೆಯ ವಾತಾವರಣವನ್ನು ಲೆಕ್ಕಿಸದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ಜನರು ಬಹು ಹೊತ್ತು ಕಾರ್ಯಕ್ರಮದಲ್ಲಿ ಕುಳಿತು , ಸ್ವಾಮೀಜಿಗಳ ಜೀವನಾದರ್ಶ, ವಿಚಾರಧಾರೆ ಹಾಗೂ ಲೋಕಕಲ್ಯಾಣದ ಕಾಯಕಗಳ ಬಗ್ಗೆ ಶಿರಬಾಗಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ