
ಕಾರವಾರ: ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ, ಜಿಲ್ಲೆಯ ಅತ್ಯಂತ ಅಪಾಯಕಾರಿ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಿದ್ದು, ಕುಮಟಾ ತಾಲೂಕಿನ ಬರ್ಗಿಯ ಕುರಿಗದ್ದೆ, ಗೋಕರ್ಣ ಭಾಗದ ತೊರ್ಕೆ ಗ್ರಾಮ, ಹೊನ್ನಾವರದ ಆಲಂಕಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಯಲ್ಲಾಪುರದ ಕೊಡ್ಡಗದ್ದೆ ಭಾಗಗಳಲ್ಲಿ ಮಣ್ಣು ಅತಿ ಹೆಚ್ಚು ಸಡಿಲವಾಗಿದೆ. ಅದರಲ್ಲೂ, ಕುಮಟಾದ ತೊರ್ಕೆಯಲ್ಲಿ ಮಣ್ಣು ಅತೀ ಹೆಚ್ಚು ಸಡಿಲವಾಗಿದ್ದು, ಯಾವಾಗ ಬೇಕಾದರೂ ಕುಸಿಯಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
2024ರ ಜುಲೈ ಮತ್ತು ಆಗಸ್ಟ್ನಲ್ಲಿ ತೊರ್ಕೆ ಹಾಗೂ ಬರ್ಗಿ ಕುರಿಗದ್ದೆ ಗ್ರಾಮಗಳಲ್ಲಿ ಭೂಕುಸಿತ ಸಂಭವಿದ್ದನ್ನು ಜಿಎಸ್ಐ ವರದಿ ಉಲ್ಲೇಖಿಸಿದೆ. ಈ ಜೊತೆಗೆ ಭೂ ಕುಸಿತ ವಲಯಗಳ ನಕ್ಷೆಯನ್ನೂ ಬಿಡುಗಡೆಗೊಳಿಸಿದೆ. ಗುಡ್ಡ ಕುಸಿತದ ತೀವ್ರ ಅಪಾಯವನ್ನು ಪರಿಗಣಿಸಿ, ಕುಮಟಾದ ತೊರ್ಕೆ ಮತ್ತು ಬರ್ಗಿ ಕುರಿಗದ್ದೆ ಗ್ರಾಮಗಳಲ್ಲಿನ ಕುಟುಂಬಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಜಿಎಸ್ಐ ತಜ್ಞರು ಸ್ಪಷ್ಟ ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತವು ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ, ಅಪಾಯಕಾರಿ ಸ್ಥಳಗಳಲ್ಲಿರುವ ಕುಟುಂಬಗಳಿಗೆ ಸ್ಥಳಾಂತರದ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್