ಮಾನವೀಯ ಮೌಲ್ಯ ಸಾರುವ ಬಾಂಧವ್ಯದ ಬೆಸುಗೆ ರಕ್ಷಾ ಬಂಧನ

ಪ್ರತಿಯೊಂದು ಆಚರಣೆ ಹಬ್ಬ ಹರಿದಿನಗಳು ಸಂಪ್ರದಾಯದ ಹಿಂದೆ ಒಂದೊಂದು ತಾತ್ವಿಕ ಕಾರಣಗಳು ಇದ್ದೆ ಇರುತ್ತದೆ ಜೊತೆಗೆ ಒಂದು ಸಂಭ್ರಮ ಕೂಡ ಅಲ್ಲಿರುತ್ತದೆ. ಅಂತೆಯೇ ಶ್ರಾವಣ ಶುದ್ಧ ಪೂರ್ಣಿಮೆಯಂದು ನಡೆಯುವ ಪವಿತ್ರ ಹಬ್ಬ ರಕ್ಷಾಬಂಧನ ಕೂಡ ಇದರ ಹೊರತಾಗಿಲ್ಲ. ಸಮಾಜದ ಸ್ತ್ರೀ ಪುರುಷರಲ್ಲಿ ಪರಸ್ಪರ ಸೋದರ ಸೋದರಿಯರ ಪವಿತ್ರ ಸಂಬಂಧವನ್ನು ಭದ್ರಗೊಳಿಸುವ ಸಂಕೇತ ಈ ರಕ್ಷಾ ಬಂಧನ. ಇದೊಂದು ಸಂಭ್ರಮದ ಆಪ್ತತೆಯ ಕ್ಷಣ. ಇಡಿ ಭರತ ಖಂಡದಲ್ಲಿ ರಕ್ಷಾಬಂಧನಕ್ಕೆ ಅತ್ಯಂತ ಮಹತ್ವ ಇದೆ. ಅದರಲ್ಲೂ ದಕ್ಷಿಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ರಕ್ಷಾ ಬಂಧನದ ಆಚರಣೆ ವಿಶೇಷವಾಗಿ ನಡೆಯುತ್ತದೆ. ಅಲ್ಲಿ ಇದನ್ನು ರಾಕಿ ಕಾ ತ್ಯೋಹಾರ ಎಂದು ಕರೆಯುತ್ತಾರೆ. ಈ ಹಬ್ಬದಂದು ಸೋದರಿಯರು ಸೋದರರರಿಗೆ ರಾಕಿ ಕಟ್ಟಿ ಸಿಹಿತಿನಿಸಿ ಸಂಭ್ರಮಿಸುತ್ತಾರೆ.

ಪುರಾಣಗಳಲ್ಲಿಯೂ ರಕ್ಷಾ ಬಂಧನದ ಉಲ್ಲೇಖಗಳು ಕಾಣಸಿಗುತ್ತವೆ. ಹಿಂದೆ ದೇವತೆಗಳಿಗೂ ರಾಕ್ಷಸರಿಗೂ ಭಯಂಕರ ಯುದ್ಧಗಳು ಸಂಭವಿಸಿ ದೇವರಾಜನಾದ ಇಂದ್ರನು ಸೋತು ಓಡಿ ಹೋಗುವ ಪ್ರಸಂಗ ಎದುರಾಗುತ್ತದೆ. ಆಗ ಇಂದ್ರನ ಪತ್ನಿ ಶಚಿದೇವಿಯು ರಕ್ಷಾಬಂಧನದ ವೃತದಂತೆ ಪತಿಗೆ ರಕ್ಷೆ ಕಟ್ಟಿ ಕಳಿಸುತ್ತಾಳೆ. ಪರಿಣಾಮ ಇಂದ್ರನು ಜಯಶಾಲಿಯಾಗುತ್ತಾನೆ.
ಮಹಾಭಾರತದಲ್ಲಿ ಕುಂತಿಯು ತನ್ನ ಮಕ್ಕಳು ಯುದ್ಧಕ್ಕೆ ಹೊರಡುವ ಸಂದರ್ಭದಲ್ಲಿ ಅವರಿಗೆ ರಕ್ಷೆ ಕಟ್ಟುವ ಮೂಲಕ ಅವರ ಗೆಲುವಿಗೆ ಕಾರಣಳಾಗುತ್ತಾಳೆ. ದ್ರೌಪತಿಯು ಶ್ರೀ ವಾಸುದೇವನಿಗೆ ರಕ್ಷೆ ಕಟ್ಟಿ ಅವನಿಂದ ರಕ್ಷೆ ಪಡೆದಿರುವಂತದನ್ನು ನಾವು ತಿಳಿದಿದ್ದೇವೆ. ಈ ಕಾರಣಕ್ಕಾಗಿ ವಿವಾಹ ಉಪನಯನ ಮೊದಲಾದ ಶುಭ ಸಂದರ್ಭಗಳಲ್ಲಿ ಯಾವುದೇ ತೊಡಕಾಗದಂತೆ ಕಂಕಣ ಕಟ್ಟುವ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಕೆಲವು ಐತಿಹಾಸಿಕ ಘಟನೆಗಳು ಸಹ ರಕ್ಷಾ ಬಂಧನವನ್ನು ಅದರ ಮಹತ್ವವನ್ನು ಸಾರಿ ಹೇಳುತ್ತವೆ.

ಶತ್ರು ರಾಜನ ಮಗಳ ಕೈಯಿಂದ ರಾಕಿ ಕಟ್ಟಿಕೊಳ್ಳುವ ಮೂಲಕ ಅವರ ಸ್ನೆಹ ಬೆಳೆಸಿದಂತ ಅನೇಕ ಘಟನೆಗಳು ಇವೆ. ಇದಲ್ಲದೆ ರಕ್ಷೆ ಕಟ್ಟಿದ ತನ್ನ ಸೋದರಿಯರಿಗಾಗಿ ಪ್ರಾಣ ಬಿಟ್ಟ ಅದೆಷ್ಟೋ ರಾಜರೂ ಇದ್ದಾರೆ. ಕೆಲವು ಅನ್ಯ ರಾಜರುಗಳಿಂದ ಆಕ್ರಮಣಗಳು ನಡೆದಾಗ ಅತ್ಯಾಚಾರಕ್ಕೊಳಗಾಗುವ ಭೀತಿಯಿಂದ ಕೆಲವು ಯುವತಿಯರು ರಕ್ಷೆ ಕಟ್ಟುವ ಮೂಲಕ ತಮ್ಮ ಮಾನ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಅಂತ ಪವಿತ್ರ ಸ್ಥಾನ ರಕ್ಷೆಗಿದೆ. ಈ ರಕ್ಷಾಬಂಧನ ಹಬ್ಬವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಾತ್ರ ಇಂದಿಗೂ ಒಂದು ವೃತದಂತೆ ಉತ್ಸವದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಲ್ಲಿ ಸಹೋದರತೆ ಬಂಧುತ್ವ ಸಹಕಾರದ ಸಂಕೇತವಾಗಿ ಪವಿತ್ರ ಭಗವಾದ್ವಜದ ಅಡಿಯಲ್ಲಿ ಸಂಕಲ್ಪಮಾಡಿ ಪರಸ್ಪರ ರಕ್ಷೆ ಕಟ್ಟಿಕೊಳ್ಳುವ ಮೂಲಕ ಸಂಭ್ರಮಿಸುತ್ತಾರೆ. ಈ ಶೃದ್ಧೆ ಇಲ್ಲಿ ಮಾತ್ರ ಕಾಣಲು ಸಾಧ್ಯ.

ರಕ್ಷಣೆ, ಸ್ನೇಹ ಸೋದರತೆ ಬಂದುತ್ವವನ್ನು ಸಾರುವ ಈ ರಕ್ಷೆಯನ್ನು ಕಟ್ಟಿಕೊಳ್ಳುವಲ್ಲಿ ಕೆಲವು ಕಾಲೇಜುಗಳಲ್ಲಿ ಹುಡುಗರು ಹಿಂದೇಟು ಹಾಕುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿರುವ ಒಂದು ಸಂಗತಿಯಾಗಿದೆ. ಸ್ನೇಹಿತರ ದಿನ, ಪ್ರೇಮಿಗಳ ದಿನ ಆದಿನ ಈದಿನ ಎಂದೆಲ್ಲ ಪಾಶ್ಚಿಮಾತ್ಯರ ಕಡೆಗೆ ಮುಗಿಬೀಳುವವರು ರಕ್ಷಾಬಂಧನದ ಮಹತ್ವ ಅರಿಯದಿರುವುದು ನೋವಿನ ಸಂಗತಿಯಾಗಿದೆ.
ಇಷ್ಟಕ್ಕೂ ರಕ್ಷೆ ಕಟ್ಟಿಕೊಳ್ಳುವುದರಿಂದ ಆಗುವ ನಷ್ಟವಾದರೂ ಏನೂ?ಮನೆಯಲ್ಲಿಲ್ಲದ ಸೋದರಿ ಇಲ್ಲಾದರೂ ದೊರೆತಳಲ್ಲ ಎಂಬ ತೃಪ್ತಿ ಆದರೂ ದೊರಕುತ್ತದೆ. ಆಕೆಗೂ ಒಬ್ಬ ಅಣ್ಣನ ಪ್ರೀತಿ ದೊರಕುತ್ತದೆ. ಯಾವುದೇ ಹಾನಿಯಿಲ್ಲ ಮನೋವಿಕಾಶದ ಸೋದರತೆಯನ್ನು ಗಟ್ಟಿಗೊಳಿಸುವ ಪರಸ್ಪರ ವಿಶ್ವಾಸ ವೃದ್ಧಿಸುವ ಈ ರಕ್ಷಾಬಂಧನ ಆಚರಣೆ ಮತ್ತು ಅದರ ಮಹತ್ವ ತಿಳಿಸುವ ಕಾರ್ಯ ಪ್ರತಿ ಶಾಲಾ ಕಾಲೇಜುಗಳಲ್ಲಿ ಒಂದು ರಾಷ್ಟ್ರೀಯ ಹಬ್ಬ ಉತ್ಸವದ ರೀತಿಯಲ್ಲಿ ನಡೆಯಬೇಕಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಬದಲಾವಣೆ ಪರ್ವವನ್ನು ನಾವು ಕಾಣುತ್ತಿದ್ದೇವೆ. ಜಗತ್ತಿಗೆ ಭಾರತದ ಆಚರಣೆ ಸಂಸ್ಕೃತಿಗಳ ಮಹತ್ವ ತಿಳಿಯುತ್ತಿದೆ, ಭಾರತ ಬೆಳಗುತ್ತಿದೆ.

ಅಂತೆಯೇ ಜಾತಿ ಧರ್ಮ ಭಾಷೆ ಪ್ರಾಂತಗಳ ಹೆಸರಿನಲ್ಲಿ ಸದಾ ಕಚ್ಚಾಡುವ ಸಮಾಜದ ಏಕತೆ ನೆಮ್ಮದಿ ನುಚ್ಚು ನೂರಾಗುತಿರುವ ಇಂತಹ ಸಂಧಿಗ್ಥತೆಯ ಸಂಕೀರ್ಣತೆಯ ಸಂದರ್ಭದಲ್ಲಿ ದೇಶದಲ್ಲಿ ಪುನಃ ಶಾಂತಿ, ಸಹಕಾರ, ನಂಬಿಕೆ ನವೀನತೆಗಾಗಿ ಬಂದುತ್ವಕ್ಕಾಗಿ ಪಣ ತೊಡೋಣ. ಸ್ನೇಹ ಸಂಜೀವಿನಿ ಮಂತ್ರದ ಸಂಕೇತವಾದ ಈ ರಕ್ಷಾ ಬಂಧನವನ್ನು ಪ್ರತಿ ಧರ್ಮದಲ್ಲಿಯೂ ಆಚರಿಸುವಂತೆ ಮಾಡೋಣ. ಮಾನವೀಯ ಮೌಲ್ಯ ಸಾರುವ ಈ ಪವಿತ್ರ ರಕ್ಷಾ ಬಂಧನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಸಂಕಲ್ಪ ಮಾಡೋಣ.

ಲೇಖಕರು: ಉಮೇಶ ಮುಂಡಳ್ಳಿ
Exit mobile version