Uttara Kannada
Trending

ಕಡಲತೀರದಲ್ಲಿನ ಕಸ ತೆಗೆದ ನಟ, ಕಲಾವಿದ ಅರುಣ್ ಸಾಗರ್: ಪಹರೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿ

ಆರು ವರ್ಷ ಪೂರೈಸಿದ ಹಿನ್ನಲೆ
ಪಹರೆಯಿಂದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಚಿತ್ರನಟ, ನಿರ್ದೇಶಕ ಅರುಣ್ ಸಾಗರ ಸೇರಿ ಹಲವು ಗಣ್ಯರು ಭಾಗಿ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಪಹರೆ ಹೆಸರಿನ ಸಂಘಟನೆ ಕಳೆದ 6 ವರ್ಷಗಳಿಂದ ನಗರದ ವಿವಿದೆಡೆ ಸ್ವಚ್ಚತಾ ಕಾರ್ಯವನ್ನ ಮಾಡುತ್ತಾ ಬರುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚತಾ ಆಂದೋಲನಕ್ಕೆ ಕರೆ ನೀಡಿದ ನಂತರ ಪ್ರೇರೇಪಣೆಗೊಂಡ ಕೆಲವರು ನಗರದಲ್ಲಿ ಪಹರೆ ಅನ್ನುವ ಸಂಘಟನೆಯನ್ನ ಕಟ್ಟಿಕೊಂಡು ಸ್ವಚ್ಚತಾ ಕಾರ್ಯವನ್ನ ನಡೆಸುತ್ತಾ ಬಂದಿದ್ದಾರೆ. ಪ್ರತಿ ಶನಿವಾರದಂತೆ ನಗರದ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಕಡಲತೀರ, ಪಾರ್ಕ್ ಸೇರಿದಂತೆ ಹಲವೆಡೆ ಸ್ವಚ್ಚತಾ ಕಾರ್ಯವನ್ನ ಮಾಡುವ ಮೂಲಕ ಗಮನ ಸೆಳೆದ ಪಹರೆ ವೇದಿಕೆ ಇಂದಿಗೆ 317ನೇ ವಾರವನ್ನ ಪೂರೈಸಿದೆ.

ಈ ಹಿನ್ನಲೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಕಾಳಿಸಂಗಮ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯವನ್ನ ಹಮ್ಮಿಕೊಂಡಿದ್ದು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ಚಿತ್ರನಟ, ನಿರ್ದೇಶಕ ಅರುಣ್ ಸಾಗರ ಸಹ ಪಾಲ್ಗೊಂಡಿದ್ದರು. ಸಾಕಷ್ಟು ಪ್ರವಾಸಿಗರು ಭೇಟಿ ನೀಡುವ ಹಾಗೂ ಕಾಳಿ ನದಿ ಸಮುದ್ರವನ್ನ ಸೇರುವ ಪವಿತ್ರ ಸ್ಥಳವಾದ ಕಾಳಿ ಸಂಗಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ರಾಶಿಯಾಗಿ ಗಬ್ಬೆದ್ದು ಹೋಗಿತ್ತು. ಈ ನಿಟ್ಟಿನಲ್ಲಿ ಇಂದು ವಾರದ ಸ್ವಚ್ಛತೆಯನ್ನ ಹಮ್ಮಿಕೊಂಡ ಪಹರೆ ಕಾರ್ಯಕರ್ತರು ಕಡಲತೀರದಲ್ಲಿ ಸ್ವಚ್ಚತೆಯನ್ನ ನಡೆಸಿದರು. ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆಯೊಂದಿಗೆ ಸ್ವಚ್ಛತಾಕಾರ್ಯವನ್ನ ಆರಂಭಿಸಿದ್ದು ಇಂದಿಗೆ 317 ವಾರಗಳನ್ನ ತಲುಪಿದೆ ಅಂತಾರೇ ಪಹರೆ ಅಧ್ಯಕ್ಷರು.

ಇನ್ನು ಪಹರೆ ಸಂಘಟನೆ ಕಾರ್ಯಕರ್ತರು ಪ್ರತಿ ಶನಿವಾರ ಬೆಳಿಗ್ಗೆ ಕಾರವಾರ ನಗರದಲ್ಲಿ ಸ್ವಚ್ಚತಾ ಕಾರ್ಯವನ್ನ ಮಾಡುತ್ತಿದ್ದು ವಾರಕ್ಕೊಂದು ಸ್ಥಳದಲ್ಲಿ ಸ್ವಚ್ಚತೆಯನ್ನ ಮಾಡುವ ಕಾರ್ಯವನ್ನ ಕಾರ್ಯಕರ್ತರು ಹಮ್ಮಿಕೊಳ್ಳುತ್ತಾರೆ. ಈ ಸಂಘಟನೆಯಲ್ಲಿ ವಕೀಲರು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವೃತ್ತಿಯನ್ನ ಮಾಡುವಂತಹ ಜನರು ಸಹ ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಮೂಲಕ ಸ್ವಚ್ಚತೆ ನಮ್ಮ ಹಕ್ಕು ಅನ್ನೋ ಮನೋಭಾವನೆಯನ್ನ ಬೆಳೆಸಿಕೊಂಡಿದ್ದಾರೆ.

ಇದಲ್ಲದೇ ಮಹಿಳೆಯರು ಮಕ್ಕಳು ವೃದ್ದರೆನ್ನದೇ ಎಲ್ಲರೂ ಸ್ವಚ್ಚತೆಯಲ್ಲಿ ತೊಡಗಿರುವುದು ಸಂಘಟನೆಯ ವಿಶೇಷ. ಇವತ್ತು ಸಹ ಮುನ್ನೂರಕ್ಕೂ ಅಧಿಕ ಮಂದಿ ಒಟ್ಟಾಗಿ ಕಾಳಿ ಸಂಗಮದಲ್ಲಿ ಸುಮಾರು ಎರಡು ತಾಸುಗಳವರೆಗೆ ಸ್ವಚ್ಛತೆಯನ್ನ ಮಾಡಿದ್ದು ಕಲಾವಿದ ಅರುಣ್ ಸಹ ಸ್ವಚ್ಛತೆಯಲ್ಲಿ ಭಾಗವಹಿಸಿ ಸಂತಸಪಟ್ಟರು.

ವಿಸ್ಮಯ ನ್ಯೂಸ್, ಕಾರವಾರ

Back to top button