ಮನೆ ಗೋಡೆ ಕುಸಿತ : ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಇಬ್ಬರ ದುರ್ಮರಣ

ಗೋಡೆ ಕುಸಿದು ಮಣ್ಣಿನಡಿ ಸಿಲುಕಿ ದುರಂತ

ಅಂಕೋಲಾ: ಮನೆ ಗೋಡೆ ಕುಸಿದು ಇಬ್ಬರು ಮೃತ ಪಟ್ಟ ಧಾರುಣ ಘಟನೆ ತಾಲೂಕಿನ ಭಾವಿಕೇರಿಯಲ್ಲಿ ಸಂಭವಿಸಿದೆ. ಭಾವಿಕೇರಿ ನಿವಾಸಿ ಮಧುಕರ ಸುಬ್ರಾಯ ನಾಯಕ, ಮತ್ತು ಶಾಂತಾರಾಮ ನಾರಾಯಣ ನಾಯಕ ಮೃತ ದುರ್ದೈವಿಗಳಾಗಿದ್ದಾರೆ.

ನಿಯಂತ್ರಣ ತಪ್ಪಿದ ಬೈಕ್: ಲಾರಿಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಮಧುಕರ ನಾಯಕ ಅವರ ಹಳೆಯ ಮನೆಯ ಗೋಡೆ ತೆರುವುಗೊಳಿಸುತ್ತಿದ್ದ ಸಂದರ್ಭದಲ್ಲಿ ,ಆಕಸ್ಮಿಕವಾಗಿ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಮಣ್ಣಿನ ಅಡಿಯಲ್ಲಿ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಇದ್ದ ಈರ್ವರನ್ನು ಸ್ಥಳೀಯರು ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕಡೆ ಆಸ್ಪತ್ರೆಗೆ ಅವರನ್ನು ಪ್ರತ್ಯೇಕ ಪ್ರತ್ಯೇಕ ಆಂಬುಲೆನ್ಸ್ ಗಳಲ್ಲಿ ಸಾಗಿಸುತ್ತಿದ್ದಾಗ ದಾರಿಮಧ್ಯೆ ಶಾಂತಾರಾಮ ನಾಯಕ ಕುಮಟಾ ಮಿರ್ಜಾನ ಬಳಿ, ಮಧುಕರ ನಾಯಕ ಕುಂದಾಪುರ – ಬೈಂದೂರು ಬಳಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ತಾಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಇಡಲಾಗಿದೆ.

ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.ಊರಿನ ಎಲ್ಲರಿಗೂ ಬೇಕಾಗಿ,ತಮ್ಮ ಶ್ರಮ ಹಾಗೂ ಬೆವರು ಸಂಸ್ಕೃತಿ ಮೂಲಕ ಎಂತಹ ಕಠಿಣ ಕೆಲಸಗಳನ್ನು ಸಲೀಸಾಗಿ ಮಾಡಬಲ್ಲ ಇವರ ಅದೃಷ್ಟ ಕೈಕೊಟ್ಟು,ವಿಧಿಯಾಟಕ್ಕೆ ಬಲಿಯಾಗುವುದರೊಂದಿಗೆ, ಬಾವಿಕೇರಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸುವಂತಾಗಿದೆ.

ಗ್ರಾಮಸ್ಥರು ಹಾಗೂ ಇತರರು ಆಸ್ಪತ್ರೆ ಬಳಿ ಸೇರಿ ಕಂಬನಿ ಮಿಡಿಯುತ್ತಿರುವ ದೃಶ್ಯ ಕಂಡುಬಂದಿದೆ. ಅನ್ಯ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದ ಶಾಸಕಿ ರೂಪಾಲಿ ನಾಯ್ಕ, ಭಾವಿಕೇರಿಯ ಈರ್ವರ ದುರ್ಮರಣದ ಸುದ್ದಿ ಕೇಳಿ, ಸಂತಾಪ ವ್ಯಕ್ತಪಡಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version