Important
Trending

ಆರ್ ಎನ್ ನಾಯಕ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

ಅಂಕೋಲಾ: ಉದ್ಯಮಿ, ಸಹಕಾರಿ ಹಾಗೂ ರಾಜಕೀಯ ಧುರೀಣ ಅಂಕೋಲಾದ ಆರ್. ಎನ್. ನಾಯಕ ಅವರ ಹತ್ಯೆಗೆ ಸಂಬಂಧಿಸಿದಂತೆ ದೋಷಿಗಳೆಂದು ಪರಿಗಣಿಸಲ್ಪಟ್ಟ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 8 ಜನರಿಗೆ ಬೆಳಗಾವಿ ಕೋಕಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

ವಿಶೇಷ ಕೋಕಾ ಕಾಯ್ದೆ ಅಡಿಯಲ್ಲಿ ದಾಖಲಾದ ರಾಜ್ಯದ ಪ್ರಪ್ರಥಮ ಪ್ರಕರಣದಲ್ಲಿ ಬಂಧಿತರಾಗಿದ್ದ 12 ಜನ ಆರೋಪಿಗಳಲ್ಲಿ 9 ಜನರನ್ನು ದೋಷಿಗಳೆಂದು ನ್ಯಾಯಾಲಯ ಇತ್ತೀಚೆಗೆ ತೀರ್ಪು ಪ್ರಕಟಿಸಿತ್ತು. ಗೋಕರ್ಣ ಸಮೀಪದ ಹನೇಹಳ್ಳಿಯ ಸ್ಥಳೀಯನೋರ್ವ ಸೇರಿದಂತೆಮೂವರನ್ನು ನಿರ್ದೋಷಿಗಳೆಂದು ಪ್ರಕರಣದಿಂದ ದೋಷ ಮುಕ್ತಗೊಳಿಸಿತ್ತು.ಇದೀಗ 9 ಜನ ದೋಷಿತರಲ್ಲಿ,  ಬನ್ನಂಜೆ ರಾಜಾ ಯಾನೆ  ರಾಜೇಂದ್ರ ಕುಮಾರ್, ಉತ್ತರ ಪ್ರದೇಶದ ಜಗದೀಶ ಪಟೇಲ, ಅಂಕಿತಕುಮಾರ್ ಕಶ್ಯಪ್, ಬೆಂಗಳೂರಿನ ಅಭಿ ಬಂಡಗಾರ, ಉಡುಪಿಯ ಗಣೇಶ ಭಜಂತ್ರಿ, ಹಾಸನದ ಮಹೇಶ ಅಚ್ಚಂಗಿ, ಕೇರಳದ ಸಂತೋಷ, ಬೆಂಗಳೂರಿನ ಜಗದೀಶ ಚಂದ್ರರಾಜ ಎನ್ನುವವರಿಗೆ ಜೀವಾವಧಿ ಶಿಕ್ಷೆಯನ್ನು  ವಿಧಿಸಲಾಗಿದೆ. 

ಇನ್ನೊರ್ವ ದೋಷಿತ ಕೇರಳದ ಇಸ್ಮಾಯಿಲ್ ಕೆ.ಎಂ ಎನ್ನುವವರಿಗೆ 5 ವರ್ಷ ಕಾರಾಗೃಹ ಶಿಕ್ಷೆ ಪ್ರಕಟಿಸಲಾಗಿದೆ.2013 ರ ಡಿಸೆಂಬರ್ 21 ರಂದು ಆರ್. ಎನ್. ನಾಯಕ ಅವರನ್ನು ,  4 ಜನ ಶೂಟರಗಳ ತಂಡ ಹೊಂಚು ಹಾಕಿ,ಅಂಕೋಲಾದ ದ್ವಾರಕಾ ಬ್ಯಾಂಕ್ ನ  ಪ್ರಧಾನ  ಕಚೇರಿಯಿಂದ ಆರ್ ಎನ್ ನಾಯಕ ಅವರು ಕೆಳಗಿಳಿದು ಬಂದು,ತಮ್ಮ ಕಾರನ್ನು ಹತ್ತುತ್ತಿದ್ದಂತೆ ಹಿಂಬದಿಯಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಕೃತ್ಯದ ಸಂದರ್ಭದಲ್ಲಿ  ಪ್ರಕರಣದ ಮೊದಲ ಆರೋಪಿ ವಿವೇಕ ಉಪಾಧ್ಯಾಯ ಎನ್ನುವವ ಆರ್. ಎನ್. ನಾಯಕ ಅವರ ಅಂಗರಕ್ಷಕ ರಮೇಶಗೌಡ ಅವರು ನಡೆಸಿದ ಪ್ರತಿದಾಳಿಯಲ್ಲಿ ಬಸ್ ನಿಲ್ದಾಣದ ಎದುರಿನ ಮುಖ್ಯ ಗೇಟ್ ಬಳಿ ಗುಂಡೇಟಿಗೆ ಬಲಿಯಾಗಿದ್ದ. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಆರ್ ಎನ್ ನಾಯಕ,ಅದಿರು ಉದ್ಯಮದ ಹ್ಯಾಂಡಲಿಂಗ್ ಎಜೆನ್ಸಿ ನಡೆಸುತ್ತಿದ್ದು,ಇವರ ವ್ಯವಹಾರದ ಮೇಲೆ ಕೆಲವರು ಕಣ್ಣಿಟ್ಟಂತೆ ಇತ್ತು.ಭೂಗತ ಪಾತಕಿ ಬನ್ನಂಜೆ ರಾಜಾ ಬೇಡಿಕೆಯಿಟ್ಟ ಬಹು ಕೋಟಿ ಹಪ್ತಾ ಹಣ ಕೊಡಲು  ಉದ್ಯಮಿ ನಾಯಕ ಅವರು ನಿರಾಕರಿಸಿದ ಕಾರಣ ಬನ್ನಂಜೆ ರಾಜಾ ಸುಪಾರಿ ನೀಡಿ ಹತ್ಯೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿತಲ್ಲದೇ ,ಈ ಸಂಬಂಧ  ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬನ್ನಂಜೆ ರಾಜಾನನ್ನು 2015 ರಲ್ಲಿ ಬಂಧಿಸಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಎಪ್ರಿಲ್ 1 ರಂದು ಆರ್ ಎನ್ ನಾಯಕ ಜನ್ಮದಿನಾಗಿದ್ದು,ದಿವಂಗತರ ಹುಟ್ಟು ಹಬ್ಬದ ಆಸುಪಾಸಿನಲ್ಲಿ  (ಮಾರ್ಚ್ 30 ಮತ್ತು ಎಪ್ರಿಲ್ 4 ) ನ್ಯಾಯಾಲಯದ ತೀರ್ಪು ಪ್ರಕಟಗೊಂಡಿದ್ದು ,ಪಾಪಿಗಳಿಗೆ ಶಿಕ್ಷೆಯಾಗಿದೆ ಎಂದು  ಆರ್. ಎನ್. ಎನ್ ಕೆಲವು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ,ಇನ್ನು ಕೆಲವರ ಪ್ರಕಾರ ಈಗ ಯಾರಿಗೆ ಏನು ಶಿಕ್ಷೆ ಕೊಟ್ಟರೂ ನಮ್ಮ ಧೀಮಂತ ನಾಯಕನನ್ನು ಮರಳಿ (ಪುನಃ  ) ತರಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದಂತಿದೆ.ಆದರೂ ಪೊಲೀಸ್ ಇಲಾಖೆಗೂ ಸಹ ಪ್ರತಿಷ್ಠೆ  ಹಾಗೂ  ಸವಾಲಿನ ಕೆಲಸವಾಗಿದ್ದ ಈ ಪ್ರಕರಣ,ಭೂಗತಲೋಕದ ನಂಟು ಭೇದಿಸಿ ನ್ಯಾಯದ ಪರ ಗಟ್ಟಿ ನಿಲುವು ತಳೆದು ಯಶಸ್ವೀ ಯಾದಂತಿದೆ ಎಂಬ ಮಾತು ಹಲವರ ಮಾತುಗಳಲ್ಲಿ  ಕೇಳಿ ಬಂದಿದೆ..         

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button