
ಕುಮಟಾ: ಕಳೆದ 2 ವರ್ಷಗಳಿಂದ ಕುಮಟಾ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಕಲ್ಯಾಣಿ ವೆಂಕಟೇಶ್ ಕಾಂಬಳೆ ಅವರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅವರ ಬೀಳ್ಕೊಡುಗೆ ಸಮಾರಂಭವನ್ನು ಇಂದು ಕುಮಟಾ ತಾಲೂಕಿನ ತಾಲೂಕ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕುಮಟಾ ತಹಶೀಲ್ದಾರರ ಕಾರ್ಯಾಲಯದಿಂದ ತಹಶೀಲ್ದಾರರಾದ ಕೃಷ್ಣ ಕಾಮ್ಕರ್ ಅವರು ಕಲ್ಯಾಣಿ ಕಾಂಬ್ಳೆ ಅವರಿಗೆ ಶಾಲು ಹೊದೆಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರಿ ಕೆಲಸದಲ್ಲಿ ಸರ್ವೆ ಸಾಮಾನ್ಯವಾಗಿ ವರ್ಗಾವಣೆ ಮತ್ತು ನಿವೃತ್ತಿ ಎನ್ನುವುದು ಇದ್ದೇ ಇರುತ್ತದೆ. ಸರ್ಕಾರದ ಆದೇಶದಂತೆ ಕಳೆದ 2 ವರ್ಷಗಳಿಂದ ನಮ್ಮ ಕುಮಟಾದ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಕಲ್ಯಾಣಿ ವೆಂಕಟೇಶ್ ಕಾಂಬಳೆ ಅವರು ವರ್ಗಾವಣೆ ಆಗಿದ್ದಾರೆ. ಅವರ ವರ್ಗಾವಣೆಯ ನಂತರದ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಮಟಾ ಸಹಾಯಕ ಆಯುಕ್ತರ ಕಾರ್ಯಾಲದಿಂದ, ಅಂಕೋಲಾ ತಹಶೀಲ್ದಾರರು, ಕುಮಟಾ ಕಾರ್ಮಿಕ ಸಂಘ, ತಾಲೂಕಾ ಆಸ್ಪತ್ರೆ ಹಾಗೂ ವಿವಿಧ ಇಲಾಖೆಗಳಿಂದ ಕಲ್ಯಾಣಿ ಕಾಂಬ್ಳೆ ಅವರಿಗೆ ಹಾರ ಹಾಕಿ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕಲ್ಯಾಣಿ ಕಾಂಬ್ಳೆ ನನ್ನ ಸರ್ಕಾರಿ ವೃತ್ತಿ ಜೀವನ ಆರಂಭವಾಗಿರುವುದು ಕುಮಟಾದಲ್ಲಿ. 2 ವರ್ಷಗಳು ಹೇಗೆ ಕಳೆದವು ಎನ್ನುವುದು ಗೊತ್ತೆ ಆಗಿಲ್ಲ. ನಮ್ಮ ತಾಲೂಕಿನಲ್ಲಿ ಇರುವ ಸಮಸ್ಯೆಗಳನ್ನು ಅರಿತುಕೊಂಡು ಅದಕ್ಕೆ ಪರಿಹಾರ ನೀಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನಗೆ ಈ ಇಲಾಖೆಯಲ್ಲಿ ಇರುವ ಎಲ್ಲಾ ನೌಕರರು ತುಂಬಾ ಸಹಕಾರ ನೀಡಿದ್ದಾರೆ ಎಂದು ತಮ್ಮ ಅನಿಸಿಕೆ ಹಂಚಿಕೊoಡರು.
ಗ್ರೇಡ್ 2 ತಹಶೀಲ್ದಾರರಾದ ಅಶೋಕ ಭಟ್, ನೂತನ ಸಹಾಯಕ ಆಯುಕ್ತರಾದ ಪಿ. ಶ್ರವಣ್ ಕುಮಾರ್, ಪ್ರಮುಖರಾದ ಆರ್.ಎಚ್. ನಾಯ್ಕ ಕಾಗಾಲ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಅಂಕೋಲಾ ತಹಶೀಲ್ದಾರರಾದ ಚಿಕ್ಕಪ್ಪ ನಾಯಕ್, ಗ್ರೇಡ್ 2 ತಹಶೀಲ್ದಾರರಾದ ಸತೀಶ ಗೌಡ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ್, ಕಾರ್ಮಿಕ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಸೇರಿದಂತೆ ತಹಶೀಲ್ದಾರರ ಕಾರ್ಯಲಯದ ಅಧಿಕಾರಿಗಳು, ಸಹಾಯಕ ಆಯುಕ್ತರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ…