ಟ್ಯಾಂಕರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲಿ ಲಾರಿ ನಿಲ್ಲಿಸದೇ ಓಡಿ ಹೋದ ಚಾಲಕ: ಸ್ಥಳದಲ್ಲೇ ಮೃತ ಪಟ್ಟ ಸವಾರ

ಅಂಕೋಲಾ : ಟ್ಯಾಂಕರ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪಾರಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಂಚಿನಬಾಗಿಲ- ನವಗದ್ದೆ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ. ಹೊನ್ನಳ್ಳಿಯ ವೆಂಕಟೇಶ ಚಂದ್ರು ಗೌಡ (42) ಮೃತ ದುರ್ದೈವಿ,

ಈತ ಬಾವಿಯ ರಿಂಗ್ ಮಾಡುವ ಉದ್ಯೋಗ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದು ಇಬ್ಬರು ಪುಟ್ಟ ಮಕ್ಕಳ ತಂದೆಯಾಗಿದ್ದ .ಆತನ ಅಕಾಲಿಕ ಸಾವಿನಿಂದ ಮನೆಯ ಆಧಾರ ಸ್ಥಂಭವೇ ಕಳಚಿ ಬಿದ್ದಂತಾಗಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಸಾಗುತ್ತಿದ್ದ ಟ್ಯಾಂಕರ ಲಾರಿ (ಎಮ್.ಎಚ್09/ಇಎಮ್ 7001) ಬೇರೆ ಯಾವುದೋ ವಾಹನವನ್ನು ಓವರಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಅಂಕೋಲಾದಿಂದ ಹೊನ್ನಳ್ಳಿಗೆ ಸಾಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವೃತೆಗೆ ಬೈಕ್ ನ ಗಾಲಿ (ಚಕ್ರ )ತುಂಡಾಗಿ , ಬೈಕ್ ಸವಾರ ಸಿಡಿದು ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಪಡಿಸಿದ ಮಹಾರಾಷ್ಟ್ರ ಮೂಲದ ಟ್ಯಾಂಕರ ಲಾರಿ ಚಾಲಕ ತನ್ನ ವಾಹನ ನಿಲ್ಲಿಸದೇ ಮುಂದೆ ಹೋಗಿ , ಅಲ್ಲಿ ವಾಹನ ಬಿಟ್ಟು ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ. ಅತೀ ವೇಗ ಮತ್ತು ನಿಷ್ಕಾಳಜಿತನದ ಚಾಲನೆಗಾಗಿ ಲಾರಿ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಶವಂತ ಗೌಡ, ಗೋಪು ಅಡ್ಲೂರ, ರಾಮಚಂದ್ರ ನಾಯ್ಕ, ವಿಜಯಕುಮಾರ ನಾಯ್ಕ,ಹಾಗೂ ಸ್ಥಳೀಯರು ಮೃತ ದೇಹ ಸಾಗಿಸಲು ಸಹಕರಿಸಿದರು. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version