Follow Us On

WhatsApp Group
Big News
Trending

ನಕಲಿ ವೈದ್ಯರ ಮೇಲೆ ಅಧಿಕಾರಿಗಳ ದಾಳಿ: ಅನುಮತಿ ಪತ್ರವಿಲ್ಲದೆ ಅಪಾಯಕಾರಿ ಸಲಕರಣೆ ಬಳಕೆ? ಬಯಲಾಯ್ತು ಅಕ್ರಮದಂಧೆ: 50 ವೈದ್ಯರಿಗೆ ನೊಟೀಸ್

ಅಂಕೋಲಾ: ನಕಲಿ ಡಾಕ್ಟರಗಳ ಹಾವಳಿ ತಡೆಗೆ ಮುಂದಾಗಿರುವ ಆರೋಗ್ಯ ಇಲಾಖೆ, ಅಂಕೋಲಾ ತಾಲೂಕಿನಲ್ಲಿ ಬೇರು ಬಿಡುತ್ತಿರುವ ನಂಜಿನ ಮಾರಿಗೆ ಮದ್ದರೆಯಲು ಮುಂದಾದಂತಿದೆ. ಕಳೆದ ಅನೇಕ ವರ್ಷಗಳಿಂದ ಕೆಲವರು, ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ತಮ್ಮದೇ ಆದ ಖಾಸಗಿ ಕೇಂದ್ರ ತೆರೆದು ಮೂಲ ಸೌಲಭ್ಯಗಳ ಕೊರತೆಯಿರುವ ಚಿಕ್ಕ ಪುಟ್ಟ ಕೊಠಡಿಗಳನ್ನೇ ಆಸ್ಪತ್ರೆಯಾಗಿ ಮಾರ್ಪಡಿಸಿಕೊಂಡು ಡಾಕ್ಟರ್ ಗಳೆನಿಸಿ ತಮ್ಮ ಕೆಲಸ ನಿರ್ವಹಿಸುತ್ತಿದರು ಎನ್ನಲಾಗಿದೆ.

ಇವರಲ್ಲಿಯೇ ಕೆಲವರು ವೈದ್ಯ ವೃತ್ತಿ ಆರಂಭಿಸಲು ಹೊಂದಿರಬೇಕಾದ ವಿದ್ಯಾರ್ಹತೆ ಹೊಂದಿಲ್ಲದಿರುವುದು, ಅಥವಾ ತಮಗಿರುವ ಇತರೆ ಸಾಮಾನ್ಯ ಅರ್ಹತೆಯನ್ನೇ ದುರುಪಯೋಗ ಪಡಿಸಿಕೊಂಡು ನಿಯಮ ಬಾಹಿರವಾಗಿ , ರೋಗಿಗಳ ತಪಾಸಣೆ, ಚಿಕಿತ್ಸೆ, ಲಸಿಕೆ ನೀಡುವುದು.ಔಷಧ ಕೊಡುವುದು ಮುಂತಾದ ಎಲ್ಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇತ್ತಾದರೂ ಕಳ್ಳಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿತ್ತು.

ನಕಲಿ ಡಾಕ್ಟರ್ ವಿಷಯ ಇತ್ತೀಚೆಗೆ ಅಂಕೋಲಾಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗಮನಕ್ಕೆ ಬರುತ್ತಲೇ, ತಕ್ಷಣ ಸಾರ್ವಜನಿಕ ಆರೋಗ್ಯ ಕಳಕಳಿ ತೋರ್ಪಡಿಸಿದ್ದ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಸ್ಥಳದಲ್ಲೇ ಹಾಜರಿದ್ದ ತಾಲೂಕಾ ಆರೋಗ್ಯ ಅಧಿಕಾರಿಗಳು ಮತ್ತು ತಹಶೀಲ್ದಾರರವರಿಗೆ, ಅಂತಹ ನಕಲಿ ಡಾಕ್ಟರುಗಳು ಕಂಡು ಬಂದರೆ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ್ದರು. .ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಬಿಗು ಕ್ರಮ ಕೈಗೊಳ್ಳಲು ಮುಂದಾಗಿರುವ ಆರೋಗ್ಯ ಇಲಾಖೆ ಸೋಮವಾರ ನಕಲಿಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದೆ.

ಟಿ.ಎಚ್. ಓ . ಡಾ. ನಿತಿನ್ ಹೊಸ್ಮೇಲಕರ ನೇತೃತ್ವದ ತಂಡ ಅಗಸೂರು ಗ್ರಾಪಂ ವ್ಯಾಪ್ತಿಯ ರಾ.ಹೆ. 63ರ ಅಂಚಿನ ಕಟ್ಟಡದಲ್ಲಿ ಅನಿಲ ಹನುಮಟ್ಟೇಕರ್ ಎನ್ನುವವರು ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗೆ ಬೆಳಿಗ್ಗೆ ದಾಳಿ ನಡೆಸಿ ಸ್ಥಳ ಪರಿಶೀಲಿಸಿ, ಸಂಬಂಧಿಸಿದ ದಾಖಲೆ ಪರಿಶೀಲಿಸಿತು. ಈ ವೇಳೆ ಹನುಮಟ್ಟೆಕರ್ ಆರೋಗ್ಯ ಇಲಾಖೆಯ ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಂತೆ ತಾನು SSLC ಮುಗಿಸಿ, ಕಲ್ಕತ್ತಾದ ವಿಶ್ವವಿದ್ಯಾಲಯವೊಂದರಿಂದ ಬಾಹ್ಯ ವಿದ್ಯಾರ್ಥಿಯಾಗಿ DHMS ಕೋರ್ಸ ಮುಗಿಸಿದ್ದು, ಜನ ಸೇವೆಗಾಗಿ ವೈದ್ಯ ವೃತ್ತಿ ಮಾಡುತ್ತಿದ್ದೇನೆಯೇ ಹೊರತು ತನಗೆ ಹೆಚ್ಚಿನ ಹಣ ಮಾಡುವ ಆಸೆ ಇಲ್ಲಾ ಎಂಬಂತೆ ಮಾತನಾಡಿದ್ದಲ್ಲದೇ , ತಾನಾದರೂ ಇದೇ ತಾಲೂಕಿನವ, ಬೇರೆ ತಾಲೂಕು ಜಿಲ್ಲೆಯ ಹತ್ತಾರು ಜನ ಇಂತಹುದೇ ಕೆಲಸ ಮಾಡುವುದು ನಿಮಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿ, ತನ್ನ ನಡೆ ಸಮರ್ಥಿಸಿಕೊಂಡತಿತ್ತು.

ಅಕ್ರಮವಾಗಿ ಗೋಡೆಗೆ ನಾಮಫಲಕ ತೂಗಿ ಹಾಕಿರುವುದು, ತನ್ನ ವಾಹನಕ್ಕೆ ಡಾಕ್ಟರ ಮಾರ್ಕ್ ಬಳಸುತ್ತಿರುವುದು, ಮಾನ್ಯತೆ ಪಡೆಯದೇ ಡ್ರಗ್ ದಾಸ್ತಾನು ಮಾಡಿರುವುದು, ಅಸುರಕ್ಷಿತ ಮತ್ತು ಸಂಸ್ಕರಣಾ ರಹಿತ ಸಲಕರಣೆ ಉಪಯೋಗದ ಸಾಧ್ಯತೆ ಕಾರಣಗಳನ್ನು ಉಲ್ಲೇಖಿಸಿ ಆರೋಗ್ಯ ಅಧಿಕಾರಿಗಳು ಹನುಮಟ್ಟೇಕರಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅದೇ ರೀತಿ ಪಟ್ಟಣದ ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿರುವ ಡಾ. ಸುದೇಶ ಮೆಡಿಕಲ್ ಪ್ರೆಕ್ಟಿಶ್ ನರ್ ಎಂಬ ಬೋರ್ಡ್ ಹಾಕಲಾಗಿದ್ದ ಖಾಸಗಿ ಆಸ್ಪತ್ರೆಗೆ ದಾಳಿ ನಡೆಸಿದ ತಂಡ ಕೆಲ ದಾಖಲಾತಿ ಪರಿಶೀಲಿಸಿದ್ದಲ್ಲದಲ್ಲದೇ, ವೈದ್ಯಕೀಯ ಪದವಿ ಪಡೆಯದಿದ್ದರೂ ಅಲೋಪಥಿ ಚಿಕಿತ್ಸೆ ನೀಡುತ್ತಿರುವುದು, ನಿಯಮ ಬಾಹಿರವಾಗಿ 30 ಮಿಲಿ ಡೋಸ್ ಸಂಗ್ರಹ, ಸ್ಟಿರಾಯ್ಡ್ ಮತ್ತಿತರ ಡ್ರಗ್ ಬಳಕೆ ಮಾಡಿ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿರುವುದಕ್ಕೆ ಹತ್ತಾರು ಪುರಾವೆಗಳು ಮೇಲ್ನೋಟಕ್ಕೆ ಕಂಡು ಬಂದ ಹಿನಲೆಯಲ್ಲಿ ಆಸ್ಪತ್ರೆ ನಡೆಸುತ್ತಿದ್ದ ಸುದೇಶ ಪಳ್ಳೇರಿ ಪಳ್ಳಿಯವರಿಗೆ ನೊಟೀಸ್ ಜಾರಿ ಮಾಡಿದೆ.

ನಿಯಮದ ಪ್ರಕಾರ ಈ ವರೆಗೂ ನೊಂದಣಿ ಮಾಡಿಸಿಕೊಳ್ಳದ, ಮಾಡಿಕೊಂಡರೂ ನೊಂದಣಿ ನವೀಕರಿಸಿಕೊಳ್ಳದ, ಅಥವಾ ವಿದ್ಯಾರ್ಹತೆ ಮತ್ತಿತರ ಕಾರಣಗಳಿಂದ ನಿಯಮ ಬಾಹಿರವಾಗಿ, ವೈದ್ಯಕೀಯ ನಿಯಮಾವಳಿ ಗಾಳಿಗೆ ತೂರಿರುವ ಅಂದಾಜು 25 – 30 ಮಂದಿ ಡಾಕ್ಷರಗಳೇ ಅಲ್ಲಾ ಎನ್ನುವ ಮಾಹಿತಿ ಒಂದೆಡೆಯಾದರೆ, ಪದವಿ ಪಡೆದಿದ್ದರೂ ಕೆಪಿಎಂಇ ಆ್ಯಕ್ಟ ಅಡಿ ನೊಂದಣಿಯಾಗದ 10 – 15 ಖಾಸಗಿ ವೈದ್ಯರು ವೈದ್ಯಕೀಯ ವೃತ್ತಿ ನಡೆಸುತ್ತಿರುವ ಆತಂಕಕಾರಿ ಮಾಹಿತಿ ಕಲೆ ಹಾಕಿದಂತಿರುವ ಆರೋಗ್ಯ ಇಲಾಖೆ ಹಂತ ಹಂತವಾಗಿ ಎಲ್ಲರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಿದೆ ಮತ್ತು ತಪ್ಪಿತಸ್ಥರು ಕಂಡು ಬಂದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಕಾನೂನು ಕ್ರಮ ಕ್ರೆಗೊಳ್ಳಲಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ. ನಿತಿನ್ ಹೊಸ್ಮೇಲಕರ ತಿಳಿಸಿದರು.

ಆರೋಗ್ಯ ಇಲಾಖೆ ಅತೀ ಶೀಘ್ರ ತನಿಖೆ ಪೂರ್ಣಗೊಳಿಸಿ ಅಸಲಿ ಯಾರು?ನಕಲಿ ಯಾರು ಎನ್ನುವ ಸತ್ಯ ಹೊರ ಹಾಕ ಬೇಕಿದೆ. . ಡಾಕ್ಟರುಗಳು ಅಸಲಿಯೋ ನಕಲಿಯೋ ಆಮೇಲೆ ವಿಚಾರ ಮಾಡಿದರಾಯಿತು. ಸದ್ಯ ಅವರು ನೀಡುವ ಚಿಕಿತ್ಸೆಯಿಂದ ತಮಗೆ ಆರೋಗ್ಯ ಸುಧಾರಣೆ ಆದರೆ ಸಾಕು ಎಂದು ಹಲುಬುವ ಕೆಲವರ ನಡೆ-ನುಡಿ ಪ್ರಸ್ತುತ ಸನ್ನಿವೇಶದಲ್ಲಿ ವಿಚಿತ್ರವಾದರು ಸತ್ಯ ಎನಿಸುವಂತಾಗಿದೆ.

ಅನೇಕ ಸಂದರ್ಭಗಳಲ್ಲಿ ಕೆಲ ರೋಗಿಗಳು ಮತ್ತು ಅವರ ಕುಟುಂಬಸ್ಥರು,ತಮ್ಮ ಮರ್ಯಾದೆ, ದೂರದ ಪ್ರಯಾಣ, ದುಬಾರಿ ಚಿಕಿತ್ಸೆ ವೆಚ್ಚ ಇತರೆ ಹತ್ತಾರು ಕಾರಣಗಳನ್ನು ನೀಡಿ, ಮಾನ್ಯತೆ ಪಡೆದ ಆಸ್ಪತ್ರೆಗೆ ದಾಖಲಾಗಲು ಹಿಂಜರಿಯುತ್ತಿರುವುದು, ಮತ್ತು ಕೆಲ ನಕಲಿಗಳಿಗೆ ಇರುವ ಪ್ರಭಾವ ಅವರ ಅಡ್ಡ ಕಸುಬು ಸುಸೂತ್ರವಾಗಿ ನಡೆಸಲು ಅನುಕೂಲ ಮಾಡಿಕೊಡುತ್ತಿವೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ..

ಒಟ್ಟಿನಲ್ಲಿ ಇರಬಹುದಾದ ಕೆಲವೇ ಕೆಲವು ನಕಲಿಗಳಿಂದ, ಒಳ್ಳೆಯ ವೈದ್ಯರಿಗೂ ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಗೂ ಕಳಂಕ ಅಂಟದಂತೆ,ಸಂಬಂಧಿಸಿದ ಎಲ್ಲರೂ ಪ್ರಜ್ಞಾವಂತಿಕೆಯಿಂದ ಸರಿ ತಪ್ಪುಗಳನ್ನು ಗುರುತಿಸುವಂತಾಗ ಬೇಕೆಂಬುದು ಆರೋಗ್ಯ ಕಳಕಳಿಯುಳ್ಳ ನಾಗರಿಕರ ಆಶಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೊಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button