
ಹೊನ್ನಾವರ: ಇನ್ನೇನು ಕೆಲದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬವು ಬರುತ್ತಿದ್ದು, ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಣ್ಣಿನ ಗಣಪತಿಯ ಮೂರ್ತಿಯ ತಯಾರಿ ಜೋರಾಗಿದೆ. ಮೂರ್ತಿ ತಯಾರಕರು ಗಣಪನ ಬೇರೆ ಬೇರೆ ವೇಷದಲ್ಲಿ ಮೂರ್ತಿಯನ್ನು ತಯಾರಿಸಿದ್ದು, ತಾಲೂಕಿನ ಕರ್ಕಿಯ ಭಂಡಾರಕೇರಿಯಲ್ಲಿ ಗಣಪತಿ ಮೂರ್ತಿಯ ತಯಾರಿಕೆ ಭರದಿಂಧ ಸಾಗಿದೆ.
ಜೇಡಿಮಣ್ಣಿನಿಂದ ಸುಮಾರು 250ಕ್ಕೂ ಅಧಿಕ ಗಣಪನ ಮೂರ್ತಿ
ಕರ್ಕಿಯ ಭಂಡಾರಕೇರಿಯಲ್ಲಿ 4 ಮನೆಗಳಲ್ಲಿ ಜೇಡಿಮಣ್ಣಿನಿಂದ ಸುಮಾರು 250ಕ್ಕೂ ಅಧಿಕ ಗಣಪನ ಮೂರ್ತಿಯನ್ನು ತಯಾರಿಸುತ್ತಿದ್ದು, ಈ ಬಗ್ಗೆ ಮಾತನಾಡಿದ ಮೂರ್ತಿಕಾರರಾದ ರಮೇಶ ಭಂಡಾರಿ , ನಮ್ಮ ಈ ಮೂರ್ತಿಯ ಕಲೆಯು ವಂಶಪರoಪರೆಯಾಗಿ ಬಂದಿದೆ. ನಮ್ಮ ಮನೆಯಲ್ಲಿ 87 ಮೂರ್ತಿಯನ್ನು ಶುದ್ದಜೇಡಿಮಣ್ಣಿನಿಂದ ತಯಾರಿಸುತ್ತಿದ್ದೇವೆ.
3-4 ತಿಂಗಳಿನಿoದ ಮೂರ್ತಿಯನ್ನು ತಯಾರಿಸಲು ಪ್ರಾರಂಭ ಮಾಡುತ್ತೇವೆ. ಜೇಡಿಮಣ್ಣನ್ನು ತಂದು ನಾವು ಮನೆಯಲ್ಲಿರುವ ಅಣ್ಣತಮ್ಮಂದಿರ ಜೊತೆ ಸೇರಿ ಮೂರ್ತಿಗಳನ್ನು ತಯಾರಿಸುತ್ತಿದ್ದು, ಮೂರ್ತಿಗೆ ಬಣ್ಣ ಬಳಿಯಲು ಊರಿನ ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ಬಂದು ಮಾಡುತ್ತಾರೆ ಎಂದರು.
ವಿವಿಧ ಭಂಗಿಯ ಮೂರ್ತಿಗಳು
ಗಣಪತಿಯನ್ನು ಇಲಿಯ ಮೇಲೆ, ಆಕಳಿನ ಮೇಲೆ, ಸಿಂಹಾಸನದ ಮೇಲೆ, ಕಮಲದ ಮೇಲೆ ಕುಳಿತ ಗಣಪ, ಅಯ್ಯಪ್ಪ ಸ್ವಾಮಿಯ ರೂಪದಲ್ಲಿ ಕುಳಿತ ಗಣಪ, ಗರುಡ ಗಣಪ, ಶಿವ-ಪಾರ್ವತಿಯ ಜೊತೆ ಕುಳಿತ ಗಣಪ, ಹೀಗೆ ವಿವಿಧ ರೂಪಗಳಲ್ಲಿ ಗಣಪನ ಮೂರ್ತಿಯನ್ನು ತಯಾರಿಸಿದ್ದು, ಮೂರ್ತಿಯನ್ನು ನೋಡಲು ಸಾರ್ವಜನಿಕರ ತಂಡವೇ ಹರಿದು ಬರುತ್ತಿದೆ.
ಭಕ್ತರು ಗಣಪನನ್ನು ಪೂಜಿಸಲು ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಇಲ್ಲಿಯ ಮೂರ್ತಿಯು ಪಿ.ಓ.ಪಿ ಗಳನ್ನು ಬಳಸದೇ ಕೇವಲ ಜೇಡಿಮಣ್ಣಿನಿಂದ ತಯಾರಿಸುತ್ತಿದ್ದು ಅಪಾಯವಲ್ಲದ ಬಣ್ಣಗಳನ್ನು ಬಳಿಯುತ್ತಿದ್ದು ಪರಿಸರ ಸ್ನೇಹಿಯಾಗಿರುವುದು ವಿಶೇಷ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ