
ಅಂಕೋಲಾ : ಸರಿಸುಮಾರು ಐದು ದಶಕಗಳಿಗೂ ಮಿಕ್ಕಿ ಯಕ್ಷಗಾನ ಕಲಾಭೂಮಿಕೆಯಲ್ಲಿ ರಾಜಹಾಸ್ಯಗಾರರಾಗಿ ಮೆರೆದ ಕಿನ್ನಿಗೋಳಿ ಮುಖ್ಯಪ್ರಾಣರವರು ಕಾಲನ ಕರೆಗೆ ಓಗೊಟ್ಟು ಇಹ ಯಾತ್ರೆಯನ್ನು ಸಂಪನ್ನಗೊಳಿಸಿರುವುದು ಅರಗಿಸಿಕೊಳ್ಳಲಾಗದ ವಿಷಯವೆಂದು ಯಕ್ಷಮುಖಿಯ ಗೌರವ ಸಲಹೆಗಾರರಾದ ಅಂಕೋಲಾದ ನವ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿರುವ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರು ಬಾವುಕರಾಗಿ ನುಡಿದರು.
ಅವರು ಅಂಕೋಲಾದ ಜಮಗೋಡಿನಲ್ಲಿನ ಯಕ್ಷಮುಖಿಯ ಸಂಚಾಲಕರಾದ ರಾಜೇಶ ನಾಯಕ ಸೂರ್ವೆಯವವರ ಮನೆಯಂಗಳದಲ್ಲಿ ಆಯೋಜಿಸಿದ ” ಭಾವ ನಮನ “- ಕಾರ್ಯಕ್ರಮದಲ್ಲಿ ಅಗಲಿದ ಕಿನ್ನಿಗೋಳಿಯವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿ, ಮಾತನಾಡಿದರು.
ಕಿನ್ನಿಗೋಳಿಯವರು ಕೀರ್ತಿಶೇಷ ಕಾಳಿಂಗ ನಾವುಡರ ಹಾಗೂ ಸುಬ್ರಹ್ಮಣ್ಯ ಧಾರೇಶ್ವರರ ಭಾಗವತಿಕೆಯಲ್ಲಿ ಯಕ್ಷರಂಗದಲ್ಲಿ ಬಾಳಿಕೆಯ ಹಾಸ್ಯ ಕಲಾವಿದರಾಗಿ ವಿಜೃಂಭಿಸಿದವರು. ಬೇಡದ್ದನ್ನು ಆಡದೇ- ಅಲ್ಲದ್ದನ್ನು ಮಾಡದೇ, ಎಳ್ಳಷ್ಟೂ ಅಳತೆಯನ್ನು ಮೀರದೇ, ರಾಜಹಾಸ್ಯದ ನಡೆಯಿಂದ ಪ್ರಬುದ್ಧವಾಗಿ ಪಾತ್ರ ಪೋಷಣೆಯನ್ನು ಮಾಡುತ್ತ ಸೈನಿಸಿದವರು.
ಭೀಷ್ಮ ಪ್ರತಿಜ್ಞೆಯ ದಾಸರಾಜ, ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಪಾಪಣ್ಣ ವಿಷಯದ ಪಾಪಣ್ಣ, ನಳ ಚರಿತ್ರೆಯ ಭಾವಕ, ಸಂಪೂರ್ಣ ನಾಗಶ್ರೀಯ ಕೈರವ ಹಾಗೂ ಚಾರುಚಂದ್ರಿಕೆಯ ಅಪ್ಪು ಶೆಟ್ಟಿ – ಮೊದಲಾದ ಪೌರಾಣಿಕ ಮತ್ತು ನೂತನ ಪ್ರಸಂಗಗಳ ಪಾತ್ರಗಳಿಗೆ ತನಗೆ ತಾನೆ ಸಾಟಿಯಾಗಿದ್ದವರು. ಯಕ್ಷ ಜಗತ್ತು ಎಂದೂ ಮರೆಯದ ಕುಂಜಾಲು ರಾಮಕೃಷ್ಣ ನಾಯಕ, ಸಾಲ್ಕೋಡ ಗಣಪತಿ ಹೆಗಡೆ ಹಾಗೂ ಜೈರಾಮ ಆಚಾರ್ ರಂತಹ ಶ್ರೇಷ್ಠ ಹಾಸ್ಯಗಾರರ ಪಂಕ್ತಿಗೆ ಸೇರಿದ ಚರಿತ್ರೆಯನ್ನು ಸೃಜಿಸಿದ ಮಹಾನ್ ಕಲಾವಿದರೆಂದು ಅವರು ಹೇಳಿದರು.
ಯಕ್ಷಮುಖಿಯ ಸಂಚಾಲಕರಾದ ರಾಜೇಶ ನಾಯಕ ಸೂರ್ವೆಯವರು ಮಾತನಾಡಿ, ಕಿನ್ನಿಗೋಳಿಯವರ ಸ್ವರಲಾಲಿತ್ಯ, ಬಾವಾಭಿನಯ, ಅವರಿವರನ್ನದೇ ಎಲ್ಲ ಪಾತ್ರಧಾರಿಗಳೊಂದಿಗೆಯೂ ಏಕಪ್ರಕಾರವಾಗಿಯೇ ತಮ್ಮ ಪಾತ್ರವನ್ನು ತೆರೆದಿಡುವ ವಿನ್ಯಾಸದಿಂದ, ಎಂದೋ ನೋಡಿದ ಅವರ ಪಾತ್ರಗಳೆಲ್ಲಾ ಇಂದೇ ನೋಡುತ್ತಿದ್ದಂತಿವೆ. ಇದು ಕಿನ್ನಿಗೋಳಿಯವರ ಜೀವಂತಿಕೆಗೆ ಸಾಕ್ಷಿಯಾಗಿದೆ. ಇಂತಹ ಕಲಾವಿದನು ಮಾತ್ರ ಭೌತಿಕವಾಗಿ ಅಳಿದರೂ ಪ್ರೇಕ್ಷಕನ ಅಂತರಾಳದಲ್ಲಿ ಎಂದೆಂದೂ ಉಳಿಯಲು ಸಾಧ್ಯ ಎಂದರು.
ಯಕ್ಷಮುಖಿಯ ಸದಸ್ಯರಾದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ, ಯಕ್ಷಗಾನದ ಅಭ್ಯಾಸಿಗಳಾದ ಸುಜನ ಅಗಸೂರ ಹಾಗೂ ಪನ್ನಗ ಮೊದಲಾದವರು ಕಿನ್ನಿಗೂಳಿಯವರಿಗೆ ನುಡಿ ಗೌರವವನ್ನು ಸಲ್ಲಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ