Focus News
Trending

Death News: ಹಸನ್ನುಖಿ ರೈತ ಮಹಿಳೆ ವಿಧಿವಶ

ವಿನಾಯಕ ಗಾಂವಕರಗೆ ಪತ್ನಿ ವಿಯೋಗ

ಅಂಕೋಲಾ: ಪೂಜಗೇರಿ ಗ್ರಾಮದ ಪ್ರಮುಖ, ಸಾಮಾಜಿಕ ಕಾರ್ಯಕರ್ತ ವಿನಾಯಕ ಬೀದಿ ಗಾಂವಕರ (ಪಡ್ತಿ ) ಅವರ ಧರ್ಮಪತ್ನಿ ಅನಿತಾ ವಿನಾಯಕ ಗಾಂವಕರ (56 ) ಸ್ವಗೃಹದಲ್ಲಿ ಸೆ 2 ರ ಶನಿವಾರ ವಿಧಿವಶರಾದರು. ಕೃಷಿ ಕುಟುಂಬದ ಸದ್ಗೃಹಿಣಿಯಾಗಿದ್ದ ಅನಿತಾ ಗಾಂವಕರ, ಹೂವು ಕಟ್ಟಿ ಮಾಲೆ ಪೋಣಿಸುವುದರಲ್ಲಿ ಪರಿಣಿತರಾಗಿದ್ದು, ತಮ್ಮ ಜಾನಪದ ಹಾಡುಗಳ ಮೂಲಕವೂ ಗಮನ ಸೆಳೆದಿದ್ದರು. ಊರಿನ ಹಾಗೂ ಇತರೆ ಎಲ್ಲರೊಂದಿಗೆ ತನ್ನ ಸರಳ – ನಡೆ ನುಡಿ, ಹಸನ್ಮುಖಿ ವ್ಯಕ್ತಿತ್ವದ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು.

ಇತ್ತೀಚೆಗೆ ಆಕಸ್ಮಿಕವಾಗಿ ಕಾಣಿಸಿಕೊಂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಿ ನಂತರ ಮನೆಯಲ್ಲಿ ಉಪಚಾರ ಮಾಡಲಾಗುತ್ತಿತ್ತು. ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದ ತನ್ನ ಗಂಡ ವಿನಾಯಕನ ಸೇವೆ ಮಾಡುತ್ತ, ತನ್ನ ನೋವು ಸಂಕಟ ಯಾರಿಗೂ ಹೇಳಿಕೊಳ್ಳದೇ, ಭಾಧಿಸಿದ ರೋಗ ಭಾಧೆ ಬಗ್ಗೆ ಇತರರಿಗೆ ತಿಳಿಯುವಷ್ಟರಲ್ಲಿ ಸಮಯ ಮೀರಿ ಹೋಗಿ, ಮುತ್ತೈದೆಯಾಗಿಯೇ ಕೊನೆಯುಸಿರೆಳೆದಿದ್ದಾಳೆ.

ಮೃತಳು, ಪತಿ ವಿನಾಯಕ ಗಾಂವಕರ, ಮಗ ಸಂಜು, ಮಗಳು ತೇಜು ಸಂದೀಪ ತಳೇಕರ, ಮಕ್ಕಳ ಸಮಾನರಾದ ವೆಂಕಟೇಶ (ಪಾಪು ) ಮತ್ತು ಪೂಜಾ ದಂಪತಿಗಳು, ಅಳಿಯ, ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದು ಕುಟುಂಬದ ಸಂಬಧಿಗಳು, ಆಪ್ತರು, ಹಿತೈಷಿಗಳು, ಊರ ನಾಗರಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಮೃತರ ಅಂತಿಮ ದರ್ಶನ ಪಡೆದುಕೊಂಡರು. ಪೂಜಗೇರಿ ಸ್ಮಶಾನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಪೂಜಗೇರಿ ಗ್ರಾಮಸ್ಥರು ಸಹಕರಿಸಿದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ವಿನಾಯಕ ಗಾಂವಕರ ಇವರಿಗೆ ಫೋನ್ ಕರೆ ಮಾಡಿ ಸಾಂತ್ವನ ಹೇಳಿದರೆ, ವಿದಾನ ಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಮಾಜಿ ಸಚಿವ ಆನಂದ ಅಸ್ನೋಟಿಕರ, ಎಂ.ಎಲ್ ಸಿ ಗಣಪತಿ ಉಳ್ವೇಕರ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ ಅರುಣ ನಾಡಕರ್ಣಿ, ಭಾಸ್ಕರ ನಾವೇಕರ,ಉದ್ದಿಮೆದಾರ ಗಣೇಶ ಕುಡ್ತಲಕರ, ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯ್ಕ ಬಬ್ರುವಾಡಾ, ಬಿಜೆ ಪಿ ಪಕ್ಷದ ಅನೇಕ ಹಿರಿಕಿರಿಯ ಮುಖಂಡರು, ಬಾಸಗೋಡ, ಶೀಳ್ಯ, ಪೂಜಗೇರಿ, ಬೆಳಂಬಾರ ಸೇರಿದಂತೆ ಸುತ್ತ ಮುತ್ತಲ ಹತ್ತಾರು ಹಳ್ಳಿಗಳ ಇತರೆ ಗಣ್ಯರು, ಪ್ರಮುಖರು, ಅನಿತಾ ಗಾಂವಕರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ಶ್ರೀ ದೇವರು ನೊಂದ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button