Follow Us On

WhatsApp Group
Important
Trending

ಜ್ವರ ಎಂದು ಆಸ್ಪತ್ರೆಗೆ ಹೋದ ನವವಿವಾಹಿತೆ ಹೆಣವಾದಳು: ವೈದ್ಯರ ನಿರ್ಲಕ್ಷ್ಯ ಆರೋಪ: ಕುಟುಂಬದವರ ಆಕ್ರೋಶ

ಕಾರವಾರ: ಆಕೆ ಕೆಲವೇ ದಿನಗಳ ಹಿಂದಷ್ಟೇ ಕೌಟುಂಬಿಕ ಜೀವನಕ್ಕೆ ಕಾಲಿರಿಸಿದ್ದಳು. ಹಲವಾರು ಕನಸ್ಸುಗಳನ್ನ ಹೊತ್ತು ಹೊಸ ಜೀವನ ಆರಂಭಿಸಿದ್ದಾಕೆಗೆ ವಿಧಿ ಬೇರೆ ದಾರಿ ತೋರಿಸಿದೆ. ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಪ್ರಾಣ ಕಳೆದುಕೊಳ್ಳುವಂತಾಗಿದ್ದು ಮನೆಯವರಿಗೆ ಬರಸಿಡಿಲು ಬಡಿದಂತಾಗಿದೆ. ಯುವತಿ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದೆ.

ಕೇವಲ 19 ದಿನದ ಹಿಂದಷ್ಟೇ ಹಸೆಮಣೆ ಏರಿ ಹೊಸ ಜೀವನ ಆರಂಭಿಸಿದ್ದ ಯುವತಿ ಎಷ್ಟು ಕನಸುಗಳನ್ನ ಕಟ್ಟಿಕೊಂಡಿದ್ದಳೋ. ಹೊಸ ಉತ್ಸಾಹದಿಂದ ಬದುಕು ಆರಂಭಿಸಿದ್ದಾಕೆ ಜ್ವರದಿಂದ ಆಸ್ಪತ್ರೆಗೆ ಹೋಗಿದ್ದು, ಕೊನೆಗೆ ಆಕೆಯ ಉಸಿರನ್ನೇ ನಿಲ್ಲಿಸುವಂತಾಗಿದೆ. ಇಂತಹದ್ದೊAದು ದುರಂತ ನಡೆದಿರೋದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. ಕೇವಲ 24 ವರ್ಷದ ವಿವಾಹಿತೆ ಸನಾ ಮಾಂಜ್ರೇಕರ್ ಮೃತ ದುರ್ದೈವಿ.

ತಾಲ್ಲೂಕಿನ ಕಿನ್ನರ ಗ್ರಾಮದ ನಿವಾಸಿಯಾಗಿದ್ದ 24 ವರ್ಷದ ಯುವತಿ ಸನಾಗೆ ಕಡವಾಡ ಗ್ರಾಮದ ನಿವಾಸಿ ಸ್ವಪ್ನಿಲ್ ಮಾಂಜ್ರೇಕರ್ ಎಂಬಾತನೊoದಿಗೆ ಮೇ.10 ರಂದು ವಿವಾಹವಾಗಿತ್ತು. ಕಳೆದ 8 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಇದಾದ ಬಳಿಕ ನಿನ್ನೆ ಮಧ್ಯಾಹ್ನದ ಮತ್ತೆ ಜ್ವರ, ತಲೆನೋವು ಕಾಣಿಸಿಕೊಂಡ ಹಿನ್ನಲೆ ನಗರದ ಕಾಜುಭಾಗ್‌ನಲ್ಲಿರುವ ಖಾಸಗಿ ಆಸ್ಪತ್ರೆ ಸನಾಳನ್ನ ದಾಖಲಿಸಲಾಗಿತ್ತು. ಅಲ್ಲಿ ಆಕೆಗೆ ಗ್ಲುಕೋಸ್ ಏರಿಸಿದ್ದು ರಾತ್ರಿ ವೇಳೆಗೆ ಕೊಂಚ ಚೇತರಿಸಿಕೊಂಡಿದ್ದಳು.

ಇದಾದ ಬಳಿಕ ಊಟ ಮಾಡಲು ಮುಂದಾಗಿದ್ದಾಗ ಆಸ್ಪತ್ರೆಯ ಶುಶ್ರೂಷಕಿ ಸನಾಳಿಗೆ 4 ಇಂಜೆಕ್ಷನ್ ನೀಡಿದ್ದರು. ಆದರೆ ಇಂಜೆಕ್ಷನ್ ನೀಡಿದ ಕೆಲವೇ ಹೊತ್ತಿನಲ್ಲಿ ಆಕೆಗೆ ಹೊಟ್ಟೆಉರಿ ಕಾಣಿಸಿಕೊಂಡಿದ್ದು ಉಸಿರಾಟದಲ್ಲೂ ಏರುಪೇರಾಗಿತ್ತು. ಕೂಡಲೇ ಪರಿಶೀಲಿಸಿದ ಆಸ್ಪತ್ರೆ ಸಿಬ್ಬಂದಿ ಐಸಿಯು ವ್ಯವಸ್ಥೆ ಇಲ್ಲದ ಹಿನ್ನಲೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವoತೆ ತಿಳಿಸಿದ್ದಾರೆ. ಅಂಬ್ಯುಲೆನ್ಸ್ ಮೂಲಕ ಸನಾಳನ್ನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ 4 ಗಂಟೆಗೆ ಕೊನೆಯುಸಿರೆಳೆದಿದ್ದಾಳೆ.

ಇನ್ನು ಸನಾಳನ್ನ ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ತರುವಾಗಲೇ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು ಎನ್ನಲಾಗಿದೆ. ತಡರಾತ್ರಿ ವೇಳೆಗೆ ಆಸ್ಪತ್ರೆಗೆ ಕರೆತಂದಾಗ ಉಸಿರಾಟ ಸಮಸ್ಯೆ ಇದ್ದಿದ್ದರಿಂದಾಗಿ ಐಸಿಯುನಲ್ಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದಾಗಿ ಆಕೆ ಚಿಕಿತ್ಸೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲವಾಗಿದ್ದು ಬೆಳಗಿನ ಜಾವ 4 ಗಂಟೆ ವೇಳೆಗೆ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು.

ಈ ಹಿನ್ನಲೆ ಕುಟುಂಬಸ್ಥರು ಖಾಸಗಿ ಆಸ್ಪತ್ರೆ ಎದುರು ಜಮಾವಣೆಯಾಗಿ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾರವಾರ ನಗರ ಠಾಣೆಗೆ ಆಗಮಿಸಿದ ಕುಟುಂಬದವರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ನವವಿವಾಹಿತೆ ಸಾವನ್ನಪ್ಪಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. ಯುವತಿ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಒಟ್ಟಾರೇ ಹತ್ತು ಹಲವು ಕನಸ್ಸುಗಳನ್ನ ಹೊತ್ತುಕೊಂಡು ಹೊಸಜೀವನ ಆರಂಭಿಸಿದ್ದ ಯುವತಿ ಮದುವೆಯಾದ 19 ದಿನದಲ್ಲೇ ಸಾವನ್ನಪ್ಪುವಂತಾಗಿರೋದು ನಿಜಕ್ಕೂ ದುರಂತವೇ. ಘಟನೆಗೆ ವೈದ್ಯರ ನಿರ್ಲಕ್ಷ್ಯ ಕಾರಣ ಹೌದೋ ಅಲ್ಲವೋ ಅನ್ನೋದು ಮರಣೋತ್ತರ ಪರೀಕ್ಷೆ ಬಳಿಕವೇ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button