Follow Us On

WhatsApp Group
Focus News
Trending

ಬಾಡಿ ಬಿಲ್ಡರ್ ಈ ಡಿವೈಎಸ್ಪಿ ? ಬಂಗಾರದ ಮನುಷ್ಯ : ರಾಷ್ಟ್ರಪತಿಗಳ ಸೇವಾ ಪದಕ ಪುರಸ್ಕೃತ ಅಧಿಕಾರಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಭಾಗದ ಡಿ.ವೈ.ಎಸ್.ಪಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯವರೇ ಆದ ಅಂಕೋಲಾ ತಾಲೂಕು ಮೂಲದ ಅರವಿಂದ ಕಲಗುಜ್ಜಿ ಅವರು ಇತ್ತೀಚಿನ ಇಲಾಖಾ ವರ್ಗಾವಣೆಯಲ್ಲಿ ಮಂಗಳೂರಿಗೆ ನಿಯೋಜನೆಗೊಂಡಿದ್ದು, ಅವರ ಸ್ಥಾನಕ್ಕೆ ನೂತನ ಡಿ.ವೈ.ಎಸ್. ಪಿ ಯಾಗಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ದಕ್ಷ ಅಧಿಕಾರಿ ವೆಲೆಂಟನ್ ಡಿ ಸೋಜಾ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತ: ಸಾಗರದವರಾದಅವರು ಅಲ್ಲಿಯೇ ತಮ್ಮ ಬಿ.ಎ ಪದವಿ ಪೂರೈಸಿದರು, ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿರುವ ವೆಲೆಂಟೆನ್
ಡಿಸೋಜ ಮೈಸೂರು ವಿಶ್ವವಿದ್ಯಾಲಯದಲ್ಲಿ ಸತತ ಮೂರು ವರ್ಷಗಳ ಕಾಲ ಬಂಗಾರದ ಪದಕ ಪಡೆದು ಸಾಧನೆ ಮಾಡಿದ್ದಾರೆ.

1994 ರಲ್ಲಿ ಪೊಲೀಸ್ ಇಲಾಖೆಗೆ ಪಿ.ಎಸ್.ಐ, ಆಗಿ ಪಾದಾರ್ಪಣೆ ಮಾಡಿದ ಅವರು ಉಡುಪಿ ನಗರ, ಕೋಟ,ಹೊನ್ನಾವರ, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು.

2002 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಪಡೆದು ಉಡುಪಿ, ಬಂಟ್ವಾಳ, ಚಿಕ್ಕಮಗಳೂರು, ಕುಂದಾಪುರ, ಪಣಂಬೂರು, ಕಾರ್ಕಳ, ಮಂಗಳೂರು ನಗರಗಳಲ್ಲಿ ಸೇವೆ ಸಲ್ಲಿಸಿ,*2016 ರಲ್ಲಿ ಡಿ.ವೈ.ಎಸ್. ಪಿ ಯಾಗಿ ಬಡ್ತಿ ಹೊಂದಿ ಮಂಗಳೂರು ಸಿ.ಸಿ.ಆರ್.ಬಿ ಯಲ್ಲಿ ಕರ್ತವ್ಯ ನಿರ್ವಹಿಸಿ,ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟ ಭಟ್ಕಳ ಮತ್ತು ಬಂಟ್ವಾಳಗಳಲ್ಲಿ ಹಲವಾರು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಗಮನ ಸೆಳೆದಿದ್ದರು

ಉತ್ತಮ ದೇಹಧಾಡ್ಯ ಪಟು ಆಗಿರುವ ವೆಲಂಟೈನ್ ಡಿಸೋಜ ಅವರು 2015ರಲ್ಲಿ ಫಿಲಿಪೈನ್ಸ್ ನಲ್ಲಿ, 2017 ರಲ್ಲಿ ಅಮೆರಿಕದಲ್ಲಿ ನಡೆದ ದೇಹದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್ ಹಂತ ಪ್ರವೇಶಿಸುವ ಮೂಲಕ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮುಖ್ಯ ಮಂತ್ರಿಗಳ ಬಂಗಾರದ ಪದಕ, ಮಲೆನಾಡ ಕ್ರೀಡಾ ರತ್ನ ಹಾಗೂ ಅತ್ಯುನ್ನತ ಪ್ರಶಸ್ತಿಯಾದ ರಾಷ್ಟ್ರಪತಿಗಳ ಸೇವಾ ಪದಕಗಳಿಂದ ಪುರಸ್ಕೃತರಾಗಿದ್ದಾರೆ.

ಇದೀಗ ವೆಲಂಟೈನ್ ಡಿಸೋಜ ಅವರು ಕಾರವಾರ ಡಿ.ವೈ.ಎಸ್.ಪಿಯಾಗಿ ಅಧಿಕಾರ ಸ್ವೀಕರಿಸಿದ್ದು ,ಕಾರವಾರ ವಿಭಾಗದ ಮೂಲಕ ಜಿಲ್ಲಾ ಕೇಂದ್ರ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಜನತೆಗೂ ದಕ್ಷ ಹಾಗೂ ಕ್ರಿಯಾಶೀಲ ಅಧಿಕಾರಿಯ ಸೇವೆ ದೊರೆತಿರುವುದು ಸೌಭಾಗ್ಯ ಎಂದೇ ಹೇಳ ಬಹುದಾಗಿದೆ.

ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ ಈಗಾಗಲೇ ಜಿಲ್ಲೆಯ ಹಲವೆಡೆ ಕಳ್ಳತನ,ಮಾದಕ ಪದಾರ್ಥಗಳ ಸಾಗಾಟ ಮತ್ತಿತರ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದ್ದು, ವಿವಿಧ ತಾಲೂಕುಗಳ ಕೆಳಹಂತದ ಅನೇಕ ಅಧಿಕಾರಿಗಳೂ ಸಹ ಸಮರ್ಥ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿವೈಎಸ್ಪಿ ಆಗಿ ವೆಲೆಂಟನ್ ಡಿಸೋಜಾ ಆಗಮನದೊಂದಿಗೆ ಇಲಾಖೆಯ ದಕ್ಷತೆಗೆ ಮತ್ತಷ್ಟು ಬಲ ಬಂದಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button