ಎ.ಸಿ ನ್ಯಾಯಾಲಯಕ್ಕೆ ಜನನ ಮರಣಗಳ ವಿಳಂಬ ನೋಂದಣಿ ವಕೀಲರಿಂದ ರಾಜ್ಯಪಾಲರಿಗೆ ಮನವಿ

ವಕೀಲರ ಬಳಗ ಮತ್ತು ಸಾರ್ವಜನಿಕರಿಂದ ರಾಜ್ಯಪಾಲರಿಗೆ ಮನವಿ

ಅಂಕೋಲಾ: ಜನನ ಮರಣಗಳ ವಿಳಂಬ ನೋಂದಣಿ ವ್ಯಾಪ್ತಿಯನ್ನು ಜೆ.ಎಂ.ಎಫ್. ಸಿ ನ್ಯಾಯಾಲಯದ ವ್ಯಾಪ್ತಿಯಿಂದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಬದಲಾಯಿಸಿರುವುದನ್ನು ವಿರೋಧಿಸಿ ಅಂಕೋಲಾ ವಕೀಲರ ಬಳಗ ಮತ್ತು ಸಾರ್ವಜನಿಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜನನ ಮತ್ತು ಮರಣವನ್ನು ನಿಗದಿತ ಅವಧಿಯೊಳಗೆ ನೋಂದಣಿ ಮಾಡದಿದ್ದಲ್ಲಿ ಜೆ.ಎಂ.ಎಫ್. ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೂಲಕ ಆದೇಶ ಪಡೆಯಲಾಗುತ್ತಿತ್ತು .
ಆದರೆ ಈಗ ಈ ಕಾರ್ಯ ವ್ಯಾಪ್ತಿಯನ್ನು ಉಪ ವಿಭಾಗಾಧಿಕಾರಿಗಳ ಕಚೇರಿಗೆ ವರ್ಗಾಯಿಸಿರುವುದು ಜನ ಸಾಮಾನ್ಯರ ಕಚೇರಿ ಅಲೆದಾಟ ಹೆಚ್ಚಲು ಕಾರಣವಾಗಲಿದೆ.

ನ್ಯಾಯಾಲಯದ ವ್ಯಾಪ್ತಿಯಲ್ಲಿ ಸುಲಭವಾಗಿ ಆಗುವ ಕೆಲಸಕ್ಕೆ ಓಡಾಟ ನಡೆಸುವ ಅನಿವಾರ್ಯತೆ ಜನಸಾಮಾನ್ಯರಿಗೆ ಎದುರಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು ಹಲವಾರು ಸಂದರ್ಭಗಳಲ್ಲಿ ಜನನ ಮರಣಗಳ ವಿಳಂಬ ದಾಖಲಾತಿ ಎರಡು ಕಡೆ ನೋಂದಣಿ ಆಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಪುನಃ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವ ಸಂದರ್ಭ ಎದುರಾಗಲಿದೆ.

ಸಾರ್ವಜನಿಕರ ಸಮಯ ವ್ಯರ್ಥ ಮತ್ತು ಆರ್ಥಿಕ ಹೊರೆಯನ್ನು ತಪ್ಪಿಸಲು ಜನನ ಮರಣಗಳ ವಿಳಂಬ ನೋಂದಣಿ ಕಾರ್ಯವ್ಯಾಪ್ತಿ ಯನ್ನು ಯಾವುದೇ ಕಾರಣಕ್ಕೂ ಬದಲಾಯಿಸದೇ ಮೊದಲಿನ ಹಾಗೆ ಜೆ.ಎಂ.ಎಫ್. ಸಿ ನ್ಯಾಯಾಲಯದ ಅಡಿಯಲ್ಲೇ ಮುದುವರಿಸುವಂತೆ ವಕೀಲ ಉಮೇಶ ನಾಯ್ಕ, ನಾಗಾನಂದ ಬಂಟ, ವಿನೋದ ಶಾನಭಾಗ್, ಗುರು ನಾಯ್ಕ, ಗಜಾನನ ನಾಯ್ಕ, ಪ್ರಸನ್ನ ನಾಯ್ಕ, ಸುರೇಶ ಬಾನಾವಳಿಕರ ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version