Follow Us On

WhatsApp Group
Focus News
Trending

ಉಜ್ವಲ ದೃಷ್ಠಿ ಅಭಿಯಾನದಲ್ಲಿ ರೋಟರಿಯ ಜಿಲ್ಲಾ ಗವರ್ನರ್ ಗೌರೀಶ ದೋಂಡ್ ಭಾಗಿ

ಕುಮಟಾ: ರೋಟರಿ ಇಂಡಿಯಾ ಲಿಟರಸಿ ಮಿಷನ್ (ಆರ್‌ಐಎಲ್‌ಎಂ) ಭಾರತದಲ್ಲಿ ಸಾಕ್ಷರತೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಸುಧಾರಿಸುವ ಗುರಿ ಹೊಂದಿದ್ದು, ಇದನ್ನು ಸಾಧಿಸಲು ‘ಟೀಚ್’ ಎಂಬ ಸಮಗ್ರ ಕಾರ್ಯಕ್ರಮವನ್ನು ವಿನ್ಯಾಸ ಗೊಳಿಸಿದೆ. ಈ ಕಾರ್ಯಕ್ರಮದಡಿ ಕುಮಟಾ ರೋಟರಿ ಹಾಗೂ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಸರಕಾರಿ, ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿಯಲ್ಲಿ ದಾಖಲಾಗಿರುವ ಪಾರ್ಶ್ವ ದೃಷ್ಟಿ ಮತ್ತು ಪೂರ್ಣ ದೃಷ್ಟಿ ದೋಷವಿರುವ ವಿದ್ಯಾರ್ಥಿಗಳಿಗೆ ಉಚಿನ ಕಣ್ಣಿನ ತಪಾಸಣೆಯ ವೈದ್ಯಕೀಯ ಶಿಬಿರವನ್ನು ಇಲ್ಲಿಯ ಲಯನ್ಸ್ ರೇವಣಕರ ಚ್ಯಾರಿಟೇಬಲ್ ಆಸ್ಪತ್ರೆ ಮತ್ತು ನವೀನ ನೇತ್ರಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

‘ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳ ಇ-ಲರ್ನಿಂಗ್ ಪ್ಲಾಟ್‌ಫಾರ್ಮ್ಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ತಜ್ಞರ ಪ್ರಕಾರ ಕಂಪ್ಯೂಟರ್ ಪರದೆಗಳ ವ್ಯಾಪಕ ವೀಕ್ಷಣೆಯಿಂದ ಕಣ್ಣಿನ ಅಸ್ವಸ್ಥತೆ, ಆಯಾಸ, ಮಸುಕಾದ ದೃಷ್ಟಿ, ತಲೆನೋವು, ಒಣ ಕಣ್ಣುಗಳು ಮತ್ತು ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಜನರಲ್ಲಿ ದೃಷ್ಟಿ ಹೀನತೆಯು ಜೀವನ, ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಆಳವಾದ ಪರಣಾಮ ಬೀರುತ್ತದೆ. ಇದು ಜೀವನದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಅಭಿವೃದ್ಧಿಯ ಜೊತೆಗೆ ಆರೋಗ್ಯ ಸಮಸ್ಯೆಯಾಗಿ ಮರು ರೂಪಿಸಬೇಕಾಗಿದೆ.

ರೋಟರಿ ಸಂಸ್ಥೆಯು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಉಪಯುಕ್ತ ಕಾರ್ಯಯೋಜನೆ ಕೈಗೊಳ್ಳಲಾಗಿದೆ’ ಎಂದು ರೋಟರಿಯ ಜಿಲ್ಲಾ ಗವರ್ನರ್ ಗೌರೀಶ್ ದೋಂಡ್ ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ದೃಷ್ಟಿ ದೋಷವುಳ್ಳ ಸುಮಾರು 100 ವಿದ್ಯಾರ್ಥಿಗಳನ್ನು ತಪಾಸಿಸಿ ಅವರಿಗೆ ಉಚಿತ ಕನ್ನಡಕ ವಿತರಿಸುವ ಕ್ರಮ ಕೈಗೊಳ್ಳಲು ರೋಟರಿ ಸಂಸ್ಥೆಯು ಮುಂದಾಗಿದೆ ಎಂದು ಕುಮಟಾ ಘಟಕದ ಅಧ್ಯಕ್ಷೆ ಡಾ.ನಮೃತಾ ಶಾನಭಾಗ ತಿಳಿಸಿದರು. ಕಾರ್ಯದರ್ಶಿ ಶಿಲ್ಪಾ ಜಿನರಾಜ್ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರಕ್ಕಾಗಿ ಅಭಿನಂದಿಸಿದರು. ರೋಟರಿಯ ಅಸಿಸ್ಟಂಟ್ ಗವರ್ನರ್ ನಾಗರಾಜ ಜೋಶಿ, ಸದಸ್ಯರಾದ ಜಯಶ್ರೀ ಕಾಮತ, ಕಿರಣ ನಾಯಕ, ದೀಪಾ ನಾಯಕ, ಲಯನಸ್ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಮೊದಲಾದವರು ಉಪಸ್ಥಿತರಿದ್ದರು.
.

Back to top button