ಆಕಳುಗಳನ್ನು ಕದ್ದು ಸಾಗಿಸುತ್ತಿರುವಾಗ ಬೆನ್ನಟ್ಟಿದ್ದ ಪೊಲೀಸರು : ಆರಕ್ಷರ ಮೇಲೆಯೇ ಕಾರು ಹಾಯಿಸಿ ಸಾಯಿಸುವ ಯತ್ನ

ಬಕ್ರೀದ್ ಹಬ್ಬದ ಸಲುವಾಗಿ ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದ ಗೋವುಗಳನ್ನು ಕದ್ದು ಕಾರುಗಳಲ್ಲಿ ಸಾಗಿಸುತ್ತಿದ್ದ ತಂಡವನ್ನು, ತಮ್ಮ ಜೀವದ ಹಂಗು ತೊರೆದು ಬೆನ್ನಟ್ಟಿದ್ದ ಅಂಕೋಲಾ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ, ಕಾರಿನಲ್ಲಿದ್ದ ಎರಡು ಆಕಳುಗಳನ್ನು ರಕ್ಷಣೆ ಮಾಡಿದ್ದು, ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋದ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ತಮ್ಮನ್ನು ಬೆನ್ನಟ್ಟಿದ್ದ ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ ನಡೆಸಿದ ಖತರ್ ನಾಕ್ ಆರೋಪಿಗಳನ್ನು ಕೊನೆಗೂ ಅಂಕೋಲಾ ಪೊಲೀಸ್ ರು ಹೆಡೆಮುರಿ ಕಟ್ಟಿ ಬಂಧಿಸಿದ್ದು , ಆರೋಪಿತರ ಮೇಲೆ ಹಳೆಯ ಹಾಗೂ ಹೊಸ ಕಲಂ ಮತ್ತು ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ.
ಮಂಗಳೂರು ಸುರತ್ಕಲ್ ಕಾಟಿಪಾಳ್ಯ ನಿವಾಸಿ ಅಬ್ದುಲ್ ಅಜೀಮ ಅಬ್ದುಲ್ ಖಾದಿರ್ (48) ,ಸುರತ್ಕಲ್ ಚೊಕಬೆಟ್ಟು ನಿವಾಸಿ ಮಹಮ್ಮದ್ ಮುಸ್ತಾಕ್ ಅಬ್ದುಲ್ ಹಮೀದ್(25) ಮೂಲ್ಕಿ ನಿವಾಸಿ ಮಹಮ್ಮದ್ ಸುಹಾನ್ ಅಬ್ಬೂಬಕರ್(20) ಮಂಗಳೂರು ಉಲ್ಲಾಳ ನಿವಾಸಿ ಮಹಮ್ಮದ್ ಇರ್ಬಾಜ್ ಉಲ್ದಾಳ(20) ಸುರತ್ಕಲ್ ನಿವಾಸಿ ಮಹಮ್ಮದ್ ಆಸಿಕ್ ಅಶ್ರಫ್(22) ಇವರನ್ನು ಬಂಧಿಸಲಾಗಿದ್ದು , ಮಂಗಳೂರಿನ ಮಹಮ್ಮದ್ ಅಜೀಮ ಮತ್ತು ಇನ್ನೋರ್ವ ಪರಾರಿಯಾಗಿದ್ದಾರೆ.
ಆರೋಪಿತರು ಅಂಕೋಲಾ ಜಮಗೋಡ ರೈಲ್ವೆ ನಿಲ್ದಾಣದ ಕ್ರಾಸ್ ಬಳಿ ಬಳಿ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಕಪ್ಪು ಆಕಳುಗಳನ್ನು ಕಳ್ಳತನ ಮಾಡಿ ಕಾರಿನ ಹಿಂಬದಿ ಸಿಟ್ ಬಳಿ ಹಿಂಸಾತ್ಮಕವಾಗಿ ತುಂಬಿ ಸಾಗುತ್ತಿದ್ದ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸಿಬ್ಬಂದಿಗಳು ಬೆನ್ನಟ್ಟಿದ್ದು ಆರೋಪಿತರು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನ ನಡೆಸಿ ತಪ್ಪಿಸಿಕೊಂಡು ಹೋಗಿದ್ದು, ಆದರೂ ತಮ್ಮ ಜೀವದ ಹಂಗು ತೊರೆದು ಬೆನ್ನಟ್ಟಿ ಹೋದ ಪೊಲೀಸರು ಬೆಳಸೆ ಸೊಣಗಿಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಕಳ್ಳರ ಪಾಲಿಗೆ ಸಿಂಹಸ್ವಪ್ನವಾಗಿರುವ ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಜಗದೀಶ ಎಂ, ಡಿ.ವೈ ಎಸ್.ಪಿ ಗಿರೀಶ್ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಸಿಬ್ಬಂದಿಗಳಾದ ಎ.ಎಸ್. ಐ ಮಹಾಬಲೇಶ್ವರ ಗಡೇರ, ಚಂದ್ರಕಾಂತ ಗೌಡ, ಶ್ರೀಕಾಂತ ಕಟಬರ,ಆಸೀಫ ಕಂಕೂರು, ಮನೋಜ. ಡಿ, ಸಲೀಮ ಮೊಕಾಶಿ, ಅರುಣ ಮೇತ್ರಿ, ಮಂಜುನಾಥ ಗಡಗಿ, ಚಾಲಕ ರವಿ ಹಡಪದ್, ಡಿ.ಎ.ಆರ್ ಸಿಬ್ಬಂದಿ ರಾಜು ಅಸ್ನೋಟಿಕರ್, ಶಿವಮೂರ್ತಿ ಗುನಗಾ, ಪರೀಶ ನಾಯ್ಕ, ಸತೀಶ ಕೊಗ್ರೆ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಳ್ಳರ ದಾಳಿ ಮತ್ತು ಹಿಂಸಾತ್ಮಕ ಸಾಗಾಟದಿಂದ ಗಾಯನೋವು ಗೊಂಡಿದ್ದ ಆಕಳುಗಳಿಗೆ ತಾಲೂಕಾ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ, ಪೊಲೀಸ್ ಮತ್ತಿತರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಮೇವು , ನೀರು ನೀಡಿ ಆರೈಕೆ ಮಾಡಿ , ಬಳಿಕ ಗೋಶಾಲೆಗೆ ಕಳಿಸಲು ಕ್ರಮ ಕೈಗೊಳ್ಳಲಾಗಿದೆ. ದನಗಳ್ಳರಿಗೆ ಕಾನೂನಿನ ಬಿಸಿ ಮುಟ್ಟಿಸಿದ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯ ಹಾಗೂ ಗೋ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ