ಸಮುದ್ರ ಹಿನ್ನೀರಿನ ಪ್ರದೇಶಗಳಲ್ಲಿ ಕೃಷಿ ಕಾರ್ಯಕ್ಕೆ ಹಿನ್ನಡೆ ತಪ್ಪಿಸಲು ಯೋಜನೆ: ಕುಡಿಯುವ ನೀರಿನ ಬವಣೆ ತಪ್ಪಿಸಲು ಬಹುಕೋಟಿ ವೆಚ್ಚದ ಖಾರ್ಲ್ಯಾಂಡ್ ಕಾಮಗಾರಿಗೆ ಅಂಕೋಲಾದಲ್ಲಿ ಚಾಲನೆ

ಅಂಕೋಲಾ: ಸಮುದ್ರ ಹಿನ್ನೀರಿನ ಪ್ರದೇಶಗಳಲ್ಲಿ ಕೃಷಿ ಕಾರ್ಯಕ್ಕೆ ಆಗುತ್ತಿರುವ ಹಿನ್ನಡೆ ಮತ್ತು ಕುಡಿಯುವ ನೀರಿನ ಬವಣೆ ತಪ್ಪಿಸಲು ಬಹುಕೋಟಿ ವೆಚ್ಚದ ಖಾರ್ಲ್ಯಾಂಡ್ ಕಾಮಗಾರಿ ಮೂಲಕ ನಾಲ್ಕು ಗ್ರಾಮ ಪಂಚಾಯತಿ ಹಾಗೂ ಪುರಸಭೆ ವ್ಯಾಪ್ತಿಗೊಳಪಡುವ ಕೆಲ ನಿವಾಸಿಗಳೂ ಸೇರಿ ಸಾವಿರಾರು ಜನರಿಗೆ ಅನುಕೂಲ ಒದಗಿಸುವ ಕಾಮಗಾರಿಗೆ ಶಾಸಕಿ ರೂಪಾಲಿ ನಾಯ್ಕ ಸ್ಥಳೀಯ ಪ್ರಮುಖರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಅಂಕೋಲಾ ತಾಲೂಕಿನ ಬೆಳಂಬಾರ ಮತ್ತು ಬೊಬ್ರುವಾಡಾ ಗ್ರಾಪಂ ವ್ಯಾಪ್ತಿಯ ನದಿಭಾಗದ ಗಡಿಪ್ರದೇಶದಲ್ಲಿ ಸಮುದ್ರ ಮತ್ತು ಹಳ್ಳದ ಸಂಗಮ ಪ್ರದೇಶವಿದೆ. ಸಮುದ್ರ ಹಿನ್ನೀರಿನ ಒತ್ತಡಕ್ಕೆ ಹಳ್ಳ ದ ನೀರೂ ಉಪ್ಪಾಗಿ ಸುತ್ತಮುತ್ತಲ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಗೂ ಪುರಸಭೆ ವ್ಯಾಪ್ತಿಯ ಕೆಲ ಜಮೀನುಗಳ ಅಂತರ್ಜಲವು ಉಪ್ಪಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಬಳಕೆಗೆ ತೊಂದರೆಯಾಗುತ್ತಿದೆ.

ಅಲ್ಲದೇ ಸಮುದ್ರದ ನೈಸರ್ಗಿಕ ಏರಿಳಿತದ ಪರಿಣಾಮ ಉಪ್ಪು ನೀರು ಅಕ್ಕ ಪಕ್ಕದ ಕೃಷಿ ಭೂಮಿಗೂ ನುಗ್ಗಿ ಕೃಷಿ ಕಾರ್ಯ ನಡೆಸಲು ತೊಂದರೆಯಾಗುವoತಾಗಿದೆ.ಖಾರಲ್ಯಾoಡ್ ನಿರ್ಮಾಣದಿಂದ ಬೆಳಂಬಾರ, ಬೊಬ್ರುವಾಡ, ವಂದಿಗೆ ಮತ್ತು ಶೆಟಗೇರಿ ಗ್ರಾಮ ಪಂಚಾಯತದ ಹತ್ತಾರು ಮಜಿರೆಗಳು ಮತ್ತು ಅಂಕೋಲಾ ಪುರಸಭೆ ವ್ಯಾಪ್ತಿಯ ಕೆಲ ಪ್ರದೇಶದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಬಹುಕೋಟಿ ವೆಚ್ಚದ ಈ ಕಾಮಗಾರಿಗೆ ಸ್ಥಳೀಯ ಪ್ರಮುಖರು ಹಾಗೂ ಜನಪ್ರತಿನಿಧಿಗಳೊಂದಿಗೆ ಶಾಸಕಿ ರೂಪಾಲಿ ನಾಯ್ಕ ಭೂಮಿ ಪೂಜೆ ನೆರವೇರಿಸಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ನದೀಭಾಗ ಬೆಳಂಬಾರ ವ್ಯಾಪ್ತಿಯಲ್ಲಿನ ಹಳ್ಳಕ್ಕೆ ರೂ.4 ಕೋ.75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಖಾರಲ್ಯಾಂಡ್ ಕಾಮಗಾರಿಗೆ ಮತ್ತು ಮುದ್ರಾಣಿ ಹತ್ತಿರ ಬೆಳಂಬಾರ ಹಳ್ಳದ ಎಡದಂಡೆಗೆ ಖಾರಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಕೃಷಿ ಜಮೀನಿಗೆ ಉಪ್ಪು ನೀರು ನುಗ್ಗಿ ಜಮೀನು ಬಂಜರ ಬೀಳುವಂತಾಗಿರುವುದು, ಸ್ಥಳೀಯರ ಕುಡಿಯುವ ನೀರು, ಮತ್ತಿತರ ಸಮಸ್ಯೆ ನಿವಾರಿಸಲು ಖಾರಲ್ಯಾಂಡ್ ನಿರ್ಮಾಣ ಒಂದು ಉತ್ತಮ ಪರಿಹಾರವಾಗಿದೆ.

ಸುಮಾರು ಆರು ದಶಕಗಳಿಗೂ ಹಿಂದೆ ರಾಮಕೃಷ್ಣ ಹೆಗಡೆಯವರ ಕಾಲಾವಧಿಯಲ್ಲಿ ಈ ಭಾಗದಲ್ಲಿ ಕೆಲ ಪ್ರಮಾಣದ ಕಾರ್ಲ್ಯಾಂಡ್ ಯೋಜನೆಯಿಂದ ಬಂಡು ನಿರ್ಮಿಸಿ ಸ್ಥಳೀಯ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು ಅದಾದ ನಂತರ ಬಂದ ಯಾವ ಸರ್ಕಾರವೂ ಬಂಡ್ ದುರಸ್ತಿ ಮತ್ತಿತರ ಅಭಿವೃದ್ಧಿಗೆ ಲಕ್ಷ ಕೊಡದೆ ಸ್ಥಳೀಯರು ತೊಂದರೆ ಪಡುತ್ತಿದ್ದರು. ಕರಾವಳಿ ಜನರ ಸಂಕಷ್ಟ ಅರಿತ ನಮ್ಮ ಬಿಜೆಪಿ ಸರ್ಕಾರದ ಈ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ,ನವರು ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮಾಧುಸ್ವಾಮಿ ಇವರ ಜನಪರ ಕಾಳಜಿ ಹಾಗೂ ಇಚ್ಚಶಕ್ತಿಯಿಂದ ನನ್ನ ಕ್ಷೇತ್ರದಲ್ಲಿ ಈಗಾಗಲೇ ನೂರು ಕೋಟಿ ರೂ. ಖಾರಲ್ಯಾಂಡ್ ಕಾಮಗಾರಿಗಳಿಗಾಗಿ ಅನುದಾನ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ತರಲಾಗುವದು ಹಾಗೂ ಈ ಭಾಗದ ಗ್ರಾಮಗಳ ಕುಡಿಯುವ ನೀರು, ರಸ್ತೆ ,ಮತ್ತಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು

ಬೊಬ್ರುವಾಡ, ಬೆಳಂಬಾರ, ಶೆಟಗೇರಿ, ವಂದಿಗೆ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಅಧಿಕಾರಿ ಹಾಗೂ ಸಿಬ್ಬಂದಿಗಳು,ಊರ ಪ್ರಮುಖರು,ಇತರೆ ಸಾರ್ವಜನಿಕರು ಪಾಲ್ಗೊಂಡಿದ್ದರು.ಸAಬAಧಿತ ಇಲಾಖೆಯ ಅಧಿಕಾರಿಗಳು ವಿಸ್ತೃತ ಯೋಜನೆಯ ಕುರಿತು ಜನರಿಗೆ ಮನಮುಟ್ಟುವಂತೆ ತಿಳಿಸಬೇಕೆಂಬ ಮಾತು ಸ್ಥಳೀಯ ಗ್ರಾಮ ಪಂಚಾಯತ್ ನವರಿಂದ ಕೇಳಿ ಬಂತು.ವಿವಿಧ ಪಂಚಾಯತ್ ವ್ಯಾಪ್ತಿಯ ಇಂತಹ ಯೋಜನೆಗಳ ಕುರಿತು ಸಚಿತ್ರ ವರದಿ ತೋರಿಸಿ ಅಧಿಕಾರಿಗಳು ಸಮಜಾಯಿಸಿ ನೀಡಿದರು.ಆದರೂ ಮತ್ತೊಮ್ಮೆ ಅವರಿಗೆ ಸರಿಯಾದ ಮಾಹಿತಿ ನೀಡಿ ಎಂದ ಶಾಸಕರು ಸೂಚಿಸಿದ ಹಿನ್ನಲೆಯಲ್ಲಿ ಸಮಗ್ರ ಮಾಹಿತಿ ನೀಡಲು ಅಧಿಕಾರಿಗಳು ಗುರುವಾರ ವಿಶೇಷ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version