Focus NewsImportant
Trending

ಮನೆ ಬಾಗಿಲು ಮುರಿದು ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳುವು

ಅಂಕೋಲಾ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಒಳನುಗ್ಗಿದ ಕಳ್ಳರು, ನಗದು ಹಾಗೂ ಲಕ್ಷಾಂತರ ರೂ ಮೌಲ್ಯದ ಆಭರಣ ಕದ್ದು ಪರಾರಿಯಾಗಿದ್ದಾರೆ. ಮನೆ ಮಾಲಿಕರು ಇಲ್ಲದ ಸಂದರ್ಭದಲ್ಲಿಯೇ ಮನೆಗೆ ನುಗ್ಗಿದ ಕಳ್ಳರು ಸುಮಾರು 1.16 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ.

ಶೆಟಗೇರಿ ವ್ಯಾಪ್ತಿಯ ಹೊಸಗೇರಿ ಬಿಳಿಗಿರಿ ದೇವಸ್ಥಾನದ ಸಮೀಪದ ನಿವಾಸಿ ನಿವೃತ್ತ ಶಿಕ್ಷಕಿ ರತ್ನಾ ದೇವರಾಯ ನಾಯಕ ಎನ್ನುವವರ ಮನೆಯನ್ನು ಏಪ್ರಿಲ್ 5 ರ ರಾತ್ರಿ 11 ಗಂಟೆ ಮತ್ತು ಏಪ್ರಿಲ್ 6 ರ ಬೆಳಗ್ಗೆ 8.30 ರ ಅವಧಿಯಲ್ಲಿ ಕಳ್ಳತನ ಮಾಡಲಾಗಿದೆ.

ಮನೆಯ ಗೋಡೆಗೆ ಅಳವಡಿಸಿದ ಸೋಲಾರ್ ಸೆನ್ಸಾರ್ ವಾಲ್ ಲೈಟ್ ಕಿತ್ತು ಮುಂದಿನ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ನಾಲ್ಕು ವಾರ್ಡ್ ರೋಬ್ ಗಳನ್ನು ಮುರಿದು 40 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ಚಿಕ್ಕ ಚೈನುಗಳು 24 ಸಾವಿರ ರೂಪಾಯಿ ಬೆಲೆಯ ಕಿವಿಯೋಲೆ,20 ಸಾವಿರ ಬೆಲೆಯ ಉಂಗುರ, 32 ಸಾವಿರ ಬೆಲೆಯ ಜೋಡಿ ಕಿವಿಯೋಲೆ ಮತ್ತು 30 ಸಾವಿರ ರೂಪಾಯಿ ನಗದು ಹಣ ಕಳ್ಳತನ ಮಾಡಿದ್ದಾರೆ.

ಈ ಕುರಿತು ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ,ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು, ಕಳ್ಳರ ಪತ್ತೆಗೆ ತನಿಖೆ ಮುಂದುವರೆದಿದೆ. ಈ ಹಿಂದೆಯೂ ಇದೇ ಗ್ರಾಮದ ಅಕ್ಕ ಪಕ್ಕ ಹಾಗೂ ತಾಲೂಕಿನ ಹಲವೆಡೆ ಹತ್ತಾರು ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಪೋಲೀಸರು ಕೆಲವು ಪ್ರಕರಣ ಬೇಧಿಸಿ ಕಳ್ಳರನ್ನು ಬಂಧಿಸಿದ್ದರು.

ಅದಾದ ಬಳಿಕ ಕಳ್ಳತನ ಸಂಖ್ಯೆ ಕಡಿಮೆ ಆಗಿತ್ತಾದರೂ ಮತ್ತೆ ಹಳ್ಳತನ ಪ್ರಕರಣ ಕಂಡು ಬರುವಂತಾಗಿದೆ. ಸಾರ್ವಜನಿಕರು ತಮ್ಮ ಮನೆ ಬಿಟ್ಟು ಹೋಗುವಾಗ ಅಮೂಲ್ಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟು ಹೋಗುವುದು , ಮತ್ತು ತಮ್ಮ ಅಕ್ಕಪಕ್ಕದ ಮನೆ, ಸಂಬಂಧಿಗಳು ಮತ್ತು ಹತ್ತಿರದ ಪೊಲೀಸ್ ಠಾಣೆಗೆ ತಾವು ಮನೆಯಿಂದ ಹೊರಗೋಗುತ್ತಿರುವ ವಿಷಯ ತಿಳಿಸಿ, ಕಣ್ಗಾವಲಿಡುವಂತೆ ವಿನಂತಿಸಿ, ಆ ಮೂಲಕ ಮನೆ ಗಳ್ಳತನವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button