ಗ್ರಾಮಸ್ಥರಿಂದಲೇ ನಿರ್ಮಾಣವಾಯಿತು ಬಸ್ ನಿಲ್ದಾಣ

ಸಮಸ್ಯೆಗೆ ಸ್ಪಂದಿಸದ ಸಂಬಂಧಪಟ್ಟವರು
ತಾವೇ ಮಾಡಿ ತೋರಿಸಿ ಮಾದರಿಯಾದ ಗ್ರಾಮಸ್ಥರು

ಯಲ್ಲಾಪುರ: ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ನೆರವಾಗುವ ದೃಷ್ಠಿಯಿಂದ ಸರಕಾರದಿಂದ ಆಗದ ಕೆಲಸವನ್ನು ಸರ್ಕಾರದ ಧನ ಸಹಾಯ ಪಡೆಯದೇ ತಾಲೂಕಿನ ಹೊಸಳ್ಳಿಯಲ್ಲಿ ಗ್ರಾಮಸ್ಥರೇ ಸ್ವತಃ ಬಸ್ ತಂಗುದಾಣವನ್ನು ನಿರ್ಮಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.

ಹುಬ್ಬಳ್ಳಿ-ಯಲ್ಲಾಪುರ ಮಾರ್ಗದಲ್ಲಿ ಹೊಸಳ್ಳಿ ಸಮೀಪ ಯಾವುದೇ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಕುರಿತು ಹಲವು ವರ್ಷಗಳಿಂದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತು ಜನರೇ ಉಸಕು, ಕಲ್ಲು, ಸಿಮೆಂಟ್ ಇತ್ಯಾದಿ ಅಗತ್ಯ ಸಾಮಾನುಗಳನ್ನು ಹೊಂದಿಸಿದ್ದು, ಗ್ರಾಮಸ್ಥರೇ ಕೇವಲ ಒಂದು ವಾರದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ತಂಗುದಾಣವನ್ನು ನಿರ್ಮಿಸಿದ್ದಾರೆ.

ಶಿಕ್ಷಕ ನಾರಾಯಣ ಕಾಂಬಳೆ ಇದಕ್ಕೆ ಮಾರ್ಗದರ್ಶನ ನೀಡಿದ್ದು, ತಂಗುದಾಣದಲ್ಲಿ ಊರಿನ ಸಂಸ್ಕೃತಿ, ಬೇಸಾಯ ಮತ್ತು ಹಾಲು ಉತ್ಪಾದನೆ ಕೇಂದ್ರದ ಚಿತ್ರಗಳನ್ನು ಬಿಡಿಸಿರುವುದು ಗಮನಾರ್ಹವಾಗಿದೆ.

ಈ ಬಗ್ಗೆ ಜೈ ಭೀಮ ಸ್ವಾಭಿಮಾನ ಬಳಗದ ಜಿಲ್ಲಾಧ್ಯಕ್ಷ ಸುನಿಲ್ ಕಾಂಬಳೆ ಹೊಸಳ್ಳಿ ಪ್ರತಿಕ್ರಿಯಿಸಿ, ಊರ ಜನರೇ ಹಣ, ಅಗತ್ಯ ಸಾಮಗ್ರಿ ಕೂಡಿಸಿ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಮುಂದೆಯೂ ಕೂಡ ಮಾದರಿ ಕಾರ್ಯ ಮಾಡಲು ಯುವಕರು ಹಾಗೂ ಊರಿನ ಹಿರಿಯರು ಉತ್ಸಾಹದಲ್ಲಿದ್ದಾರೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Exit mobile version