
ಅಂಕೋಲಾ : ಜನವಸತಿ ಪ್ರದೇಶಕ್ಕೆ ಬಂದ ಚಿರತೆಯೊಂದು ಯುವಕ ನ ಮೇಲೆ ದಾಳಿ ಮಾಡಿದ ಘಟನೆ ಆಗಸೂರು – ವಾಸರ ಕುದ್ರಿಗೆ ಗ್ರಾಪಂ ವ್ಯಾಪ್ತಿಯ ಉಳಗದ್ದೆಯಲ್ಲಿ ಜೂನ್ 14 ರ ಶನಿವಾರ ಸಂಭವಿಸಿದೆ. ಸಂತೋಷ ಹೂವಣ್ಣ ಗೌಡ (24 ) ಚಿರತೆ ದಾಳಿಗೊಳಗಾದ ಯುವಕನಾಗಿದ್ದಾನೆ. ಮುಕ್ತಾಯ ಹಂತದಲ್ಲಿರುವ ಇವರ ಕುಟುಂಬದ ಇನ್ನೊಂದು ಹೊಸ ಮನೆಯಲ್ಲಿ ಸಂಬಂಧಿ ಹುಡುಗಿ ಒರ್ವಳು ಓಣ ಹಾಕಿದ್ದ ಬಟ್ಟೆ ತರಲೋ ಅಥವಾ ಬೇರೆ ಯಾವುದೋ ಕಾರಣದಿಂದ ಒಳ ಹೋದಾಗ ಅಲ್ಲಿ ಚಿರತೆ ಅವಿತಿರುವುದನ್ನು ಕಂಡು ಕ್ಷಣ ಕಾಲ ಅವಕ್ಕಾಗಿ ಹೆದರಿಕೆಯಿಂದ ಕೂಗಿ ಕೊಂಡಿದ್ದಾಳೆ.
ಈ ವೇಳೆ ಹತ್ತರದಲ್ಲೇ ಇದ್ದ ಸಂತೋಷ ಮತ್ತು ಕುಟುಂಬದವರು ಒಳ ಹೋಗ ಬೇಕೆನ್ನುವಷ್ಟರಲ್ಲಿ, ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ತಕ್ಷಣ ಆತನ ಕುಟುಂಬದ ಹಿರಿಯರು ಮತ್ತು ಕಿರಿಯರು ಪಕ್ಕಕ್ಕೆ ಸರಿದು ದಾಳಿಯಿಂದ ತಪ್ಪಿಸಿಕೊಂಡರಾದರೂ, ಆಕಸ್ಮಿಕವಾಗಿ ಯುವಕ ಚಿರತೆ ದಾಳಿಗೆ ಸಿಲುಕಿದ್ದಾನೆ. ಅಕ್ಕ ಪಕ್ಕದವರೂ ಸಹ ಜಮಾಯಿಸಿದ ಸದ್ದು ಕೇಳಿ ಚಿರತೆ ಅಲ್ಲಿಂದ ನೆಗೆದು ಒಡಿ ಹೋಗಿದೆ. ಯುವಕನ 2 ಕೈ ಗಳಿಗೆ ಪರಚಿದ ಗಾಯಗಳಾಗಿದ್ದು, ಅದೃಷ್ಟ ವಶಾತ್ ಯುವಕ ಸಂಭವನೀಯ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾನೆ.
ಕೂಡಲೇ ಆತನನ್ನು ಆಟೋ ರಿಕ್ಷ ಮೂಲಕ ತಾಲೂಕಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ. ಸಿಪಿಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ಸಂಗ್ರಹಿಸಿ, ಆರೋಗ್ಯ ವಿಚಾರಿಸಿ , ಧೈರ್ಯ ತುಂಬಿದರು. ಕಳೆದ ವರ್ಷದಿಂದೀಚೆಗೆ ಚಿರತೆ ಆಗಾಗ ಜನವಸತಿ ಪ್ರದೇಶಕ್ಕೆ ಬಂದು , ಕೋಳಿ , ನಾಯಿ ಮತ್ತಿತರ ಸಾಕು ಪ್ರಾಣಿಗಳನ್ನು ಹೊತ್ತೊಯ್ದಿದ್ದು ,ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದೆವು. ಆದರೆ ಈ ಬಾರಿ ಚಿರತೆ ಮನೆಯೊಳಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡಿರುವುದು ನಮ್ಮ ಆತಂಕ ಹೆಚ್ಚಿಸಿದ್ದು, ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ , ಮುಂದೆ ಮತ್ತೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಂಡು ಜನ – ಜಾನುವಾರಗಳ ರಕ್ಷಣೆ ಮಾಡಲಿ ಎಂದು ಸ್ಥಳೀಯ ಪ್ರಮುಖ ಹೊನ್ನಪ್ಪ ನಾರಾಯಣ ನಾಯ್ಕ ಮತ್ತಿತರರು ಆಗ್ರಹಿಸಿದ್ದಾರೆ.
ಪರಚಿದ ಗಾಯ ದೊಡ್ಡದಲ್ಲ ಎಂದು ನಿರ್ಲಕ್ಷಿಸದೇ ಸಂಬಂಧಿತ ಅಧಿಕಾರಿಗಳು ನಾಗರಿಕ ಸುರಕ್ಷತೆಗೆ ಒತ್ತು ನೀಡುವುದರೊಂದಿಗೆ , ಚಿರತೆ ದಾಳಿಗೊಳಗಾದ ಬಡ ಕೂಲಿ ಯುವಕನಿಗೆ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ನೀಡಿ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ ಎಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ