Big NewsImportant
Trending

ಅಗಲಿದ ಕೋತಿಗೆ ಗ್ರಾಮಸ್ಥರಿಂದ ಕಣ್ಣೀರ ವಿದಾಯ! ಪ್ರೀತಿಯ ರಾಮುವನ್ನು ಕಳೆದುಕೊಂಡ ಜನ ಬಿಕ್ಕಿ ಬಿಕ್ಕಿ ಅತ್ತರು

ಕಾಡಿನ ಕೋತಿ ಊರಿನವರ ಪ್ರೀತಿಯ ರಾಮು ಆಗಿದ್ದು ಹೇಗೆ?

ಕಾರವಾರ: ಸಾಮಾನ್ಯವಾಗಿ ಕಾಡು ಪ್ರಾಣಿಗಳು ಮನುಷ್ಯರೊಂದಿಗೆ ಬೆರೆಯುವುದು ಅಪರೂಪ. ಒಂದೊಮ್ಮೆ ಬೆರೆತಾಗ ಅವುಗಳನ್ನು ತಮ್ಮಂತೆಯೇ ನೋಡಿಕೊಳ್ಳುವುದು ಮನುಷ್ಯನ ಸ್ವಭಾವ. ಆದರೆ ಇಂತಹ ಪ್ರೀತಿಯ ಬಾಂದವ್ಯಕ್ಕೆ ಸಿಲುಕಿದ ಪ್ರಾಣಿಗಳ ಅಗಲಿಕೆಯೂ ಮಾನವನಿಗೆ ಕುಟುಂಬದ ಸದ್ಯಸ್ಯನನ್ನೆ ಕಳೆದುಕೊಂಡಷ್ಟು ದುಖಃ ಕೊಡಬಲ್ಲದು ಎಂಬುದಕ್ಕೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕೋತಿಯೊಂದರ ಸಾವು ಸಾಕ್ಷಿಯಾಗಿದೆ.

ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವತಿ: ನದಿಗೆ ಬಿದ್ದ ಯುವತಿಯನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

ಹೌದು, ಕಳೆದ ಮೂರು ವರ್ಷದಿಂದ ಸಾಕಿ ಸಲುಹಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಕ್ಕೆ ಮಕ್ಕಳು, ಮನೆ ಮಂದಿ ಹಾಗೂ ಗ್ರಾಮಸ್ತರು ಕಣ್ಣೀರ ವಿದಾಯ ಹೇಳಿದ್ದಾರೆ. ಮನೆಯ ಸದಸ್ಯನನ್ನೆ ಕಳೆದುಕೊಂಡಂತೆ ಊಟ ತಿಂಡಿ ಬಿಟ್ಟು ದುಖಿಃಸಿದ್ದಾರೆ. ಮರಳಿ ಬಾ ಎಂದು ಭಾವುಕರಾಗಿ ಕರೆದಿದ್ದಾರೆ.

ದಾಂಡೇಲಿ ಪಟ್ಟಣದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎನ್ನುವವರ ಮನೆಯಲ್ಲಿ ಕೋತಿ ಮರಿಯೂ ವಾಸವಿರುತ್ತಿತ್ತು. ಕೋತಿಗೆ ರಾಮು ಎಂದು ಹೆಸರನ್ನೂ ಕೂಡ ಇಡಲಾಗಿತ್ತು. ಕಂಜರಪೇಟೆ ಗಲ್ಲಿಯಲ್ಲಿ ಓಡಾಡಿಕೊಂಡು, ಗ್ರಾಮಸ್ಥರೊಂದಿಗೆ ಅನ್ಯೋನ್ಯತೆಯಿಂದಿದ್ದ ರಾಮು, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅಲ್ಲದೆ ರಾಮುವುನನ್ನು ಕಂಡರೇ ಊರಿನ‌ ಮಕ್ಕಳಿಗೂ ಗ್ರಾಮಸ್ಥರಿಗೂ ಅಷ್ಟೇ ಪ್ರೀತಿ ಕೂಡ ಇತ್ತು. ರಾಮುವಿನನ್ನು ನೋಡುವುದಕ್ಕಾಗಿಯೇ ಊರಿನ‌ಜನರು ಆಗಾಗ ಬಂದು ಹೋಗುವಷ್ಟು ಅನ್ಯೋನ್ಯತೆ ಸೃಷ್ಟಿಸಿಕೊಂಡಿದ್ದ.

ಆದರೆ ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮುಗೆ ಸ್ಥಳೀಯ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲು ಶಿಫಾರಸು ಮಾಡಿದ್ದರು. ಅದರಂತೆ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯದಲ್ಲಿ ಕೋತಿ ಮರಿ ಕೊನೆಯುಸಿರೆಳೆದಿದ್ದು, ಕೋತಿ ರಾಮುವಿನ ಮೃತದೇಹವನ್ನು ಪುನಃ ಮನೆಗೆ ತಂದಾಗ ಎಲ್ಲರೂ ಕಣ್ಣೀರು ಸುರಿಸಿದ್ದಾರೆ. ಬಳಿಕ ಕೋತಿಯ ಶವಕ್ಕೆ ಹೂ, ಊದಿನಕಡ್ಡಿ ಪೂಜೆ ಮಾಡಿ ಮನೆ ಮಂದಿ, ಗ್ರಾಮಸ್ಥರು ಸೇರಿ ಭಾವುಕ ವಿದಾಯ ಹೇಳಿದ್ದಾರೆ. ಧಾರ್ಮಿಕ ವಿಧಿವಿಧಾನಗಳಂತೆ ಕೋತಿಯ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಈ ವೇಳೆ ಮಕ್ಕಳು, ಮಹಿಳೆಯರು, ಹಿರಿಯರೆನ್ನದೆ ಎಲ್ಲರೂ ಕಣ್ಣೀರು ಹಾಕಿರುವುದು ಕಂಡುಬಂತ್ತು.

ಗಾಯಗೊಂಡಿದ್ದ ರಾಮು

ಕೋತಿ ರಾಮು ಎರಡ್ಮೂರು ವರ್ಷಗಳ ಹಿಂದೆ ಮಾಮೂಲಿ ಕೋತಿಯಂತೆ ಇತ್ತು. ಕಾಡಿನಲ್ಲಿ ತಿರುಗಾಡಿಕೊಂಡು, ಕಪಿ ಚೇಷ್ಠೆ ಮಾಡಿಕೊಂಡಿತ್ತು. ಚಿಕ್ಕ ಮರಿಯಾಗಿದ್ದ ಕಾರಣ ಚೇಷ್ಠೆ ತುಸು ಹೆಚ್ಚೇ ಇತ್ತು. ಹೀಗೆ ಒಂದು ದಿನ ಮರದಿಂದ ಮರಕ್ಕೆ ಹಾರುತ್ತಾ ಮಂಗನಾಟ ಆಡುವ ವೇಳೆ ಅಕಸ್ಮಾತ್ ಆಗಿ ಕಂಜರಪೇಟೆ ವ್ಯಾಪ್ತಿಯಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿತ್ತು‌. ಈ ವೇಳೆ ಕಂಜರಪೇಟೆ ಗ್ರಾಮಸ್ಥರು ಈ ಕೋತಿಯನ್ನ ಹಿಡಿದು, ಶುಷ್ರೂಷೆ ನೀಡಿದ್ದರು. ವೈದ್ಯರಿಂದ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದ್ದರು.

hitendra naik

ಕೊಂಚ ಚೇತರಿಸಿಕೊಂಡ ಬಳಿಕ ಈ ಕೋತಿ ಮರಿಯನ್ನ ಪುನಃ ಕಾಡಿನತ್ತ ಬಿಡಲಾಗಿತ್ತು. ಆದರೆ ಕಾಡಿನ ಇತರ ಕೋತಿಗಳೆಲ್ಲ ಈ ಮರಿ ಕೋತಿಯನ್ನ ಸೇರಿಸಿಕೊಳ್ಳದೆ ದೂರ ಮಾಡಿದ್ದವು. ಇದರಿಂದಾಗಿ ನೊಂದಿದ್ದ ಈ ಕೋತಿ, ಪುನಃ ಆರೈಕೆ ನೀಡಿದ್ದ ಕಂಜರಪೇಟೆ ಗ್ರಾಮಕ್ಕೆ ಬಂದಿತ್ತು. ಇದನ್ನು ಕಂಡ ಗ್ರಾಮದ ರೆಹೋನೆತ್, ಮರಿಯನ್ನ ಹಿಡಿದು ಮನೆಯ ಸದಸ್ಯನಂತೆ ಸಾಕಿದ್ದರು. ಮನೆಯ ಮಕ್ಕಳೆಲ್ಲ ಈ ಕೋತಿಯೊಂದಿಗೆ ಸಲುಗೆಯಿಂದ, ಆಟವಾಡಿಕೊಂಡಿದ್ದರು‌.

ಹೀಗೆ ಎರಡ್ಮೂರು ವರ್ಷಗಳಿಂದ ಗ್ರಾಮದಲ್ಲಿ ಓಡಾಡಿಕೊಂಡಿದ್ದ ಕೋತಿಗೆ ಗ್ರಾಮಸ್ಥರೂ ಹತ್ತಿರವಾಗಿದ್ದರು. ಹಿರಿ- ಕಿರಿಯರೆನ್ನದೆ ಎಲ್ಲರೂ ಅನ್ಯೋನ್ಯತೆಯಿಂದಿದ್ದರು. ಇದೀಗ ಕೋತಿ ರಾಮು ಅಗಲಿಕೆಯಿಂದಾಗಿ ಇಡೀ ಊರಿಗೆ ಶೋಕದ ಛಾಯೆ ಆವರಿಸಿದೆ. ದುಃಖ ಮಡುಗಟ್ಟಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button