![](http://i0.wp.com/vismaya24x7.com/wp-content/uploads/2024/07/rain.png?fit=1280%2C720&ssl=1)
ಕುಮಟಾ: ಕಳೆದ ಎರಡು ಮೂರು ದಿನಗಳಿಂದ ಸುರಿದ ಭಾರಿ ಮಳೆಯು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಿನಲ್ಲಿಯೂ ಅವಾಂತರಗಳನ್ನ ಸೃಷ್ಟಿಸಿದೆ. ಅತಿಯಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕಂಡ ಕಂಡಲ್ಲಿ ಹೊಳೆ, ಹಳ್ಳಗಳು ಸೃಷ್ಠಿಯಾಗುತ್ತವೆ, ನದಿ ತೀರ ಪ್ರದೇಶಗಳಾದ ಮಿರ್ಜಾನ್, ದೀವಗಿ, ಹೆಗಡೆ, ಕೋಡ್ಕಣಿ, ಬರ್ಗಿಯಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಈಗಾಗಲೇ ಕೆಲವೆಡೆಗಳಲ್ಲಿ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕುಮಟಾ ತಾಲೂಕಿನ ದೀವಗಿ ಗ್ರಾಮದಲ್ಲಿಯೂ ಅಘನಾಶಿನಿ ನದಿ ತುಂಬಿ ಹರಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ.
ಈ ಕುರಿತು ಸ್ಥಳೀಯರಾದ ಮಾದೇವ ಗೌಡ ಅವರು ನಮ್ಮ ವಿಸ್ಮಯ ಟಿವಿಯೋಂದಿಗೆ ಮಾತನಾಡಿ, ನದಿಯ ನೀರಿನ ಪ್ರಮಾಣ ಅತಿಯಾಗಿ, ಸುತ್ತಮುತ್ತಲಿನ ಗದ್ದೆ, ಮನೆ ಮುಂತಾದ ಪ್ರದೇಶವನ್ನು ನೀರು ಆವರಿಸಿಕೊಂಡಿದೆ. ನಮ್ಮ ಗದ್ದೆಗೆ ನೀರು ನುಗ್ಗಿದ್ದು, ಭತ್ತದ ಸಸಿಗಳೆಲ್ಲವೂ ನೀರು ಪಾಲಾಗಿದ್ದು, ಬಹಳ ಕಷ್ಟ ಪಡುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿಯೂ ಸಹ ಅತಿಯಾದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಲಾರಂಬಿಸಿದೆ. ಕುಮಟಾದ ಹೆಗಡೆ ಹಾಗೂ ಮಿರ್ಜಾನ ನಡುವೆ ಅಘನಾಶಿನಿ ನದಿ ಹಾದುಹೋಗಿದ್ದು, ನದಿಯ ನೀರಿನ ಪ್ರಮಾಣ ಅತಿಯಾಗಿ, ಸುತ್ತಮುತ್ತಲಿನ ಗದ್ದೆ, ಗಜನಿ, ಮನೆ ಮುಂತಾದ ಪ್ರದೇಶವನ್ನು ನೀರು ಆವರಿಸಿಕೊಂಡಿದೆ. ಹೀಗಾಗಿ ನದಿ ತಟದಲ್ಲಿ ವಾಸವಿದ್ದ ಜನರು ತಮ್ಮ ಸುಕ್ಷಿತ ಸ್ಥಳಕ್ಕೆ ತೆರಳುತಿದ್ದಾರೆ.
ಕೋನಳ್ಳಿಯಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದ್ದು, 56 ಜನರು ಆಶ್ರಯ ಪಡೆದುಕೊಂಡಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯನ್ನು ಗಮನಿಸಿದರೆ ಇನ್ನು ಹಲವು ಪ್ರದೇಶಗಳಲ್ಲಿ ನೇರೆಹಾವಳಿ ಉಂಟಾಗುವ ಸಾಧ್ಯತೆಯು ಇದ್ದು, ಹಾಗಾಗಿ ನದಿ, ಸಮುದ್ರ ತಟದ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದಿರುವುದು ಒಳಿತಾಗಿದೆ. ಇದೇ ವೇಳೆ, ಎಷ್ಟೋ ವಿದ್ಯಾರ್ಥಿಗಳು ದೂರದ ಊರಿನಿಂದ, ಕುಗ್ರಾಮಗಳಿಂದ ಪಟ್ಟಣಕ್ಕೆ ಬಂದು ವಿದ್ಯಾಬ್ಯಾಸ ಮಾಡುವ ಸ್ಥಿತಿ ಇರುವದರಿಂದಮಳೆಯಿoದ ಯಾವುದೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಹಲವೆಡೆ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿತ್ತು.
ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ