ಸುವರ್ಣಾ ಮಯ್ಯರ್ ಅವರಿಗೆ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಪುರಸ್ಕಾರ

ಕುಮಟಾ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ವತಿಯಿಂದ 2021 ಜನವರಿ 10ರ ಭಾನುವಾರ ಜ್ಞಾನ ಕಾಶಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿರಿವಂತೆಯ ಚಿತ್ರಸಿರಿ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಸಾಗರ ತಾಲ್ಲೂಕು ಘಟಕಗಳ ಪದಗ್ರಹಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ‌ ಸರಸ್ವತಿ ವಿದ್ಯಾಕೇಂದ್ರದ ಶಿಕ್ಷಕಿ, ಸಾಹಿತಿ ಸುವರ್ಣಾ ಮಯ್ಯರ್ ಅವರಿಗೆ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಪುರಸ್ಕಾರ 2020 ನೀಡಿ ಗೌರವಿಸಲಾಗಿದೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯವರು ಆನ್ ಲೈನ್ ಮೂಲಕ ನಡೆಸಿದ್ದ ಕವನ ರಚನೆ ಹಾಗೂ ಇನ್ನಿತರ ಸ್ಪರ್ಧೆಯಲ್ಲಿ ಅವರು ಭಾಗವಹಿಸಿ ಬಹುಮಾನ ಪಡೆದಿದ್ದರು.ಸಾಹಿತಿಗಳಾದ ಕೊಪ್ಪಳ ಜಿಲ್ಲೆಯ ಅನಸೂಯಾ ಜಹಗೀರದಾರ ಅವರಿಗೆ ಕುವೆಂಪು ಸಾಹಿತ್ಯ ಪುರಸ್ಕಾರ, ಧಾರವಾಡ ಜಿಲ್ಲೆಯ ಲಕ್ಷ್ಮಿಕಾಂತ್ ಇಟ್ನಾಳ್ ಅವರಿಗೆ ಡಾ. ಯು. ಆರ್. ಅನಂತಮೂರ್ತಿ ಸಾಹಿತ್ಯ ಪುರಸ್ಕಾರ, ಶಿವಮೊಗ್ಗ ಜಿಲ್ಲೆಯ ಹ.ಸಾ. ಹಸನ್ ಅವರಿಗೆ ಡಾ. ಹಾ. ಮಾ. ನಾಯಕ ಸಾಹಿತ್ಯ ಪುರಸ್ಕಾರ ಹಾಗೂ ತುಮಕೂರು ಜಿಲ್ಲೆಯ ಲತಾಮಣಿ ಎಂ. ಕೆ. ತುರುವೇಕೆರೆ ಅವರಿಗೆ ಡಾ. ನಾ. ಡಿಸೋಜ ಸಾಹಿತ್ಯ ಪುರಸ್ಕಾರ ನೀಡಿ ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗಿದೆ.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ನಾಡಿನ ಖ್ಯಾತ ಸಾಹಿತಿ ಡಾ. ನಾ. ಡಿಸೋಜ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಸಹ ಕಾರ್ಯದರ್ಶಿ ಕುಮುದ ಬಿ.ಸುಶೀಲಪ್ಪ, ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪತ್ರಿಕಾ ಕಾರ್ಯದರ್ಶಿ ಜಿ.ಜೆ. ನರಸಿಂಹ ಮೂರ್ತಿ, ಜಿಲ್ಲಾಧ್ಯಕ್ಷರಾದ ಡಾ. ಹಸೀನಾ ಎಚ್.ಕೆ, ತಾಲ್ಲೂಕು ಅಧ್ಯಕ್ಷರಾದ ಚಂದ್ರಶೇಖರ್ ಸಿರಿವಂತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಕುಮಟಾ

Exit mobile version