ದರ್ಗಾದ ಗೋಡೆ ನೆಲಸಮ: ದುಷ್ಕರ್ಮಿಗಳ ಕೃತ್ಯ ಶಂಕೆ: ಪೊಲೀಸರ ಪರಿಶೀಲನೆ

ಕಾರವಾರ: ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಜನ ಪ್ರದೇಶದಲ್ಲಿದ್ದ ದರ್ಗಾದ ಗೋಡೆಗಳನ್ನು ಕಿಡಿಗೇಡಿಗಳು ನೆಲಸಮ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಕಣಸಗಿರಿ ಬಂದರುವಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಇಲ್ಲಿಯ ಸಯ್ಯದ್ ಮಾಲ್ದಾರ್ ನೂರ್ ದರ್ಗಾದ ಗೋಡೆಗಳನ್ನು ಕೆಡವಲಾಗಿದೆ ಎಂದು ಗೊತ್ತಾಗಿದೆ. ಫೆಬ್ರುವರಿ 1ರಂದು ಹಾರುನ್ ಶೇಖ್ ಎಂಬವರು ಸಯ್ಯದ್ ಮಾಲ್ದಾರ್ ನೂರ್ ದರ್ಗಾಕ್ಕೆ ಬಂದು ಅಲ್ಲಿಯ ಆವರಣವನ್ನು ಸ್ವಚ್ಛಗೊಳಿಸಿ ಹೋಗಿದ್ದರು. ಬಳಿಕ ದರ್ಗಾಕ್ಕೆ ಯಾರೂ ಭೇಟಿ ನೀಡರಲಿಲ್ಲ. ಫೆ.2ರಂದು ಕಿಡಿಗೇಡಿಗಳು ಈ ಕತ್ಯ ಎಸಗಿಸಬಹುದು ಎಂದು ಶಂಕಿಸಲಾಗಿದೆ.

ದರ್ಗಾದ ಮಧ್ಯದಲ್ಲಿರುವ ಸಮಾಧಿಗೂ ಹಾನಿಗೊಳಿಸಲಾಗಿದೆ. ಗುರುವಾರ ಬೆಳಿಗ್ಗೆ ಈ ಘಟನೆ ನೋಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಪೆನ್ನೇಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version