Important
Trending

ಹುಟ್ಟುಹಬ್ಬದ ದಿನದಂದೇ ಕಾಲಗರ್ಭ ಸೇರಿದ ಬಾಲಕ

ಅಂಕೋಲಾ : ತಾಯಿ ಗರ್ಭದಿಂದ ಹೊರ ಬಂದು ತನ್ನ ಹುಟ್ಟು ಹಬ್ಬದ 11 ನೇ ವರ್ಷಾಚರಣೆ ನಡೆಸುವ ಮುನ್ನವೇ,ಬಾಲಕನೋರ್ವ ಕಾಲ ಗರ್ಭ ಸೇರುವಂತಾದ ಮನಕಲುಕುವ ಘಟನೆ ತಾಲೂಕಿನ ಬಡಿಗೇರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಬಡಗೇರಿಯ ಪ್ರಸಿದ್ದ ವರ್ತಕ ಕುಟುಂಬದಲ್ಲಿ ಜನಿಸಿದ್ದ ಗೌರವ (11 ) ಮೃತ ದುರ್ದೈವಿ ಬಾಲಕನಾಗಿದ್ದಾನೆ. ಹುಟ್ಟಿನಿಂದಲೇ ಸ್ವಲ್ಪ ಮಂದಬುದ್ದಿಯವ ಎನ್ನಲಾದ ಈ ಬಾಲಕ ಆಗಾಗ ಅನಾರೋಗ್ಯಕ್ಕೊಳಗಾದರೂ, ತಮ್ಮೆಲ್ಲ ಕಷ್ಟ ಹಾಗೂ ನೋವು ಎಲ್ಲಿಯೂ ತೋರ್ಪಡಿಸದ ತಂದೆ- ತಾಯಿ ಮತ್ತು ಕುಟುಂಬಸ್ಥರು ಬಲು ಅಕ್ಕರೆ ಹಾಗೂ ಪ್ರೀತಿಯಿಂದ ಗೌರವವನ್ನು ಸಾಕಿ ಸಲುಹಿದ್ದಲ್ಲದೇ, ಆತನ ಆರೋಗ್ಯ ಚೇತರಿಕೆಗೆ ನಿರಂತರ ಕಾಳಜಿ ವಹಿಸುತ್ತ ಬಂದಿದ್ದರು.

ಆದರೆ ಬಾಲಕ ತಾನು ಹುಟ್ಟಿದ ದಿನದಂದೇ (ಆಗಸ್ಟ್ 28 ) 11ನೇ ವರ್ಷಾಚರಣೆ ವೇಳೆ ಮನೆಯಲ್ಲಿ ಸಂತಸ ತರುವ ಬದಲು ಎಲ್ಲರನ್ನೂ ಬಿಟ್ಟು ಚಿರನಿದ್ರೆಗೆ ಜಾರಿರುವುದು, ವಿಧಿ ಲಿಖಿತ ಎನ್ನುವಂತಾಗಿದೆ. ಪುಟಾಣಿ ಮುದ್ದು ಬಾಲಕನ ಅಕಾಲಿಕ ಸಾವಿನ ಸುದ್ದಿ ತಿಳಿದ ಮೃತನ ಕುಟುಂಬಸ್ಥರು,ಬಂಧು-ಬಳಗದವರು,ಕುಟುಂಬದ ಆಪ್ತರು ಮತ್ತು ಹಿತೈಷಿಗಳು,ಸ್ಥಳೀಯರು ಸೇರಿದಂತೆ ನೂರಾರು ಜನರು ಬಡಗೇರಿಯ ನಿವಾಸಕ್ಕೆ ಬಂದು ಕಂಬನಿ ಮಿಡಿದರು.

ನಂತರ ಮೃತ ದೇಹವನ್ನು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ ವಾಯ್ ನಾಯ್ಕ ಇವರ ರಕ್ಷಕ ಆಂಬುಲೆನ್ಸ್ ವಾಹನದಲ್ಲಿ,ಪಟ್ಟಣ ವ್ಯಾಪ್ತಿಯ ಕೋಟೆವಾಡದ ಹಿಂದೂ ಸ್ಮಶಾನ ಭೂವಿಗೆ ಸಾಗಿಸಿ,ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ
ನಡೆಸಲಾಯಿತು.ಪುತ್ರ ಶೋಕದ ನಡುವೆಯೇ ಮಗನ ಚಿತೆಗೆ ಗೌರೀಶ ಶೆಟ್ಟಿ ಅವರು ಅಗ್ನಿ ಸ್ಪರ್ಶ ಮಾಡಿದ್ದು, ಈ ದುರ್ವಿಧಿ ಕಂಡ ಕೆಲವರ ಕಣ್ಣುಗಳು ಒದ್ದೆಯಾಗಿ ಭಾವುಕರಾದಂತೆ ಕಂಡು ಬಂತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button