ರೈಲ್ವೆ ಸುರಂಗ ಮಾರ್ಗದ ಬಳಿ ಪತ್ತೆಯಾಗಿತ್ತು ಅಪರಿಚಿತ ಪುರುಷ ಮೃತ ದೇಹ : ಛಿಧ್ರ ವಿಧ್ರವಾಗಿದ್ದ ದೇಹ ಗುರುತಿಸಲು ಹೊರಡಿಸಲಾಗಿತ್ತು ಪೋಲಿಸ್ ಪ್ರಕಟಣೆ
ಮೃತ ವ್ಯಕ್ತಿ ತನ್ನ ತಂದೆ ಎಂದು ಗುರುತಿಸಿದ ಮಗ

ಅಂಕೋಲಾ: ರೈಲು ಬಡಿದು ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ತಾಲೂಕಿನ ಕೃಷ್ಣಾಪುರ ರೈಲ್ವೆ ಸುರಂಗ ಮಾರ್ಗದ ಬಳಿ ಜೂ 18 ರಂದು ನಡೆದಿತ್ತು. ಸುಮಾರು 50ರಿಂದ 60 ವಯಸ್ಸಿನ ವ್ಯಕ್ತಿ ಮಂಗಳೂರಿನಿಂದ ಮಡಗಾಂವ ಕಡೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಸಂಖ್ಯೆ 56616 ಗೆ ಸುರಂಗ ಮಾರ್ಗದ ಬಳಿ ಅಡ್ಡ ಬಂದಿರುವುದರಿಂದ ರೈಲು ಬಡಿದು ಮೈ ಮೇಲೆ ಹಾಯ್ದು ಹೋಗಿದ್ದು ವ್ಯಕ್ತಿಯ ದೇಹ ಛಿದ್ರಗೊಂಡಿದೆ.
ಮೃತ ವ್ಯಕ್ತಿಯ ಗುರುತು ವಿಳಾಸ ತಿಳಿದು ಬಂದಿಲ್ಲ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬನಿಯನ್, ಕಂದು ಗೆರೆಯ ಉದ್ದ ತೋಳಿನ ಶರ್ಟ್ ಧರಿಸಿದ್ದು ಸೊಂಟಕ್ಕೆ ಕಟ್ಟಿದ ಕಪ್ಪು ದಾರದಲ್ಲಿ ಕೀಲಿ ಗೊಂಚಲು ಇರುವುದು ಕಂಡು ಬಂದಿದ್ದು, ವ್ಯಕ್ತಿ ಕುರಿತು ಯಾವುದೇ ರೀತಿಯ ಮಾಹಿತಿ ಇದ್ದರೆ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿತ್ತು. ಪಿ ಎಸ್ ಐ ಉದ್ದಪ್ಪ ಧರೆಪ್ಪ ನವರ ಮತ್ತು ಸಿಬ್ಬಂದಿಗಳಾದ ಸಲೀಂ ಮೊಕಾಶಿ, ರವಿ, ಶಿವಾನಂದ ಮತ್ತಿತರರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದು, ಘಟನಾ ಸ್ಥಳದಿಂದ ಛಿದ್ರ ಛಿದ್ರವಾಗಿದ್ದ ಮೃತ ದೇಹವನ್ನು ,ಜಿಲ್ಲಾ ಆಸ್ಪತ್ರೆ ಶವಗಾರದ ಶೈತ್ಯಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ಕನಸಿ ಗದ್ದೆಯ ವಿಜಯ್ ಕುಮಾರ್ ನಾಯ್ಕ್, ಸಹಾಯಕರಾದ ಬೊಮ್ಮಯ್ಯ ನಾಯ್ಕ, ರತನ ನಾಯ್ಕ, ರಕ್ಷಿತ ನಾಯ್ಕ ಹಾಗೂ ಸ್ಥಳೀಯ ನಾಗರಾಜ ಕಿಶೋರ ನಾಯ್ಕ ಸಹಕರಿಸಿದ್ದರು.
ಮೃತ ವ್ಯಕ್ತಿ ಸ್ಥಳಿಯನೇ ಅಥವಾ ಹೊರಗಿನವನೇ ಎಂದು ತಿಳಿದು ಬರದೇ ಪೊಲೀಸ್ ಪ್ರಕಟಣೆ ಹೊರಡಿಸಲಾಗಿತ್ತಲ್ಲದೇ ,ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ವಿಷಯ ವೈರಲ್ ಆಗಿತ್ತು. ರಾತ್ರಿಯ ವೇಳೆ ಅಂತು ಇಂತೂ ಆ ವ್ಯಕ್ತಿ ಯಾರೆಂಬದು ಬಹುತೇಕ ಪತ್ತೆಯಾಗಿದ್ದು,ಆತನನ್ನು ಅಂಕೋಲಾ ಬೇಳಾಬಂದರ ನಿವಾಸಿ ತುಕಾರಾಮ ಜಟ್ಟಿ ನಾಯ್ಕ (75) ಎನ್ನಲಾಗಿದ್ದು ಆತನ ಮೈ ಮೇಲಿನ ಬಟ್ಟೆ ಮತ್ತಿತರ ರೀತಿಯಿಂದ ಮೃತ ವ್ಯಕ್ತಿ ತನ್ನ ತಂದೆ ಎಂದು ಮಗ ಮಾರುತಿ ನಾಯ್ಕ ಗುರುತಿಸಿದ್ದು, ಕಾರವಾರದ ಶವಾಗಾರಕ್ಕೆ ತೆರಳಿ ಅಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಹುಲಿದೇವರ ವಾಡ ಮತ್ತಿತರೆಡೆ ವಿದ್ಯುತ್ತ ಸಂಪರ್ಕ ದುರಸ್ಥಿ ಮತ್ತಿತರ ಕೆಲಸ ಮಾಡಿಕೊಂಡು ಓಡಾಡಿಕೊಂಡಿರುತ್ತಿದ್ದ ತುಕಾರಾಮ ಅದಾವುದೋ ಕಾರಣದಿಂದ ರೈಲ್ವೆ ಸುರಂಗ ಮಾರ್ಗದ ಬಳಿ ಹೋದವ ತದ ನಂತರ ಮೃತ ದೇಹವಾಗಿ ಪತ್ತೆಯಾಗುವಂತಾಗಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ