
ಎಡನೀರು (ಕಾಸರಗೋಡು ಜಿಲ್ಲೆ) : ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಶ್ರೀಪಾದಂಗಳವರ ಪಂಚಮ ವಾರ್ಷಿಕ ಆರಾಧನಾ ಮಹೋತ್ಸವವು ಸೆಪ್ಟೆಂಬರ್ 11, 2025, ಗುರುವಾರದಂದು ವೈದಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ. ಪೂಜ್ಯಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಗೌರವ” ಪ್ರದಾನ
ಆರಾಧನಾ ಸಮಾರಂಭದಂದು ಗಣ್ಯರ ಸಮ್ಮುಖದಲ್ಲಿ “ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಗೌರವ”ವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾಮಾಜಿಕ ಧುರೀಣರು ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಕೃಷ್ಣ ಬಾಬಾ ಪೈ ಅವರಿಗೆ ಪ್ರದಾನ ಮಾಡಲಾಗುವುದು.
ಕೃಷ್ಣ ಬಾಬಾ ಪೈ ಅವರು ಸಲ್ಲಿಸುತ್ತ ಬಂದಿರುವ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಲಕ್ಷಿಸಿ, ಜೊತೆಗೆ ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಶ್ರೀಪಾದಂಗಳವರೊಂದಿಗೆ ಅವರೊಂದಿಗಿನ ಆತ್ಮೀಯ ಮತ್ತು ಗೌರವಪೂರ್ವಕ ಒಡನಾಟದಿಂದ ಶ್ರೀ ಎಡನೀರು ಮಠ ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನಗಳ ನಡುವಿನ ಧಾರ್ಮಿಕ–ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಿರುವುದನ್ನು ಮೆಚ್ಚಿ ಪ್ರೇರಣಾಪೂರ್ವಕವಾಗಿ ಈ ಗೌರವ ಪ್ರದಾನ ಮಾಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಈ ಗೌರವದ ಸುದ್ದಿಯನ್ನು ತಿಳಿದು, ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಭಕ್ತವೃಂದ ಹಾಗೂ ಸ್ಥಳೀಯರು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಕೃಷ್ಣ ಬಾಬಾ ಪೈ ಅವರ ಸಮಾಜಮುಖಿ ಸೇವೆ, ಧಾರ್ಮಿಕ ಕೈಂಕರ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ನೀಡುತ್ತ ಬಂದಿರುವ ಕೊಡುಗೆಗೆ ಕೃತಜ್ಞತೆ ವ್ಯಕ್ತಪಡಿಸುತ್ತ, ಭಕ್ತರು ಅವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸುತ್ತ, ಶುಭಕೋರಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್