ಹಣ ಡಬಲ್ ಮಾಡುವುದಾಗಿ ಹೇಳಿ ವಂಚನೆ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮುರ್ಡೇಶ್ವರ ಪೊಲೀಸರು

ಭಟ್ಕಳ: ತಾಲೂಕಿನ ಮುರುಡೇಶ್ವರ ಹಿರೆದೋಮಿಯ ಗುತ್ತಿಗೆದಾರೊಬ್ಬರ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚಿಸಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮುರುಡೇಶ್ವರ ಪೋಲಿಸರು ತಾಲೂಕಿನ ಗುಳ್ಮಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂಬ ಮಾತೊಂದಿದೆ. ಈ ಮಾತು ಅಕ್ಷರಶಃ ಸತ್ಯ ಎಂಬುದನ್ನು ಈ ವರದಿ ರುಜುವಾತು ಮಾಡುತ್ತದೆ. ಗತ್ತಿಗೆದಾರ ಮಂಜುನಾಥ ಸಂಕಯ್ಯ ನಾಯ್ಕ ಮೋಸದ ಜಾಲಕ್ಕೆ ಬಿದ್ದು ಹಣಕೊಂಡ ವ್ಯಕ್ತಿಯಾಗಿದ್ದು ಆರೋಪಿ ಮಹಮ್ಮದ್ ಶಬ್ಬಿರ ಸಂತೃಸ್ತನ ಹಣವನ್ನು ಡಬ್ಲಿಂಗ್ ಮಾಡಿಕೊಡುವದಾಗಿ ನಂಬಿಸಿ ಎರಡೆರಡು ಸಲ ಕ್ರಮವಾಗಿ 2 ಲಕ್ಷ 10 ಸಾವಿರ ಹಾಗೂ 1 ಲಕ್ಷ 15 ಸಾವಿರ, ಒಟ್ಟು 3 ಲಕ್ಷ 25 ಸಾವಿರ ರೂಪಾಯಿಯನ್ನು ಪಡೆದು ವಂಚಿಸಿದ್ದಾನೆ. ಹಣ ಹಿಂದಿರುಗಿಸುವಂತೆ ಪೋನ್ ಮಾಡಿ ಕೇಳಿದಾಗ ಆರೋಪಿ ಸತಾಯಿಸುತ್ತಿದ್ದು, ವಂಚನೆಗೊಳಗಾದ ಮಂಜುನಾಥ ನಾಯ್ಕ ಮುರುಡೇಶ್ವರ ಪೋಲಿಸ ಠಾಣೆಗೆ ವಂಚನೆಯ ಕುರಿತಾಗಿ ದೂರು ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಮ್ ನಾರಾಯಣ, ಹೆಚ್ಚುವರಿ ಪೋಲೀಸ್ ಅಧಿಕ್ಷಕ ಕೃಷ್ಣಮೂರ್ತಿ ಜಿ, ಜಗದೀಶ ಎಂ, ಭಟ್ಕಳ ಉಪ ವಿಭಾಗದ ಪೋಲೀಸ್ ಉಪಾಧಿಕ್ಷಕ ಮಹೇಶ ಎಮ್ ಇವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಹಣಮಂತ ಬಿರಾದರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ತಾಲೂಕಿನ ಗುಳ್ಮಿಯಲ್ಲಿ ವಶಕ್ಕೆ ಪಡೆದು, ಆಪಾದಿತನಿಂದ 50 ಸಾವಿರ ನಗದು ಹಣವನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಮುರುಡೇಶ್ವರ ಠಾಣೆಯ ಸಿಬ್ಬಂಧಿಗಾಳಾದ ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಸಿದ್ಧಪ್ಪ ಕಾಂಬಳೆ, ಪರೀದ್ ಚಿಗರಳ್ಳಿ, ಲೋಕಪ್ಪ ಕತ್ತಿ, ಪಾಲ್ಗೊಂಡಿದ್ದರು.
ಈಶ್ವರ ನಾಯ್ಕ ವಿಸ್ಮಯ ಟಿ.ವಿ ಭಟ್ಕಳ