ಮಾನಸಿಕ ಕಿರುಕುಳ ಆರೋಪ: ಪೊಲೀಸ್ ಠಾಣೆ ಎದುರೆ ಪೆಟ್ರೋಲ್ ಸುರಿದುಕೊಂಡು ಯುವಕನಿಂದ ಆತ್ಮಹತ್ಯೆಗೆ ಯತ್ನ
![joida](http://i0.wp.com/vismaya24x7.com/wp-content/uploads/2024/06/joida.jpg?fit=1280%2C720&ssl=1)
ಜೋಯ್ಡಾ: ಪೊಲೀಸರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ರಾಮನಗರ ಪೊಲೀಸ್ ಠಾಣೆಯ ಎದುರಿಗೆ ರಸ್ತೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹನುಮಾನ ಗಲ್ಲಿಯ ಈತನ ಹೆಸರು ಭಾಸ್ಕರ ಬೋಂಡೇಲ್ಕರ (30) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಸಹಾಯಕ ಪೊಲೀಸ್ ಅಧಿಕ್ಷಕ ಸಿ.ಟಿ.ಜಯಕುಮಾರ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಮತ್ತು ಸಿ.ಪಿ.ಐ ಚಂದ್ರಶೇಖರ ಹರಿಹರ ರಾಮನಗರ ಪೋಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಹಾಯಕ ಪೊಲೀಸ್ ಅಧಿಕ್ಷಕ ಸಿ.ಟಿ.ಜಯಕುಮಾರ ನೀಡಿದ ಮಾಹಿತಿಯ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದ ಭಾಸ್ಕರ ಬೋಡೇಲ್ಕರ, ರಾಮನಗರ ಪೋಲೀಸ್ ಠಾಣೆಗೆ ಬೈಕ್ ನಲ್ಲಿ ಬಂದು ತನ್ನ ಮಾವನ ವಿರುದ್ಧದ ಪ್ರಕರಣದ ಕುರಿತು ಪೊಲೀಸರಲ್ಲಿ ವಿಚಾರಿಸಲು ಆರಂಭಿಸಿದ್ದಾನೆ.
ಆ ವೇಳೆಯಲ್ಲಿ ಆತನನ್ನು ಮದ್ಯಪಾನ ಕುಡಿದಿರುವ ಬಗ್ಗೆ ತಪಾಸಣೆಗೆ ಒಳಪಡಿಸಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಲಾಗಿದೆ. ತದನಂತರ ಪೊಲೀಸರು ಮಿತ್ರರು ಅಥವಾ ಸಂಬoಧಿಕರನ್ನು ಕರೆತಂದು ಬೈಕ್ ತೆಗೆದುಕೊಂಡು ಹೋಗುವಂತೆ ಹೇಳಿದರು. ಆತನ ಫೋನ್ ಕಾಲ್ ಗೆ ಸಂಬoಧಿಕರು ಯಾರೂ ಬಾರದಿದ್ದಾಗ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಠಾಣೆಯಿಂದ ಹೊರ ಹೋಗಿದ್ದಾನೆ.
ಠಾಣೆಯಿಂದ ಹೊರಗೆ ಹೋಗಿ ಸ್ವಲ್ಪ ಸಮಯದ ನಂತರ ಠಾಣೆಯ ಮುಂಭಾಗದ ರಸ್ತೆಯಲ್ಲಿ ಪೆಟ್ರೋಲ್ ಸುರಿದು ಕ್ಷಣಮಾತ್ರದಲ್ಲಿ ಬೆಂಕಿಹಚ್ಚಿಕೊoಡಿದ್ದಾನೆ. ಇದನ್ನು ಕಂಡ ಪೊಲೀಸರು ಧಾವಿಸಿ ಬೆಂಕಿಯನ್ನು ನಂದಿಸಿ ಪ್ರಥಮ ಚಿಕಿತ್ಸೆಗಾಗಿ ರಾಮನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ವಿಸ್ಮಯ ನ್ಯೂಸ್, ಜೋಯ್ಡಾ