Focus News
Trending

ಜನವರಿ 13 ರಂದು ಹೂತ್ಕಳ ಧನ್ವಂತರಿ ದೇವಸ್ಥಾನದಲ್ಲಿ ವರ್ದಂತ್ಯುತ್ಸವ

ಭಟ್ಕಳ : ಅನಾದಿಕಾಲದಿಂದಲೂ ಪ್ರಸಿದ್ಧಿಯಾಗಿರುವ ಹಾಗೂ ಸರ್ವರೋಗ ನಿವಾರಕ ಮಹಿಮೆ ಹೊಂದಿರುವ ತಾಲ್ಲೂಕಿನ ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ, ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಜನವರಿ 13 ರಂದು ಶ್ರೀ ಮಹಾಧನ್ವಂತರಿಹವನ, ಶ್ರೀ ಧನ್ವಂತರಿವೃತಕಥೆ, ಅಷ್ಟದೃವ್ಯ ಗಣಹವನ, ದೇವರ ವರ್ಧಂತ್ಯುತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಆ ಪ್ರಯುಕ್ತ ವೇದ ಮೂರ್ತಿ ಕಟ್ಟೆ ತಿಮ್ಮಣ್ಣ ಭಟ್ಟರ ಪ್ರಧಾನ ಆಚಾರ್ಯತ್ವದಲ್ಲಿ ಜ. 13 ರಂದು ಬೆಳಿಗ್ಗೆ ಮಹಾಪ್ರಾರ್ಥನೆ ಶುದ್ಧೀಕರ್ಮ, ಪುಣ್ಯಾವಾಚನ, ಪ್ರಧಾನ ಸಂಕಲ್ಪ, ಋತ್ವಿಗ್ವರ್ಣನ, ಮಧುರ್ಕಪೂಜೆ, ನಾಂದಿ, ಮಾತೃಕಾಪೂಜೆ, ಕೌತುಕಬಂಧನ, ಶ್ರೀಸೂಕ್ತ, ಪುರುಷಸೂಕ್ತಹವನ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದರೆ, ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಶ್ರೀಕಂಠ ಹೆಬ್ಬಾರ ವಹಿಸಲಿದ್ದಾರೆ.

ಭಟ್ಕಳ ಶಾಸಕ ಸುನೀಲ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಬೈಂದೂರು ಶಾಸಕ ಎಂ ಸುಕುಮಾರ ಶೆಟ್ಟಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ನೀಲಕಂಠ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ಮಾಡಿದರೆ, ಮುಖ್ಯ ಅತಿಥಿಗಳಾಗಿ ರಾಷ್ಟಿಯ ಮಾನವ ಹಕ್ಕು ಆಯೋಗ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ ಗಾಣಿಗ, ಧನ್ವಂತರಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ, ಪತ್ರಕರ್ತ ರಾಧಾಕೃಷ್ಣ ಭಟ್ಟ, ಬೆಂಗಳೂರಿನ ಉದ್ಯಮಿ ಕಿರಣ ಧರ್ಮಸ್ಥಳ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, 1.30 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಡಾ. ಗಣೇಶ ಭಟ್ಟರಿಂದ ಆಯುರ್ವೇದದಲ್ಲಿ ಆರೋಗ್ಯ ಕುರಿತು ಉಪನ್ಯಾಸ, ನಾಟಿ ವೈದ್ಯ ಕೇಶವ ದೇಶಬಂಡಾರಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ಸಂಜೆ 4.30ರಿಂದ ಭಕ್ತಿ ಸಂಗೀತ ನಡೆಯಲಿದೆ. ರಾತ್ರಿ ರಂಗಪೂಜೆ, ಮಹಾಬಲಿ, ಧ್ವಜಾರೋಹಣ, ಅಷ್ಟಾವಧಾನಸೇವೆ, ಪ್ರಸಾದವಿತರಣೆ, ಆಶೀರ್ವಾದಗೃಹಣ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಗಣಪತಿ ಭಟ್ಟ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಂಠ ಹೆಬ್ಬಾರ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button