![](http://i0.wp.com/vismaya24x7.com/wp-content/uploads/2020/06/1-3.jpg?fit=1920%2C1080&ssl=1)
ಭಟ್ಕಳ: ಹಳ್ಳಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ, ಜವಾಬ್ದಾರಿ ಹಾಗೂ ಅವರ ಅಧಿಕಾರವೇ ಹೆಚ್ಚಿದೆ. ಹಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮಾತೆ ಅಂತಿಮ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಹೇಳಿದರು.
ಅವರು ಬಂದರ್ ರಸ್ತೆಯಲ್ಲಿ ಕಮಲಾವತಿ & ಶಾನಭಾಗ ಸಭಾಭವನ ಭಟ್ಕಳದಲ್ಲಿ ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಕಾವಲು ಸಮಿತಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುವ ವೇಳೆ ತಮ್ಮ ವೈಯಕ್ತಿಕ ಉದಾಹರಣೆಯನ್ನು ವಿವರಿಸುತ್ತಾ ಮಾತನಾಡಿದರು.
‘ನನ್ನ ಸಹೋದರಿ ಕರೊನಾ ಲಾಕ್ ಡೌನ್ ಸಡಿಲಿಕೆ ವೇಳೆ ತವರು ಮನೆಗೆ ಬರಬೇಕೆಂದು ನನಗೆ ಕರೆ ಮಾಡಿ ಕೇಳಿದಾಗ ನಾನು ಅಂತರ ಜಿಲ್ಲೆ ವ್ಯಾಪ್ತಿಯಲ್ಲಿ ಬರಬಹುದಾಗಿದೆ ಎಂದು ಹೇಳಿದ್ದೆ. ಅದರಂತೆ ನನ್ನ ತಂಗಿ ಮೈಸೂರಿನಿಂದ ನಮ್ಮ ಮನೆಗೆ ಬಂದಿದ್ದಾಳೆ. ವಿಷಯ ತಿಳಿದ ಆಶಾ ಕಾರ್ಯಕರ್ತೆಯರು ತಕ್ಷಣ ಬಂದು ಹೋಮ್ ಕ್ವಾರಂಟೈನ್ ಸೀಲ್ ಹಾಕಿ 14 ದಿನಗಳ ಕಾಲ ಎಲ್ಲಿಗೂ ಹೊರಗಡೆ ಹೋಗಬಾರದೆಂದು ಹೇಳಿ ಹೋಗಿದ್ದರು. ನಂತರ ತಂಗಿಯೂ 14 ದಿನದ ಕ್ವಾರಂಟೈನ್ ಮುಗಿಸಿ ಮೈಸೂರಿಗೆ ವಾಪಸ್ಸು ತೆರಳಿದ್ದಾಳೆ ಎಂದರು.ಇದು ಒಂದು ಚಿಕ್ಕ ಉದಾಹರಣೆ. ಎಲ್ಲೆಡೆ ಆಶಾ ಕಾರ್ಯಕರ್ತೆಯರು ತೆರಳಿ ತಕ್ಷಣ ಕ್ರಮ ವಹಿಸಿದ್ದರ ಪರಿಣಾಮ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎಂದರು. -ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ