ಟ್ಯಾಂಕರ್ ಗೆ ಡಿಕ್ಕಿ ಹೊಡೆದುಕೊಂಡ ಕಾರು| ನಡೆದುಕೊಂಡು ಹೋಗುತ್ತಿದ್ದ ಯುವತಿ ದುರ್ಮರಣ

ಅಂಕೋಲಾ: ಹೊಸ ವರ್ಷದ ಮೊದಲ ದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 4 ಜನ ದುರ್ಮರಣ ಹೊಂದಿದ್ದು, ಜನರ ಮನಸ್ಸಿನಿಂದ ಮಾಸುವ ಮುನ್ನವೇ ಅದೇ ಸ್ಥಳದ ಹತ್ತಿರ ಸಂಭವಿಸಿದ ಮತ್ತೊಂದು ಭೀಕರ ರಸ್ತೆ ಅಪಘಾತದಲ್ಲಿ ಪಾದಾಚಾರಿ ಯುವತಿ ಮೃತಪಟ್ಟ ಧಾರುಣ ಘಟನೆ ನಡೆದಿದೆ.,ಕಾರನಲ್ಲಿದ್ದ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾ.ಹೆ. 66 ರ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ಶನಿವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಹುಬ್ಬಳ್ಳಿ ಮೂಲದ ಸಾವಂತ್ರಿ ಸಂಜೀವಪ್ಪ ಗುಜನುರು ಎಂಬ ಯುವತಿ ಮೃತ ಪಟ್ಟ ದುರ್ದೈವಿಯಾಗಿದ್ದಾಳೆ. ಇವಳು ಹೆದ್ದಾರಿ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಬಡಿದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಪಕ್ಕ ನಿಲ್ಲಿಸಿದ್ದ ಟ್ಯಾಂಕರ್ ಗಾಡಿ ಒಂದಕ್ಕೆ ಡಿಕ್ಕಿ ಹೊಡೆದುಕೊಂಡಿದೆ.

ಅಪಘಾತದ ರಬ್ಬಸಕ್ಕೆ ಕಾರ್ ನ ಮುಂಭಾಗ ನುಚ್ಚುಗುಜ್ಜಾಗಿದ್ದು ಕೇರಳ ಮೂಲದ ಗೋವಾಕ್ಕೆ ಹೊರಟಿದ್ದ ದಂಪತಿಗಳಿಬ್ಬರು (ಪ್ರೀತಾ ಮತ್ತು ವಿಜಯನ್ ) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ತಾಲೂಕ್ ಆಸ್ಪತ್ರೆಗೆ ಸಾಗಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಐಆರ್‌ಬಿ, 112 ತುರ್ತು ವಾಹನ ಸಿಬ್ಬಂದಿಗಳು, 1033 ಹೈವೇ ಸಿಬ್ಬಂದಿಗಳು ಹಾಗೂ 108 ಅಂಬುಲೆನ್ಸ್, ಹಾಗೂ ಸಿ ಪಿ ಐ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.

ಹುಬ್ಬಳ್ಳಿ ಮೂಲದ ಯುವತಿ ಬಾಳೆಗುಳಿಯಲ್ಲಿ ತಮ್ಮ ಕುಟುಂಬದೊಂದಿಗೆ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಇಲ್ಲಿಯೇ ವಾಸವಿದ್ದರು.ಬಡ ಕುಟುಂಬದ ಯುವತಿಯ ಅಕಾಲಿಕ ಸಾವು ಕುಟುಂಬ ವರ್ಗದಲ್ಲಿ ಅತೀವ ದುಃಖ ಹಾಗೂ ಶೋಕಕ್ಕೆ ಕಾರಣವಾಗಿದೆ. ಕುಟುಂಬಸ್ಥರು, ಸಮಾಜ ಬಾಂಧವರೆಲ್ಲರು ನೂರಾರು ಸಂಖ್ಯೆಯಲ್ಲಿ ತಾಲೂಕ್ ಆಸ್ಪತ್ರೆ ಶವಾಗಾರದ ಬಳಿ ಆಗಮಿಸಿ ರೋದಿಸುತ್ತಿರುವ ದೃಶ್ಯ ಕಂಡು ಬಂತು . ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version