
ಕುಮಟಾ: ಇಲ್ಲಿನ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯು ಜೂನ್ 5 ರಂದು (ಗುರುವಾರ) ಕುಮಟಾ ಲಯನ್ಸ್ ಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ 25 ಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ನೇತ್ರಗಳನ್ನು ತಪಾಸಣೆಗೊಳಪಡಿಸಿಕೊಂಡರು.
ತಪಾಸಣೆಯ ವೇಳೆ 15 ಜನರಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆ ಅಗತ್ಯವಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಕುಮಟಾದಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕರೆತರಲಾಯಿತು. ಜೂನ್ 6 ರಂದು (ಶುಕ್ರವಾರ) ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಮನೋಜ್ ಹಾಗೂ ಡಾ. ರಾಜಶೇಖರ ಅವರ ನೇತೃತ್ವದ ವೈದ್ಯಕೀಯ ತಂಡವು ಇವರೆಲ್ಲರಿಗೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿತು.
ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಗುರುವಾರ ಮತ್ತು ಶುಕ್ರವಾರ ಆಸ್ಪತ್ರೆಯಲ್ಲಿಯೇ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ಬೆಳಿಗ್ಗೆ ಆಸ್ಪತ್ರೆಯಿಂದ ಇವರನ್ನು ಬೀಳ್ಕೊಡಲಾಯಿತು. ಈ ಅವಧಿಯಲ್ಲಿ ವಸತಿ, ಔಷಧೋಪಚಾರ,ಶಸ್ತ್ರಚಿಕಿತ್ಸೆ, ಊಟೋಪಹಾರ ಸೇರಿದಂತೆ ಎಲ್ಲ ವ್ಯವಸ್ಥೆಯೂ ಸಂಪೂರ್ಣ ಉಚಿತವಾಗಿತ್ತು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು.
“ಕಳೆದ 19 ವರ್ಷಗಳಿಂದಲೂ ತಿಂಗಳಿನ ಪ್ರತಿ ಗುರುವಾರ ಜಿಲ್ಲೆಯ ವಿವಿಧೆಡೆ ನಮ್ಮ ‘ಲಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್ ‘ ವತಿಯಿಂದ ಇಂತಹ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತ ಬರಲಾಗುತ್ತಿದ್ದು, ಈವರೆಗೆ ಶಸ್ತ್ರಚಿಕಿತ್ಸೆ ಅತ್ಯವಶ್ಯವುಳ್ಳ 9000 ಕ್ಕೂ ಅಧಿಕ ಜನರು ಈ ಉಚಿತ ಶಸ್ತ್ರಚಿಕಿತ್ಸಾ ಸೌಲಭ್ಯದ ಸದುಪಯೋಗ ಪಡೆದುಕೊಂಡಿದ್ದಾರೆ” ಎಂದು ಆಡಳಿತಾಧಿಕಾರಿ ಜಯದೇವ ಬಳಗಂಡಿ ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್, ಕುಮಟಾ