ಸಮುದ್ರ ಸಂಗಮ ಪ್ರದೇಶದಲ್ಲಿ ಕೊಚ್ಚಿ ಹೋಗಿದ್ದ ಯುವಕ ಮೃತದೇಹವಾಗಿ ಪತ್ತೆ: ನೀರಲ್ಲಿ ಆಟ ಆಡಲು ಹೋಗಿ ದುರಂತ

ಅಂಕೋಲಾ: ಗೆಳೆಯರೊಂದಿಗೆ ಸಮುದ್ರ ತೀರಕ್ಕೆ ಬಂದಿದ್ದ ಯುವಕನೋರ್ವ, ನೀರಿನಲ್ಲಿ ಆಟವಾಡಲು ಹೋಗಿ, ಅಲೆಗಳ ರಭಸದ ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋದ ಬಳಿಕ ಮಾರನೇ ದಿನ ಮೃತದೇಹವಾಗಿ ಪತ್ತೆಯಾದ ಘಟನೆ ಘಟನೆ ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾ.ಪಂ ವ್ಯಾಪ್ತಿಯ ನದಿಭಾಗದಲ್ಲಿ ದಲ್ಲಿ ನಡೆದಿದೆ. ಹುಬ್ಬಳ್ಳಿಯ ಹೆಗ್ಗೇರಿ ಮಾರುತಿನಗರದ ನಿವಾಸಿ ನಿಜಾಮುದ್ಧೀನ ದಾದಾಪೀರ ಮುಲ್ಲಾ (26) ಎಂಬಾತನೇ ನೀರಿನಲ್ಲಿ ಕೊಚ್ಚಿಹೋಗಿದ್ದ ದುರ್ದೈವಿಯಾಗಿದ್ದ.
ಜೆ ಸಿ ಬಿ ಕೆಲಸ ಮಾಡುತ್ತಿದ್ದ ಎನ್ನಲಾದ ಈತ, ತನ್ನ ಮೂರ್ನಾಲ್ಕು ಗೆಳೆಯರೊಂದಿಗೆ ಸೇರಿ ನದಿಭಾಗದ ಕೋಡಿ ಬೀಚ್ ಬಳಿ ಸಮುದ್ರ ತೀರಕ್ಕೆ ಬಂದವನು, ಅಲ್ಲಿ ಹಳ್ಳ ಮತ್ತು ಸಮುದ್ರ ಸಂಗಮದಲ್ಲಿ ತೇಲಾಡುತ್ತಿದ್ದ ಕಟ್ಟಿಗೆಯೊಂದರ ಮೇಲೆ ಕುಳಿತು ತಾನು ಸಹ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ, ಸಮುದ್ರ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಎನ್ನಲಾಗಿತ್ತು. ಸ್ವಲ್ಪ ಸುಡು ಬಿಸಿಲಿನ ವಾತಾವರಣದ ನಡುವೆ ಸಂಜೆಗೂ ಪೂರ್ವ ಈ ಘಟನೆ ಸಂಭವಿಸಿದ್ದು, ಈ ವೇಳೆ,ಬೀಚ್ ಬಳಿ ಸ್ಥಳೀಯರು ಹಾಗು ಇತರರಾರೂ ಹತ್ತಿರದಲ್ಲಿ ಇರದಿರುವುದರಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಮಾಹಿತಿ ತಿಳಿದ ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ,ಪಿಎಸ್ಐ ಉದ್ದಪ್ಪ ಧರಪ್ಪನವರ್ ಹಾಗೂ ಸಿಬ್ಬಂದಿಗಳು ಮತ್ತು ಬೆಲೆಕೇರಿ ಕರಾವಳಿ ಕಾವಲು ಪಡೆ ಪಿ ಎಸ್ ಐ ರಾಜು ಕೋಗ್ರೆ ಮತ್ತು ಸಿಬ್ಬಂದಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸಂಜೆಯ ಮಬ್ಬು ಕತ್ತಲು, ಸುರಿದ ಮಳೆ ಮತ್ತಿತರ ಕಾರಣಗಳಿಂದ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಶೋಧ ಕಾರ್ಯ ರವಿವಾರ ಸಾಧ್ಯವಾಗಿರಲಿಲ್ಲ. ಮಾರನೇ ದಿನ ಅದೇ ಯುವಕ ಘಟನೆ ಸಂಭವಿಸಿದ ಸ್ಥಳದ ಹತ್ತಿರದಲ್ಲೇ ಇರುವ ಹೊನ್ನೆಗುಡಿ ಬೀಚ್ ಬಳಿ ಮೃತದೇಹವಾಗಿ ಪತ್ತೆಯಾಗಿದ್ದಾನೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯ ಕುಮಾರ ನಾಯ್ಕ ಹಾಗೂ ರಿಜ್ವಾನ ಮತ್ತು ಸ್ಥಳೀಯರಾದ ಚಂದ್ರಕಾAತ ನಾಯ್ಕ, ಪ್ರವೀಣ ನಾಯ್ಕ್ ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು, ಹುಬ್ಬಳ್ಳಿಯ ಇತರರು ಸಹಕರಿಸಿದರು. ದೂರ ದೂರಿಂದ ಬರುವ ಪ್ರವಾಸಿಗರ ಪೈಕಿ ಕೆಲವರು, ಆಳ ಮತ್ತು ನೀರಿನ ಹರಿವು ಅಂದಾಜಿಸಲಾಗದೇ ನೀರಲ್ಲಿ ಇಳಿದು ತದನಂತರ ಅವಘಡಗಳಿಗೆ ತುತ್ತಾಗುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ