ಮುಂಗಾಲುಗಳೆರಡೂ ತುಂಡಾಗಿ ನಿತ್ರಾಣ ಸ್ಥಿತಿಯಲ್ಲಿತ್ತು ಕಡಲಾಮೆ: ಅಪರೂಪದ ಜೀವಿಯನ್ನು ರಕ್ಷಿಸಿ ಚಿಕಿತ್ಸೆ

ಅಂಕೋಲಾ: ಅಳಿವಿನಂಚಿನಲ್ಲಿರುವ ಬಲು ಅಪರೂಪದ ಜೀವ ವೈವಿಧ್ಯತೆಯಲ್ಲಿ ಆಲೀವ್ ರಿಡ್ಲೆ ಕಡಲಾಮೆಗಳು ಒಂದಾಗಿದ್ದು, ಸಂಬoಧಿತ ಇಲಾಖೆಗಳು ಆಮೆಗಳ ಮೊಟ್ಟೆ ಸಂರಕ್ಷಣೆ ಮಾಡಿ ಮರಿ ಮಾಡಿಸಿ ಕಡಲಿಗೆ ಬಿಡುವ ಮೂಲಕ ಆಮೆ ಸಂತತಿ ಉಳಿಸಿ ಬೆಳೆಸಲು ನಾನಾ ರೀತಿಯ ಕ್ರಮ ಕೈಗೊಳ್ಳುತ್ತಾ , ಸಾರ್ವಜನಿಕರಲ್ಲೂ ಈ ಕುರಿತು ತಿಳುವಳಿಕೆ ನೀಡಿ ಪರಿಸರ ಸಂರಕ್ಷಣೆಗೆ ಕೈ ಜೋಡಿಸುವಂತೆ ಕರೆ ನೀಡುತ್ತಿದೆ.
ಅಂತಹುದೇ ಒಂದು ಅಪರೂಪದ ರಿಡ್ಲೆ ಕಡಲಾಮೆ ಅದಾವುದೋ ಕಾರಣದಿಂದ ತನ್ನ ಮುಂದಿನ ಎರಡೂ ಕಾಲುಗಳನ್ನು ಕಳೆದುಕೊಂಡು, ಸಮುದ್ರ ನೀರಿನಲ್ಲಿ ಸರಿಯಾಗಿ ಈಜಲಾರದೇ ಸಾವು ಬದುಕಿನ ಮಧ್ಯೆ ಹೋರಾಡುತ್ತ ಅಂಕೋಲಾ ತಾಲೂಕಿನ ಬೆಲೆಕೇರಿ ಕಡಲ ತೀರದತ್ತ ಬರಲು ಹರಸಾಹಸ ಪಡುತ್ತಿತ್ತು. ಅದರ ಚಿಂತಾಜನಕ ಸ್ಥಿತಿ ಕಂಡು ಮರುಗಿದ ಕೇಣಿ ಭಾಗದ ಮೀನುಗಾರ ಯುವಕರಾದ ಸತೀಶ , ಗೌರೀಶ ಮತ್ತು ನಾಗೇಂದ್ರ ಅವರು , ತಮ್ಮ ಆತ್ಮೀಯ ಹಾಗೂ ಮೀನುಗಾರ ಮುಖಂಡ ಸಂಜು ಬಲೇಗಾರ ಅವರ ಮೂಲಕ ವಿಸ್ಮಯ ವಾಹಿನಿ ವರದಿಗಾರನಿಗೆ ತಿಳಿಸಿದ್ದು , ಅವರು ಅರಣ್ಯ ಇಲಾಖೆಗೆ ನೀಡಿದ ಮಾಹಿತಿ ಆಧರಿಸಿ, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಆದೇಶದ ಮೇರೆಗೆ ಕಡಲಾಮೆ ರಕ್ಷಣೆ ಮಾಡಲಾಗಿದೆ.
ಮುಂಗಾಲುಗಳು ತುಂಡಾಗಿ ನಿತ್ರಾಣಗೊಂಡಿರುವ ಈ ಅಮೆಯನ್ನು ಸಂರಕ್ಷಿಸಿ, ಸೂಕ್ತ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಸಾಗಿಸಲಾಗಿದೆ. ಅಂಕೋಲಾ ವಲಯ ಅರಣ್ಯಾಧಿಕಾರಿ ಈ ಕುರಿತು ವಿಶೇಷ ಕಾಳಜಿ ವಹಿಸಿದ್ದು, ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ಘಟಕದ ಹಾಗೂ , ರೀಫ್ ವಾಚ್ ಸಿಬ್ಬಂದಿಗಳು , ವೈದ್ಯಾಧಿಕಾರಿಗಳು ಆಮೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯರು ಮತ್ತು ಮೀನುಗಾರರು ಆಮೆಯನ್ನು ಮೇಲೆತ್ತಿ ಸಾಗಿಸಲು ಮತ್ತು ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿ ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ