Follow Us On

Google News
Important
Trending

ಅಕ್ರಮ ಮರಳುಗಾರಿಕೆ ಹಿನ್ನಲೆ : ಜಿಲ್ಲಾಧಿಕಾರಿಗಳು ದಾಳಿ: ಮರಳು ದಿಬ್ಬ ವಶಕ್ಕೆ

ಕುಮಟಾ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನಕರ್ ಇಲಾಖಾ ಅಧಿಕಾರಿಗಳ ತಂಡದೊoದಿಗೆ ತೆರಳಿ ದಾಳಿ ನಡೆಸಿದ ಘಟನೆ ಕುಮಟಾ ತಾಲೂಕಿನ ದೀವಗಿಯಲ್ಲಿ ನಡೆದಿದೆ. ತಾಲೂಕಿನ ಹಲವೆಡೆ ನದಿ ತೀರ ಪ್ರದೇಶಗಳಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡಲಾಗುತ್ತಿರುವ ಕುರಿತು ದೂರುಗಳು ಹಲವು ದಿನಗಳಿಂದ ಕೇಳಿ ಬರುತ್ತಲಿತ್ತು.

ತಾಲೂಕಿನಲ್ಲಿ ಸಿಗುವ ಮರಳು ಪಕ್ಕದ ಶಿರಸಿ, ಸಿದ್ದಾಪುರ ಭಾಗಕ್ಕೆ ಹಾಗೂ ಸ್ಥಳೀಯ ಕೆಲ ಕಟ್ಟಡ ಕಾಮಗಾರಿಗಳ ಕಾರ್ಯಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಇನ್ನು ಅಕ್ರಮ ಮರಳುಗಾರಿಕೆ ಮಾಡುವವರು ರಾತ್ರಿ ವೇಳೆಯಲ್ಲಿ ದೋಣಿಗಳನ್ನು ಬಳಸಿ ಮರಳನ್ನು ತೆಗೆಯುತ್ತಿದ್ದು, ಬೆಳಗಾಗುವುದರೊಳಗಾಗಿ ಸಂಭAದಿಸಿದ ಜಾಗಕ್ಕೆ ಮರಳನ್ನು ರವಾನಿಸುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿತ್ತು.

ಜೊತೆಗೆ ಕೆಲ ಅಧಿಕಾರಿಗಳು ಮರಳು ದಂಧೆಕೋರರ ಬಳಿ ಹಪ್ತಾ ವಸೂಲಿ ಮಾಡಿ, ಗಾಡಿಗಳನ್ನು ಬಿಟ್ಟು ಕಳುಹಿಸಿದ ಕುರಿತು ಆರೋಪ ಕೂಡ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಬoಧಿಸಿದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವುಗಳ ಆಧಾರದ ಮೇಲೆ ಜಿಲ್ಲಾಧಿಕಾರಿ, ತಹಸಿಲ್ದಾರ,ಕಂದಾಯ ನಿರಿಕ್ಷಕರು ಸೇರಿದಂತೆ ಕಂದಾಯ ಇಲಾಖಾ ಅಧಿಕಾರಿಗಳು ಹಠಾತ್ತನೆ ದಾಳಿ ನಡೆಸಿ ಮರಳು ದಿಬ್ಬಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದುಕೊಂಡು ಟೀಮ್ ರಚಿಸಿಕೊಂಡು ಜಿಲ್ಲೆಯಾದ್ಯಂತ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಕುಮಟಾ ತಾಲೂಕಿನಲ್ಲಿ ಸಂಗ್ರಹಿಸಿಟ್ಟ ಸುಮಾರು 7 ರಿಂದ 8 ಲಾರಿಗಳಾಗುವಷ್ಟು ಮರಳು ದಿಬ್ಬಗಳನ್ನು ವಶಪಡಿಸಿಕೊಂಡಿದ್ದೇವೆ. ಅನಧಿಕೃತ ಮರಳುಗಾರಿಕೆಗೆ ತಡೆಯಲು ಸಾರ್ವಜನಿಕರು ನೀಡಿದ ಮಾಹಿತಿಯನ್ನು ತಹಸಿಲ್ದಾರ, ಎಸಿಯವರ ಮೂಲಕ ತಿಳಿಸಿ ತಡೆಯುವ ಕಾರ್ಯ ಮಾಡಲಾಗುತ್ತಿತ್ತು.

ಆದರೆ ಇದರಿಂದ ಮರಳುಗಾರಿಕೆ ನಡೆಸುವವರು ತಮ್ಮ ಕೆಲಸ ಮುಂದುವರೆಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಈ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವ ಸಲುವಾಗಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ದಾಳಿ ಮಾಡಲಾಗಿದೆ. ಈಗ ಮೊದಲ ಹಂತ ಎಂಬAತೆ ಕೇವಲ ಮರಳುಗಳನ್ನು ವಶಪಡಿಸಿಕೊಂಡಿದ್ದೇನೆ, ಮುಂದೆ ಮರಳುಗಾರಿಕೆ ನಡೆಸುವ ಆರೋಪಿಗಳ ವಿರುದ್ದ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ನಮ್ಮ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ ಎಂದರು.

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ

Back to top button