Important
Trending

ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರಾ ಮಹೋತ್ಸವ: ಅಪರೂಪದ ಶೇಡಿ ಮರ ಏರಿ ಹರಕೆ ಸೇವೆ ಸಲ್ಲಿಕೆ: ದೇವಿಯ ದರ್ಶನ ಪಡೆದ ಸಹಸ್ರಾರು ಭಕ್ತರು

ಭಟ್ಕಳ: ಹರಕೆಯಲ್ಲಿ ವಿವಿಧ ಬಗೆಯನ್ನು ಕಂಡಿರುತ್ತಿರಿ ಕೇಳಿರುತ್ತೀರಿ. ಆದರೆ ಇಲ್ಲಿ ಭಕ್ತರು ಶೇಡಿ ಮರವನ್ನು ಏರುವ ಹರಕೆ ಈ ಜಾತ್ರೆಯ ವಿಶೇಷವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಆರಂಭಗೊoಡ ಶೇಡಬರಿ ಜಾತ್ರಾ ಮಹೋತ್ಸವೂ ಜಿಲ್ಲೆಯಲ್ಲಿಯೇ ಪ್ರಸಿದ್ಧವಾಗಿದ್ದು, ವಿಶೇಷ ರೀತಿಯಲ್ಲಿ ಭಕ್ತರು ಶೇಡಿ ಮರವನ್ನು ಏರಿ ಸಿಂಗಾರವನ್ನು ಎಸೆಯುವುದು ರೂಢಿಯಲ್ಲಿದೆ. ಜಾತ್ರೆಗೆ ಬರುವ ಸಹಸ್ರಾರು ಭಕ್ತರು ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ, ಕಾಣಿಕೆ ಹಾಗೂ ಪೂಜೆಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ. ಇಲ್ಲಿ ಹರಕೆ ಹೊತ್ತವರಿಗೆ ಅವರ ಬೇಡಿಕೆ ಈಡೇರಿರುವ ಸಾಕಷ್ಟು ಉದಾಹರಣೆಗಳಿದ್ದು, ಸಂತಾನ ಭಾಗ್ಯ, ಸಿಡುಬು ಸೇರಿದಂತೆ ಸಾಕಷ್ಟು ಕಾಯಿಲೆಗಳು ಕಡಿಮೆಯಾಗಿ ಸಂತಸದಿAದ ಭಕ್ತರು ಜೀವನ ನಡೆಸುತ್ತಾ ಸೇವೆಯನ್ನು ಮುಂದುವರೆಸಿದ್ದಾರೆ.

ಜಾತ್ರೆಯ ದಿನದಂದು ತಾಲೂಕಿನಿಂದಷ್ಟೇ ಅಲ್ಲದೇ ಹೆಚ್ಚು ಕಡಿಮೆ ರಾಜ್ಯದ ನಾನಾ ಮೂಲೆಯಿಂದ ಭಕ್ತರು ಆಗಮಿಸಿ ಇಲ್ಲಿ ಹರಕೆ, ಕಾಣಿಕೆಗಳನ್ನು ಸಲ್ಲಿಸುವದುಂಟು. ಶೇಡಿಮರ ಏರುವ ಹರಕೆ ಹೊತ್ತವರು ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದ ಎದುರಿನಲ್ಲಿ ಶೃಂಗರಿಸಿದ್ದ ಶೇಡಿಮರದಲ್ಲಿ ಕುಳಿತು ಮೂರು ಸುತ್ತು ತಿರುಗಿದ ಬಳಿಕ ಶೇಡಿ ಮರದ ಮೇಲೆ ಕುಳಿತು ಅವರು ತಾವು ತಂದಿದ್ದ ಸಿಂಗಾರ ಹೂವು, ಬಾಳೆ ಹಣ್ಣನ್ನು ಕೆಳಗಡೆಯಿರುವ ಭಕ್ತರ ಮೇಲೆ ಎಸೆಯುವುದು ವಾಡಿಕೆ. ಹಾಗೂ ಇದು ದೇವರ ಪ್ರಸಾದವೆಂದು ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ. ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹೇಳಿಕೆ ಮಾಡಿಕೊಂಡರೆ, ಆ ಕಷ್ಟಗಳು ಪರಿಹಾರವಾಗಿ ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಮಹಾಸತಿ ದೇವಿಯ ಭಕ್ತರಲ್ಲಿ ಇದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿAದಲೂ ನಡೆದುಕೊಂಡು ಬಂದ ವಾಡಿಕೆ.

ಅದರಂತೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಮಹಾಸತಿ ದೇವಸ್ಥಾನದ ಎದುರು ಅಲಂಕೃತಗೊಳಿಸಿ, ಸಿದ್ಧಪಡಿಸಿದ್ದ ಶೇಡಿ ಮರವನ್ನು ಏರಿ ಮೂರು ಸುತ್ತು ತಿರುಗಿ, ತಾವು ತಂದಿದ್ದ ಹೂವು, ಹಣ್ಣನ್ನು ಕೆಳಗೆ ನಿಂತಿದ್ದ ಭಕ್ತರ ಮೇಲೆ ಎಸೆದರು. ಅದನ್ನು ಭಕ್ತರು ಪ್ರಸಾದವೆಂದು ಸ್ವೀಕರಿಸಿದರು. ಈ ಹರಕೆ ದೃಶ್ಯ ನೋಡಲು ನೂರಾರು ಜನರು ನೆರೆದಿದ್ದರು.

ವಿಸ್ಮಯ ನ್ಯೂಸ್ , ಉದಯ್ ಎಸ್ ನಾಯ್ಕ, ಭಟ್ಕಳ

Back to top button