
ಕಾರವಾರ: ಮೂಲತಃ ಗ್ರಾಮೀಣ ಪ್ರದೇಶದವಳಾದ ಚೈತ್ರಿಕಾ ಹೆಗಡೆ, ಕಲಾವಿಭಾಗದ ಸ್ನಾತಕ ಪದವಿಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು, ಊರಿನ ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ MES ಕಲಾ, ಮಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದ್ದು, ಶೇಕಡ 96.44 ಅಂಕಗಳ ಸಾಧನೆಯೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ
ಶೇಕಡಾ 96.44 ಅಂಕಗಳ ಸಾಧನೆಯೊಂದಿಗೆ ಚಿನ್ನದ ಪದಕ
ಬಾಲ್ಯದಿಂದಲೇ ಪ್ರತಿಭಾನ್ವಿತಳಾದ ಚೈತ್ರಿಕಾ, ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಾ ಬಂದಿದ್ದು, ಈಕೆಯ ಸಾಧನೆ ಅನೇಕರಿಗೆ ಸ್ಫೂರ್ತಿಯಾಗಿದೆ. ಚೈತ್ರಿಕಾ ಹೆಗಡೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ನೀಲಕೋಡು ಗ್ರಾಮದ ವಿನಾಯಕ ಹೆಗಡೆ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ. ಮೊಮ್ಮಗಳ ಸಾಧನೆಗೆ ಹಿರಿಯ ಸಹಕಾರಿ ಧುರೀಣ, ಪ್ರಗತಿಪರ ಕೃಷಿಕ ಎಸ್.ಕೆ.ಹೆಗಡೆ ಮತ್ತು ದಾಕ್ಷಾಯಿಣಿ ಹೆಗಡೆ ದಂಪತಿಗಳು ಹಾಗೂ ಕುಟುಂಬದವರು ಮೆಚ್ಚುಗೆ ಸೂಚಿಸಿ ಶುಭಹಾರೈಸಿದ್ದಾರೆ.
ಬಹುಮುಖ ಪ್ರತಿಭೆ
ಕನ್ನಡಪ್ರಭ, ಸುವರ್ಣನ್ಯೂಸ್ ಮತ್ತು ನಂದಿನಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಿರಿಯ ಸಂಪಾದಕ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಚೈತ್ರಿಕಾ ದ್ವಿತೀಯ ಸ್ಥಾನ ಪಡೆದಿದ್ದಳು. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದಲ್ಲದೆ ಚೈತ್ರಿಕಾ ಉತ್ತಮ ಚಿತ್ರಕಲಾವಿದೆಯೂ ಹೌದು.
ವಿಸ್ಮಯ ನ್ಯೂಸ್, ಕುಮಟಾ