Join Our

WhatsApp Group
Important
Trending

ಅಂಕೋಲಾದಲ್ಲಿ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆ

ಅಂಕೋಲಾ: ವೃಕ್ಷ ಪೂಜೆ ಹಾಗೂ ಗಿಡ ನೆಡುವುದರ ಮೂಲಕ ಅಂಕೋಲಾದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಪ್ರಿಯಾ ರವಿ ಜೋಗಳೇಕರ ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಪ್ರೇಮದ ಬಗ್ಗೆ ಮನಮುಟ್ಟುವಂತೆ ತಿಳಿಸಿದರು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಾ ಬರಲಾಗಿದ್ದು,ಈ ವರ್ಷ ಅಂಕೋಲಾದ ಷಟ್ಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮಾಜದಲ್ಲಿ ಜಾಗೃತಿಯ ಅಗತ್ಯತೆ ಇದೆ

ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ ಮತ್ತು ಬಳಕೆಯ ನಂತರ ಅದನ್ನು ಮನಸ್ಸಿಗೆ ಬಂದಂತೆ ಎಸೆಯುವುದರಿಂದ ಪ್ರವಾಸಿ ತಾಣಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ನೆಲ ಜಲಗಳು ಪ್ಲಾಸ್ಟಿಕ್ ಮಯವಾಗುತ್ತಿದ್ದು ಪ್ಲಾಸ್ಟಿಕ್ ಬಳಸಿದ ನಂತರ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಸಮಾಜದಲ್ಲಿ ಜಾಗೃತಿಯ ಅಗತ್ಯತೆ ಇದೆ ಎಂದು ಅಂಕೋಲಾ ನ್ಯಾಯಾಲಯದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀರರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪ್ರಿಯಾ ಜೋಗಳೆಕರ್ ಹೇಳಿದರು.

ವೃಕ್ಷ ಪೂಜೆಯಂತ ಪವಿತ್ರ ಕಲ್ಪನೆ ಮನಸ್ಸಿಗೆ ಖುಷಿ ನೀಡಿದೆ

ಅರಣ್ಯ ಇಲಾಖೆ ಅಂಕೋಲಾ ವಲಯ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಂಕೋಲಾ ಹಾಗೂ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶೆಟಗೇರಿಯ ಶಾಲಾ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಆಲದ ಮರಕ್ಕೆ ಪೂಜೆ ಸಲ್ಲಿಸಿ ಗಿಡಗಳನ್ನು ನೆಟ್ಟು ನೀರೆರದು ಮಾತನಾಡಿದ ಅವರು , ವೃಕ್ಷ ಪೂಜೆಯಂತ ಪವಿತ್ರ ಕಲ್ಪನೆ ಈ ಕಾರ್ಯಕ್ರಮ ನಿಜಕ್ಕೂ ನನ್ನ ಮನಸ್ಸಿಗೆ ಖುಷಿ ನೀಡಿದೆ.

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಇಂದು ಪರಿಸರ ಸಂರಕ್ಷಣೆ ಅಗತ್ಯವಿದೆ ವರ್ಷದಲ್ಲಿ ಒಂದು ದಿನ ಗಿಡ ನೀಡುವುದರಿಂದ
ಪರಿಸರ ಉಳಿಸಲು ಸಾಧ್ಯವಿಲ್ಲ ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸುವ ಅಗತ್ಯತೆ ಇದೆ ಎಂದರು. ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಜಯೇಶ್ ಮಾತನಾಡಿ ದಿನಬಳಕೆಯ ಪ್ಲಾಸ್ಟಿಕ್ ಸೂಕ್ತ ವಿಲೇವಾರಿ ಆಗದೇ ನೆಲ,ಜಲ ಸೇರುತ್ತಿದ್ದು ಸಮುದ್ರದ ಆಳದಲ್ಲೂ ಪ್ಲಾಸ್ಟಿಕ್ ಸೇರಿಕೊಂಡು ಜಲಚರಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತೊಡಗಿದೆ.

ವಾತಾವರಣದಲ್ಲಿನ ಚಿಕ್ಕ ಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹ ಸೇರಿ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದರು.
ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ಲಾಸ್ಟಿಕ್ ನಿರ್ಮೂಲನೆಯ ಧ್ಯೇಯ ವಾಕ್ಯದೊಂದಿಗೆ ವಿಶ್ವಾದ್ಯಂತ ಈ ವರ್ಷ ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು ಪ್ರತಿಯೊಬ್ಬರೂ ಈ ದಿಶೆಯಲ್ಲಿ ಕೆಲಸ ಮಾಡಬೇಕಿದೆ ಎಂದರು.

ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ ಮಕ್ಕಳು ಪರಿಸರ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಆಗಲಿ ಎಂದರು. ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಮುಖ್ಯಾಧ್ಯಾಪಕ ಎನ್.ವಿ.ರಾಥೊಡ್,ವಕೀಲರ ಸಂಘದ ನೂತನ ಅಧ್ಯಕ್ಷೆ ಪ್ರತಿಭಾ ನಾಯ್ಕ,ಎಪಿಪಿ ಶಿಲ್ಪಾ ನಾಯ್ಕ್,ವಕೀಲರ ಸಂಘದ ಹಿರಿಕಿರಿಯ ಸದಸ್ಯರು,ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು, ಶಾಲಾ ಸಮಿತಿಯ ಸದಸ್ಯ ಅನುಪ್ ನಾರಾಯಣ ನಾಯಕ ಶೆಟಗೇರಿ ಸೇರಿದಂತೆ ಇತರ ಪ್ರಮುಖರಿದ್ದರು.

ಅತಿಥಿ ಗಣ್ಯರು ಮತ್ತು ಶಾಲಾ ಮಕ್ಕಳು ಸಾಂಕೇತಿಕವಾಗಿ ಹಣ್ಣು ಮತ್ತು ಇತರ ಜಾತಿಯ ಕೆಳಗಿಡಗಳನ್ನು ನೆಟ್ಟರು. ನ್ಯಾಯಾಧೀಶರು ಶಾಲಾ ವಿದ್ಯಾರ್ಥಿನಿಗೆ ಮುರುಗಲ ಗಿಡ ಹಸ್ತಾಂತರಿಸಿ ಪ್ರತಿ ಮಗುವೂ ತನ್ನ ಮನೆಯಲ್ಲಿ ಕನಿಷ್ಟ ಒಂದೊಂದು ಗಿಡಗಳನ್ನು ನೆಟ್ಟು ದಿನನಿತ್ಯ ಅದರ ಬೆಳವಣಿಗೆಗೆ ಕೈಜೋಡಿಸುವಂತಾಗಲಿ ಎಂದರು. ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button